
ಕಂಪ್ಲಿ: ಪರಿಶಿಷ್ಟ ಪಂಗಡದ ಸಾಂವಿಧಾನಿಕ ಹಕ್ಕುಗಳ ರಕ್ಷಣೆಗೆ ಆಗ್ರಹಿಸಿ ತಾಲ್ಲೂಕಿನ ವಾಲ್ಮೀಕಿ ಸಮುದಾಯದ ಮುಖಂಡರು, ಮಹಾಸಭಾ ಪದಾಧಿಕಾರಿಗಳು ಗುರುವಾರ ಶಾಸಕ ಜೆ.ಎನ್. ಗಣೇಶ್ ಅವರ ಮನೆ ಮುಂದೆ ಪ್ರತಿಭಟಿಸಿದರು.
ಉತ್ತರ ಕರ್ನಾಟಕ ಪ್ರದೇಶ ವಾಲ್ಮೀಕಿ ನಾಯಕ ಸಂಘದ ಅಧ್ಯಕ್ಷ ಮಾರೆಪ್ಪನಾಯಕ ಮಗದಂಪೂರ ಮಾತನಾಡಿ, ‘ಎಸ್.ಟಿ ನಾಯಕ, ನಾಯ್ಕಡ, ತಳವಾರ ಹೆಸರಿನಲ್ಲಿ ಹಿಂದುಳಿದ ಪ್ರವರ್ಗ-1ರ ಕೆಲವರು ನಕಲಿ ಜಾತಿ ಪ್ರಮಾಣ ಪತ್ರಗಳನ್ನು ಪಡೆಯುತ್ತಿದ್ದಾರೆ’ ಎಂದು ಆರೋಪಿಸಿದರು.
‘ಸುಳ್ಳು ಜಾತಿ ಪ್ರಮಾಣಪತ್ರ ನೀಡಿದ ಅಧಿಕಾರಿಗಳ ವಿರುದ್ಧ ಎಫ್.ಐ.ಆರ್ ದಾಖಲಿಸುವುದರ ಜತೆಗೆ ಸ್ವತಂತ್ರ ತನಿಖೆಗೆ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ ಸ್ವಯಂಪ್ರೇರಿತ ಪ್ರಕರಣ ದಾಖಲಿಸಬೇಕು’ ಎಂದು ಒತ್ತಾಯಿಸಿದರು.
ಶಾಸಕರ ಪರವಾಗಿ ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಷಣ್ಮುಖಪ್ಪ ಅವರಿಗೆ ಮನವಿ ಸಲ್ಲಿಸಿದರು.
ಎಸ್.ಸಿ, ಎಸ್.ಟಿ ನಕಲಿ ಜಾತಿ ಪ್ರಮಾಣಪತ್ರಗಳ ತಡೆ ಸಮಿತಿ ರಾಜ್ಯ ಅಧ್ಯಕ್ಷ ಶ್ರವಣಕುಮಾರ ಡಿ. ನಾಯಕ, ವಾಲ್ಮೀಕಿ ನಾಯಕ ಮಹಾಸಭಾ ಕಂಪ್ಲಿ ತಾಲ್ಲೂಕು ಅಧ್ಯಕ್ಷ ನೀರಗಂಟಿ ವೀರೇಶ, ಪ್ರಮುಖರಾದ ಬಿ. ವೆಂಕಟೇಶ, ವಾಲ್ಮೀಕಿ ಈರಣ್ಣ, ಸುಗ್ಗೇನಹಳ್ಳಿ ಜಡೆಪ್ಪ, ಡ್ರೈವರ್ ಈರಣ್ಣ, ಚಂದ್ರಶೇಖರ ಸೋಮಸಮುದ್ರ, ಬೆಳಗೋಡು ಬಸವರಾಜ, ಹೋರಾಟಗಾರರಾದ ವದ್ದಟ್ಟಿ ತಿಪ್ಪೇಸ್ವಾಮಿ, ಹಂದ್ರಾಳ್ ಮಲ್ಲಿಕಾರ್ಜುನ, ಸಿದ್ದಮ್ಮನಹಳ್ಳಿ ಬಸವರಾಜ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.