
ಸಿರುಗುಪ್ಪ: ಇಲ್ಲಿನ ಸಿದ್ದಪ್ಪ ನಗರದ ಹೊರವಲಯದಲ್ಲಿರುವ ನಗರಸಭೆಯ ಘನ ತ್ಯಾಜ್ಯ ವಿಲೇವಾರು ಘಟಕದ ಪಕ್ಕದಲ್ಲಿ ಸರ್ಕಾರದಿಂದ ನಿರ್ಮಿಸಲಾದ ನೂತನ ಪ್ರವಾಸಿ ಮಂದಿರವು ಕಾಮಗಾರಿ ಪೂರ್ಣಗೊಂಡು 6 ವರ್ಷ ಕಳೆದರೂ ಆರಂಭವಾಗಿಲ್ಲ.
ತಾಲ್ಲೂಕಿನ ಅಧಿಕಾರಿಗಳು ಹಾಗೂ ಸಾರ್ವಜನಿಕರ ಅನುಕೂಲಕ್ಕಾಗಿ 6 ವರ್ಷಗಳ ಹಿಂದೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರವಾಸಿ ಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆ ನೆರೆವೇರಿಸಿದ್ದರು. ಲೋಕೋಪಯೋಗಿ ಇಲಾಖೆಯಿಂದ ₹1.5ಕೋಟಿ ಅನುದಾನದಲ್ಲಿ 2019-20ನೇ ಸಾಲಿನಲ್ಲಿ ಹೊಸ ಕಟ್ಟಡ ನಿರ್ಮಾಣವಾಯಿತು. ಆದರೆ ಉದ್ಘಾಟನೆ ಆಗಿಲ್ಲ.
ಅನಾಥ ಕಟ್ಟಡ: ಕಾಂಪೌಂಡ್ ಇಲ್ಲ, ಆಸನಗಳಿಲ್ಲದೇ ಖಾಲಿ ಬಿದ್ದಿದೆ. ಕಿಡಿಗೇಡಿಗಳು ಮತ್ತು ಮದ್ಯವ್ಯಸನಿಗಳಿಗೆ ಆಶ್ರಯ ನೀಡಿದೆ. ಕೊಠಡಿಯ ಗಾಜಿನ ಕಿಟಕಿಗಳು, ಗೋಡೆಗಳಿಗೆ ಹಾಕಿದ ಟೈಲ್ಸ್ಗಳು, ಮೆಟ್ಟಿಲು ಹತ್ತಲು ಹಾಕಿದ ಸ್ಟಿಲ್ ಕಂಬಿಗಳು ಪುಂಡರ ಹಾವಳಿಯಿಂದಾಗಿ ಹಾನಿಯಾಗಿವೆ. ಎಲ್ಲೆಂದರಲ್ಲಿ ಮದ್ಯದ ಬಾಟಲಿಗಳು ಹಾಗೂ ಬೀಡಿ ಸಿಗರೇಟಿನ ಪ್ಯಾಕ್ಗಳು ರಾಶಿಯಾಗಿ ಬಿದ್ದಿವೆ. ಕೊಠಡಿಯು ದುರ್ನಾತ ಬೀರುತ್ತಿದೆ. ಕಟ್ಟಡವು ಅನೈತಿಕ ಚಟುವಟಿಕೆಗಳ ತಾಣವಾಗಿದೆ. ನಿರ್ವಹಣೆ ಇಲ್ಲದೆ ಅನಾಥವಾಗಿದೆ.
ರಾಜಕೀಯ ಇಚ್ಚಾಶಕ್ತಿಯ ಕೊರತೆಯಿಂದಾಗಿ ಸಿದ್ದಪ್ಪ ನಗರದಲ್ಲಿರುವ ಪ್ರವಾಸಿ ಮಂದಿರ ಕಟ್ಟಡ ಉದ್ಘಾಟನೆಯಾಗಿಲ್ಲ. 6 ವರ್ಷಗಳು ಕಳೆದಿದ್ದು, ಬಳಕೆಗೆ ಬಾರದೆ ಶಿಥಿಲಾವಸ್ಥೆ ತಲುಪಿದೆ. ಇದರಿಂದ ಸಾರ್ವಜನಿಕರ ಹಣ ವ್ಯರ್ಥವಾಗಿದೆ.
ಪ್ರವಾಸಿ ಮಂದಿರದ ಕಾಮಗಾರಿ ಅಪೂರ್ಣಗೊಂಡಿದ್ದು ಕೊಠಡಿಯೊಳಗೆ ಆಸನಗಳ ವ್ಯವಸ್ಥೆ ಬಾಕಿಯಿದೆ. ಆ ಕಟ್ಟಡ ಮೇಲೆ ₹2 ಕೋಟಿ ವೆಚ್ಚದಲ್ಲಿ ಮತ್ತೊಂದು ಕಟ್ಟಡ ನಿರ್ಮಿಸಿ ನಂತರ ಪ್ರಾರಂಭಗೊಳಿಸಲಾಗುವುದು.
ಎಚ್.ಚೆನ್ನನಗೌಡ. ಎಇಇ, ಲೋಕೋಪಯೋಗಿ ಇಲಾಖೆ, ಸಿರುಗುಪ್ಪ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.