ADVERTISEMENT

ಬೆಳಗಾವಿ| ದೇವಸ್ಥಾನಗಳಿಂದ ಊರಲ್ಲಿ ಶಾಂತಿ, ಸಮೃದ್ಧಿ: ಲಕ್ಷ್ಮೀ ಹೆಬ್ಬಾಳಕರ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2025, 4:18 IST
Last Updated 7 ಡಿಸೆಂಬರ್ 2025, 4:18 IST
ಬೆಳಗಾವಿ ಗ್ರಾಮೀಣ ಕ್ಷೇತ್ರದ ಕೊಂಡಸಕೊಪ್ಪ ಗ್ರಾಮದಲ್ಲಿ ನಿರ್ಮಿಸಿದ ದುರ್ಗಾದೇವಿ ಮಂದಿರವನ್ನು ಸಚಿವೆ ಲಕ್ಷ್ಮೀ ಹೆಬ್ಬಾಳಕರ ಉದ್ಘಾಟಿಸಿದರು
ಬೆಳಗಾವಿ ಗ್ರಾಮೀಣ ಕ್ಷೇತ್ರದ ಕೊಂಡಸಕೊಪ್ಪ ಗ್ರಾಮದಲ್ಲಿ ನಿರ್ಮಿಸಿದ ದುರ್ಗಾದೇವಿ ಮಂದಿರವನ್ನು ಸಚಿವೆ ಲಕ್ಷ್ಮೀ ಹೆಬ್ಬಾಳಕರ ಉದ್ಘಾಟಿಸಿದರು    

ಬೆಳಗಾವಿ: ‘ದೇವಸ್ಥಾನಗಳು ನಮ್ಮ ಸಂಸ್ಕೃತಿಯ ಭಾಗವಾಗಿದ್ದು, ಭಕ್ತಿ - ಭಾವನೆಯಿಂದ ನಡೆದುಕೊಂಡರೆ ಮನಸ್ಸು ಪರಿಶುದ್ಧವಾಗುತ್ತದೆ. ದೇವಸ್ಥಾನಗಳಿಂದ ಊರಿಗೆ ಅಭಿವೃದ್ಧಿ, ಸಮೃದ್ಧಿ, ಶಾಂತಿ ಲಭಿಸುತ್ತದೆ’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಹೇಳಿದರು.

ಬೆಳಗಾವಿ ಗ್ರಾಮೀಣ ಕ್ಷೇತ್ರದ ಕೊಂಡಸಕೊಪ್ಪ ಗ್ರಾಮದಲ್ಲಿ ನಿರ್ಮಿಸಿದ ದುರ್ಗಾದೇವಿ ಮಂದಿರವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದ ಅವರು, ‘ಕೊಂಡಸಕೊಪ್ಪ ಗ್ರಾಮದಲ್ಲಿ 4 ಗುಡಿಗಳನ್ನು ನಿರ್ಮಾಣ ಮಾಡಲಾಗಿದ್ದು, ಗ್ರಾಮೀಣ ಕ್ಷೇತ್ರದಲ್ಲಿ ಕಳೆದ 7 ವರ್ಷದಲ್ಲಿ 150ಕ್ಕೂ ಹೆಚ್ಚು ಗುಡಿಗಳನ್ನು ಜೀರ್ಣೋದ್ಧಾರ ಮಾಡುವ ಭಾಗ್ಯ ನನಗೆ ಸಿಕ್ಕಿದೆ. ಈ ಹಿಂದೆ ಇದ್ದವರ ಮೇಲೆ ನಾನು ಆರೋಪ ಮಾಡಲು ಹೋಗುವುದಿಲ್ಲ. ಆದರೆ ಅವರು ಅಭಿವೃದ್ದಿ ಕೆಲಸ ಮಾಡದ ಕಾರಣ ನನಗೆ ಇಂತಹ ಅವಕಾಶ ಸಿಕ್ಕಿದೆ’ ಎಂದರು.

ಗೃಹಲಕ್ಷ್ಮಿ ಸಹಕಾರಿ ಬ್ಯಾಂಕ್ ಸೇರ್ಪಡೆಗೆ ಮನವಿ: ‘ಎಲ್ಲರೂ ಗೃಹಲಕ್ಷ್ಮಿ ವಿವಿಧೋದ್ದೇಶ ಸಹಕಾರಿ ಬ್ಯಾಂಕ್ ಸದಸ್ಯರಾಗಬೇಕು. ಕಡಿಮೆ ಬಡ್ಡಿದರದಲ್ಲಿ ಎಲ್ಲರಿಗೂ ಸಾಲದ ಸೌಲಭ್ಯ ಸಿಗಲಿದ್ದು, ಎಲ್ಲ ರೀತಿಯ ಅನುಕೂಲ ಮಾಡಿಕೊಡಲಾಗುವುದು’ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ ಹೇಳಿದರು.

ADVERTISEMENT

‘ನಾನು ಬಸವ ತತ್ವದಲ್ಲಿ ಅಂಬೇಡ್ಕರ್ ತತ್ವದಲ್ಲಿ ವಿಶ್ವಾಸ ಇಟ್ಟಿದ್ದೇನೆ. ಚುನಾವಣೆ ಮುಗಿದ ನಂತರ ರಾಜಕಾರಣ ಮಾಡುವುದಿಲ್ಲ. ನಿಮ್ಮ ಬೆಂಬಲವೇ ನನಗೆ ಶಕ್ತಿ. ನಿಮ್ಮ ಶ್ರೇಯೋಭಿವೃದ್ಧಿಗೆ ನಿರಂತರವಾಗಿ ಕೆಲಸ ಮಾಡುವೆ’ ಎಂದರು.

ವಿಧಾನ ಪರಿಷತ್‌ ಸದಸ್ಯ ಚನ್ನರಾಜ ಹಟ್ಟಿಹೊಳಿ ಮಾತನಾಡಿ, ‘ಲಕ್ಷ್ಮೀ ಹೆಬ್ಬಾಳಕರ ಅವರು ಕ್ಷೇತ್ರವನ್ನು ಪರಿವಾರದ ರೀತಿಯಲ್ಲಿ ಪರಿಗಣಿಸಿ ಅಭಿವೃದ್ಧಿ ಮಾಡುತ್ತಿದ್ದಾರೆ. ದೇವಸ್ಥಾನದ ಜೀರ್ಣೋದ್ಧಾರ ಮಾಡುವ ಮೂಲಕ, ಗ್ರಾಮದ ಹಲವು ವರ್ಷಗಳ ಬೇಡಿಕೆ ಅವರಿಂದ ಈಡೇರಿದೆ’ ಎಂದರು.

ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ವಿಠ್ಠಲ ಸಾಂಬ್ರೆಕರ ಮಾತನಾಡಿದರು. ಬಡೇಕೊಳ್ಳಮಠದ ಶಿವಯೋಗಿ ನಾಗೇಂದ್ರ ಸ್ವಾಮಿಗಳು, ಸುರೇಶ ಕರಗುಪ್ಪಿಕರ್, ಗಂಗಾರಾಮ ಅಷ್ಟೇಕರ್, ವಿಠ್ಠಲ ಸಾಂಬ್ರೇಕರ್, ಸಿ.ಸಿ‌.ಪಾಟೀಲ, ಸಹದೇವ್ ಪೂಜೇರಿ, ಶ್ರೀಕಾಂತ ಪಾಟೀಲ, ರಾಮಾ ಸಾಂಬ್ರೇಕರ್, ಜ್ಯೋತಿಬಾ ಕುದ್ರೆಮನಿ, ಮನೋಹರ್ ಮುಚ್ಚಂಡಿ, ಪದ್ಮರಾಜ ಪಾಟೀಲ, ಅಡಿವೆಪ್ಪ ಡೊಳಗಾರ್, ಚಾರ್ಲಿ ಗವಳಿ, ಆಶಾ ಗುಡಮಟ್ಟಿ, ಭೀಮಸೇನ್ ಕರಗುಪ್ಪಿಕರ್ ಇತರರು ಇದ್ದರು.

ಈ ಮೊದಲು ಕ್ಷೇತ್ರ ಅಭಿವೃದ್ಧಿ ಕಂಡಿರಲಿಲ್ಲ. ಲಕ್ಷ್ಮೀ ಹೆಬ್ಬಾಳಕರ್ ಅವರಿಂದಾಗಿ ಗ್ರಾಮದ ಚಿತ್ರಣವೇ ಬದಲಾಗಿದೆ. ರಸ್ತೆ ಚರಂಡಿ ಕುಡಿಯುವ ನೀರಿನ ಸೌಲಭ್ಯ ನೀಡಿದ್ದಾರೆ
ವಿಠ್ಠಲ ಸಾಂಬ್ರೆಕರ ಉಪಾಧ್ಯಕ್ಷ ಕೊಂಡಸಕೊಪ್ಪ ಗ್ರಾಮ ಪಂಚಾಯಿತಿ
ಪ್ರಯತ್ನದ ಜೊತೆಗೆ ದೇವರ ಆಶೀರ್ವಾದ ಇದ್ದರೆ ಕೆಲಸ ಮಾಡಬಹುದು. ಎಲ್ಲ ಕೆಲಸಗಳಲ್ಲಿ ನಿಮ್ಮ ಜೊತೆಗೆ ಇರುತ್ತೇವೆ. ಲಕ್ಷ್ಮೀ ಹೆಬ್ಬಾಳಕರ ಪಕ್ಷಾತೀತ ನಾಯಕಿಯಾಗಿ ಬೆಳೆಯುತ್ತಿದ್ದಾರೆ
ಚನ್ನರಾಜ ಹಟ್ಟಿಹೊಳಿ ವಿಧಾನ ಪರಿಷತ್‌ ಸದಸ್ಯ

ಕ್ರೀಡಾ ಸಾಧಕರನ್ನು ಅಭಿನಂದಿಸಿದ ಸಚಿವೆ

ಜಿಲ್ಲಾ ಪಂಚಾಯಿತಿ ವತಿಯಿಂದ ಜಿಲ್ಲೆಯ ಗ್ರಾಮ ಪಂಚಾಯಿತಿ ಸಿಬ್ಬಂದಿಗೆ ಈಚೆಗೆ ಏರ್ಪಡಿಸಿದ್ದ ಕ್ರೀಡಾಕೂಟದಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದ ಬೆಳಗಾವಿ ತಾಲ್ಲೂಕು ಸಿಬ್ಬಂದಿಯನ್ನು ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅಭಿನಂದಿಸಿದರು. ‘ಗ್ರಾಮೀಣ ಕ್ಷೇತ್ರಕ್ಕೆ ಈ ವರ್ಷ ನೂರಾರು ಕೋಟಿ ರೂಪಾಯಿ ಅನುದಾನ ತಂದಿದ್ದೇನೆ. ಇದರಲ್ಲಿ ಒಂದಿಷ್ಟು ಟೆಂಡರ್‌ ಪ್ರಕ್ರಿಯೆ ಹಂತದಲ್ಲಿದೆ ಈಗಾಗಲೇ ₹40 ಕೋಟಿ ಮೊತ್ತದ ಕೆಲಸ ನಡೆಯುತ್ತಿದೆ. ಎಲ್ಲರೂ ಸೇರಿಕೊಂಡು ಕನಸಿನ ಬೆಳಗಾವಿ ಗ್ರಾಮೀಣ ಕ್ಷೇತ್ರ ರೂಪಿಸೋಣ’ ಎಂದರು. ವಿಧಾನ ಪರಿಷತ್‌ ಸದಸ್ಯ ಚನ್ನರಾಜ ಹಟ್ಟಿಹೊಳಿ ಮಾತನಾಡಿದರು. ಕಾಡಾ ಅಧ್ಯಕ್ಷ ಯುವರಾಜ ಕದಂ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಯಶವಂತ ಕುಮಾರ್‌ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.