
ಬೆಂಗಳೂರು: ಎಟಿಎಂ (ಆಟೊಮೇಟೆಡ್ ಟೆಲ್ಲರ್ ಮೆಷಿನ್) ಕಾರ್ಡ್ಗಳನ್ನು ಕದ್ದು, ಬ್ಯಾಂಕ್ ಖಾತೆಗಳಿಂದ ಹಣ ಲಪಟಾಯಿಸಿದ ಆರೋಪದಲ್ಲಿ ಜೈಲು ಶಿಕ್ಷೆಗೆ ಗುರಿಯಾಗಿದ್ದ ಇಬ್ಬರು ಅಪರಾಧಿಗಳ ಜೈಲು ವಾಸವನ್ನು ಈಗ ಅನುಭವಿಸಿರುವ ಶಿಕ್ಷೆಗೆ ಸಮಾಪ್ತಿಗೊಳಿಸಿರುವ ಹೈಕೋರ್ಟ್, ದಂಡದ ಮೊತ್ತವನ್ನು ಹೆಚ್ಚಿಸಿ ಆದೇಶಿಸಿದೆ.
‘ಧಾರವಾಡ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ಆದೇಶ ರದ್ದುಗೊಳಿಸಬೇಕು’ ಎಂದು ಕೋರಿ ಬಿಹಾರದ (ಸದ್ಯ ಹುಬ್ಬಳ್ಳಿ ನಿವಾಸಿಗಳು) ಸಹದೇವ ಪ್ರಸಾದ್ ಉರ್ಫ್ ಪ್ರಸಾದ್ ಮತ್ತು ಜಯಬಧಕುಮಾರ್ ಸಲ್ಲಿಸಿದ್ದ ಕ್ರಿಮಿನಲ್ ಮರುಪರಿಶೀಲನಾ ಅರ್ಜಿಗಳನ್ನು ನ್ಯಾಯಮೂರ್ತಿ ವಿ.ಶ್ರೀಶಾನಂದ ಅವರಿದ್ದ ಏಕಸದಸ್ಯ ನ್ಯಾಯಪೀಠ (ಧಾರವಾಡ) ಭಾಗಶಃ ಪುರಸ್ಕರಿಸಿದೆ.
‘ಜುಲ್ಮಾನೆ ಮೊತ್ತದಲ್ಲಿ, ಘಟನೆಯಿಂದ ಆರ್ಥಿಕ ನಷ್ಟ ಅನುಭವಿಸಿರುವ ಇಬ್ಬರು ದೂರುದಾರರಿಗೆ ತಲಾ ₹50 ಸಾವಿರ ಮತ್ತೊಬ್ಬರಿಗೆ ₹25 ಸಾವಿರ ಪಾವತಿಸಬೇಕು’ ಎಂದು ತಿಳಿಸಿರುವ ನ್ಯಾಯಪೀಠ, ಜುಲ್ಮಾನೆ ಮೊತ್ತದ ಪ್ರಮಾಣವನ್ನು ತಲಾ ₹2 ಲಕ್ಷಕ್ಕೆ ಹೆಚ್ಚಳ ಮಾಡಿ ಜೈಲು ಶಿಕ್ಷೆಯನ್ನು ರದ್ದುಪಡಿಸಿದೆ.
ಅರ್ಜಿದಾರರು, ಮಾಹಿತಿ ತಂತ್ರಜ್ಞಾನ ಕಾಯ್ದೆ–2008ರ ಕಲಂ 66(ಸಿ)(ವಿದ್ಯುನ್ಮಾನ ಸಹಿ, ಪಾಸ್ವರ್ಡ್ ಕಳವು) ಮತ್ತು ಭಾರತೀಯ ದಂಡ ಸಂಹಿತೆ–1860ರ ಕಲಂ 380ರ (ಮನೆಯಲ್ಲಿನ ವಸ್ತುಗಳ ಕಳವು) ಅಡಿಯಲ್ಲಿ 3 ವರ್ಷಗಳ ಶಿಕ್ಷೆ ಮತ್ತು ₹30 ಸಾವಿರ ಜುಲ್ಮಾನೆ ವಿಧಿಸಿ ವಿಚಾರಣಾ ನ್ಯಾಯಾಲಯ ನೀಡಿದ್ದ ಆದೇಶವನ್ನು ರದ್ದುಪಡಿಸುವಂತೆ ಕೋರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.