
ರಾಜರಾಜೇಶ್ವರಿನಗರ: ‘ಬಸವಣ್ಣನವರು ತತ್ವಜ್ಞಾನಿ, ಸಂತ, ಸಮಾಜ ಪರಿವರ್ತನೆಯ ಹರಿಕಾರ, ಶಿಕ್ಷಣ, ಸಮಾನತೆ ಲೋಕವನ್ನು ಶಿವಲೋಕ ಮಾಡುವಲ್ಲಿ ಮುಂದಾಗಿದ್ದರು’ ಎಂದು ಸಿದ್ದಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ ಹೇಳಿದರು.
ಎಂ.ಕೃಷ್ಣಸಾಗರದಲ್ಲಿ ಜಿ.ಎಸ್.ಸಾವಿತ್ರಮ್ಮ ಮತ್ತು ಕೆ.ಬಸವಯ್ಯ ಕುಟುಂಬದವರು ಹಮ್ಮಿಕೊಂಡಿದ್ದ ಬಸವ ಜಯಂತ್ಯುತ್ಸವ, ಶಿವಕುಮಾರ ಸ್ವಾಮೀಜಿ 118ನೇ ಜನ್ಮದಿನೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಬಸವಣ್ಣನವರು ಹಾಕಿಕೊಟ್ಟ ಹಾದಿಯಲ್ಲಿ ಬಸವೇಶ್ವರರ, ಶರಣ ಸಂದೇಶಗಳನ್ನು ಜಗತ್ತಿಗೆ ತಿಳಿಸುವ ಮೂಲಕ ನಾವೆಲ್ಲರೂ ಅವರ ಹಾದಿಯಲ್ಲಿ ನಡೆಯಬೇಕಾಗಿದೆ’ ಎಂದರು.
‘ಮನುಷ್ಯನಲ್ಲಿ ಎಲ್ಲವೂ ಇದೆ. ಒಳಿತನ್ನು ಬಯಸಬೇಕು, ಕೆಡುಕನ್ನು ತೊಡೆದುಹಾಕಿ, ದ್ವೇಷ, ಅಸೂಯೆ, ಧರ್ಮಗಳ ನಡುವೆ ಕಿತ್ತಾಟ, ಕೋಮುಭಾವನೆ ತೊಡೆದು ಹಾಕುವ ಮನುಷ್ಯರಾಗಿ ಬಾಳಬೇಕು. ಆಗ ಮಾತ್ರ ದೇಶ, ವಿಶ್ವದಲ್ಲಿ ಶಾಂತಿ ಸಿಗುತ್ತದೆ’ ಎಂದು ಹೇಳಿದರು.
ಬೇಲಿ ಮಠದ ಶಿವರುದ್ರ ಸ್ವಾಮೀಜಿ ಮಾತನಾಡಿ, ‘ಸಮಸಮಾನತೆ, ಸಮಸಮಾಜವನ್ನು ಗುರಿಯಾಗಿಟ್ಟುಕೊಂಡು ಮಾನವೀಯ ಮೌಲ್ಯದ ದಾರಿಯಲ್ಲಿ ಸಾಗಬೇಕಾಗಿದೆ. ಮೌಢ್ಯ, ಅಜ್ಞಾನ, ಕಂದಾಚಾರ, ಅಸೂಯೆ, ಕೀಳರಿಮೆ, ದೂರಮಾಡಿ ನಾವೆಲ್ಲರು ಮಾನವರು ಎಂದು ಬದುಕಬೇಕು’ ಎಂದರು.
ಶಾಸಕ ಎಸ್.ಟಿ. ಸೋಮಶೇಖರ್ ಅವರಿಗೆ ‘ಅಭಿವೃದ್ದಿಯ ಹರಿಕಾರ ಪ್ರಶಸ್ತಿ’ ಮತ್ತು ಗುರುಬಸವಯ್ಯ, ಸುರೇಶ್, ಮಹದೇವಸ್ವಾಮಿ, ದೇವೇಂದ್ರ, ಕೆ.ಎಸ್.ಉಮಾಶಂಕರ್, ಎಸ್.ಪರಮೇಶ್ ಅವರಿಗೆ ವಿವಿಧ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು.
ಎಸ್.ಟಿ.ಸೋಮಶೇಖರ್ ಮಾತನಾಡಿ, ‘ಬಸವಣ್ಣ, ಶಿವಕುಮಾರ ಸ್ವಾಮೀಜಿ ಅವರು ನೊಂದವರು, ತುಳಿತಕ್ಕೆ ಒಳಗಾದ, ರೈತರು, ಹೆಣ್ಣು ಮಕ್ಕಳು, ದಲಿತರು, ಅಲ್ಪಸಂಖ್ಯಾತರಿಗೆ ಜಾತಿ, ಧರ್ಮಮೀರಿ ಶಿಕ್ಷಣ, ಅನ್ನ ಆಶ್ರಯ ನೀಡಿದರು’ ಎಂದರು.
ದೇಗುಲ ಮಠದ ಚನ್ನಬಸವ ಸ್ವಾಮೀಜಿ, ಗದ್ದುಗೆಮಠದ ಮಹಾಂತ ಸ್ವಾಮೀಜಿ, ಸೂಲಿಕೆರೆಯ ಸಮಾಜ ಸೇವಕ ಎಸ್.ಆರ್.ಮೋಹನ್ಕುಮಾರ್, ಕರುನಾಡ ವಿಜಯಸೇನೆ ರಾಜ್ಯಘಟಕದ ಅಧ್ಯಕ್ಷ ಎಚ್.ಎನ್.ದೀಪಕ್, ದೇವಗೆರೆ ಡಿ.ವಿ.ರುದ್ರಮೂರ್ತಿ, ಆರ್.ಲಕ್ಷ್ಮಯ್ಯ, ಪಾರ್ವತಿದೇವಿ ಲಕ್ಷ್ಮಯ್ಯ, ರೈತ ಮುಖಂಡ ಕೋರಿ ಮಂಜುನಾಥ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.