
ಬೀದರ್ ನಗರದಲ್ಲಿ ಸಂಭ್ರಮದಿಂದ ಜಗನ್ನಾಥ ರಥಯಾತ್ರೆ
ಬೀದರ್: ನಗರದಲ್ಲಿ ಭಾನುವಾರ ಜಗನ್ನಾಥ ದೇವರ ರಥಯಾತ್ರೆ ಅತ್ಯಂತ ಸಡಗರ, ಸಂಭ್ರಮದಿಂದ ಜರುಗಿತು.
ರಾಂಪೂರೆ ಕಾಲೊನಿಯ ಲಕ್ಷ್ಮಿ ಸತ್ಯನಾರಾಯಣ ಮಂದಿರದಿಂದ ಆರಂಭಗೊಂಡ ರಥಯಾತ್ರೆ, ಬಿ.ವಿ. ಭೂಮರಡ್ಡಿ ಕಾಲೇಜು, ಬೊಮ್ಮಗೊಂಡೇಶ್ವರ ವೃತ್ತ, ಬಸವೇಶ್ವರ ವೃತ್ತ, ಭಗವಾನ್ ಮಹಾವೀರ ವೃತ್ತ, ಡಾ.ಬಿ.ಆರ್. ಅಂಬೇಡ್ಕರ್ ವೃತ್ತದ ಮೂಲಕ ಚಿಕ್ಕಪೇಟೆ ರಿಂಗ್ರೋಡ್ ನಲ್ಲಿರುವ ಜಗನ್ನಾಥ ಮಂದಿರದ ವರೆಗೆ ಸಾಗಿತು.
ಕಿರಿಯರಿಂದ ಹಿರಿಯರ ವರೆಗೆ ಎಲ್ಲರೂ ಶ್ರದ್ಧಾ, ಭಕ್ತಿಯಿಂದ ತೇರೆ ಎಳೆದರು. ‘ಜೈ ಜಗನ್ನಾಥ’ ಎಂದು ಘೋಷಣೆ ಹಾಕಿದರು. ಮಾರ್ಗದುದ್ದಕ್ಕೂ ಯುವತಿಯರು, ಮಹಿಳೆಯರು ಭಕ್ತಿಯಿಂದ ಹೆಜ್ಜೆ ಹಾಕಿದರು.
ಯುವಕರು ಶ್ವೇತ ವರ್ಣದ ಕುರ್ತಾ ಪೈಜಾಮ ಧರಿಸಿ ಗಮನ ಸೆಳೆದರೆ, ಮಹಿಳೆಯರು ಹಳದ ಬಣ್ಣದ ರವಿಕೆ, ಹಸಿರು ಬಣ್ಣದ ಸೀರೆಗಳಿಂದ ಕಂಗೊಳಿಸಿದರು. ರಥಯಾತ್ರೆಯುದ್ದಕ್ಕೂ ‘ಜೈ ಜಗನ್ನಾಥ, ಜೈ ಜಗನ್ನಾಥ’ ಎನ್ನುತ್ತ ಸಂಭ್ರಮಿಸಿದರು.
ರಥಯಾತ್ರೆ ಸಾಗಿದ ರಾಂಪೂರೆ ಕಾಲೊನಿಯ ಮುಖ್ಯರಸ್ತೆಯುದ್ದಕ್ಕೂ ಮಹಿಳೆಯರು ರಂಗೋಲಿ ಬಿಡಿಸಿದ್ದರು. ನಗರದ ಮೈಲೂರ ಕ್ರಾಸ್ನಲ್ಲಿ ವೇದಿಕೆ ನಿರ್ಮಿಸಿ, ರಥದ ಮೇಲೆ ಹೂಮಳೆಗರೆದು ಸ್ವಾಗತಿಸಲಾಯಿತು. ಪಾನಕ, ಪ್ರಸಾದ ವಿತರಿಸಲಾಯಿತು.
ಅಲಂಕರಿಸಿದ ರಥದಲ್ಲಿ ಬಲರಾಮ, ಸುಭದ್ರೆ ಮತ್ತು ಕೃಷ್ಣನ ಮೂರ್ತಿಗಳ ಶೋಭಾಯಾತ್ರೆ ನಡೆಯಿತು. ರಸ್ತೆಯುದ್ದಕ್ಕೂ ಭಕ್ತರು ಭಗವಂತನ ಮೇಲೆ ಪುಷ್ಪವೃಷ್ಟಿ ಮಾಡಿ, ಆರತಿ, ಕಾಯಿ ಕರ್ಪೂರ, ನೈವೇದ್ಯ ಸಮರ್ಪಿಸಿದರು. ರಥಯಾತ್ರೆಗೂ ಮುನ್ನ ಲಕ್ಷ್ಮಿ ಸತ್ಯನಾರಾಯಣ ಮಂದಿರದಲ್ಲಿ ವಿಶೇಷ ಪೂಜೆ ನೆರವೇರಿಸಿದರು.
ಉತ್ತರ ಪ್ರದೇಶದ ಇಸ್ಕಾನ್ ವೃಂದಾವನದ ಭಕ್ತಿ ಕಿಂಕರ ದಾಮೋದರ ಗೋಸ್ವಾಮಿ, ರಥಯಾತ್ರೆ ಉತ್ಸವ ಸಮಿತಿ ಗೌರವ ಅಧ್ಯಕ್ಷ ರಾಮಕೃಷ್ಣನ್ ಸಾಳೆ, ರಥಯಾತ್ರೆ ಸಮಿತಿ ಅಧ್ಯಕ್ಷ ಸೋಮಶೇಖರ ಪಾಟೀಲ ಗಾದಗಿ, ವೀರಶೆಟ್ಟಿ ಮಣಗೆ, ಶಿವರಾಮ ಜೋಷಿ, ರಾಜಕುಮಾರ ಅಳ್ಳೆ, ನಿಲೇಶ ದೇಶಮುಖ, ಸುನೀಲ ಶರ್ಮಾ ಮತ್ತಿತರರು ಹಾಜರಿದ್ದರು. ಸಂಜೆ ಜಗನ್ನಾಥ ಮಂದಿರದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.