
ಔರಾದ್: ‘ಗಡಿಭಾಗದಲ್ಲಿ ನಾವು ಕನ್ನಡ ಮಾತನಾಡಿ, ಇತರ ಭಾಷಿಕರಿಗೆ ಕನ್ನಡ ಕಲಿಸಬೇಕಾಗಿದೆ’ ಎಂದು ಸಾಹಿತಿ ಮಾಣಿಕ ನೇಳಗೆ ಹೇಳಿದರು.
ತಾಲ್ಲೂಕಿನ ಹೊಕ್ರಾಣಾ ಸರ್ಕಾರಿ ಪ್ರೌಢಶಾಲೆಯಲ್ಲಿ ಗುರುವಾರ ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ತಾಲ್ಲೂಕು ಆಡಳಿತ ಆಯೋಜಿಸಿದ್ದ ಕರುನಾಡು ಸಾಂಸ್ಕೃತಿಕ ಉತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ದ್ವೇಷದಿಂದ ಭಾಷೆ ಬೆಳೆಯುವುದಿಲ್ಲ. ಪರಸ್ಪರ ಪ್ರೀತಿಯಿಂದ ಭಾಷೆಯನ್ನು ಬೆಳೆಸಬೇಕು. ಅನ್ಯಭಾಷಿಕರು ಕಂಡಾಗ ಅವರೊಂದಿಗೆ ಕನ್ನಡದಲ್ಲಿ ಮಾತನಾಡಿ, ಅವರು ಕನ್ನಡ ಕಲಿಯುವಂತೆ ಪ್ರೇರಣೆ ನೀಡಬೇಕು. ಪ್ರತಿ ಮನ-ಮನೆಗಳಲ್ಲಿ ಕನ್ನಡದ ದೀಪ ಹಚ್ಚುವ ಕೆಲಸ ಆಗಬೇಕು’ ಎಂದು ಹೇಳಿದರು.
ಸಾರಿಗೆ ಸಂಸ್ಥೆ ಅಧಿಕಾರಿ ಅಣ್ಣಾರಾವ ಧೂಳಗುಂಡೆ ಮಾತನಾಡಿ, ‘ಕನ್ನಡ ಕೇವಲ ಭಾಷೆಯಲ್ಲ, ಅದು ಬದುಕು. ವಿದ್ಯಾರ್ಥಿಗಳು ಕನ್ನಡ ಕಲಿಯುವಿಕೆಯಿಂದ ಬದುಕು ಭದ್ರವಾಗುತ್ತದೆ. ಬದುಕಲು ಎಲ್ಲ ಭಾಷೆಗಳು ಬೇಕಿದ್ದರೂ ಕನ್ನಡಿಗರಿಗೆ ಉಸಿರು ನೀಡುವ ಭಾಷೆ ಮಾತ್ರ ಕನ್ನಡ’ ಎಂದು ತಿಳಿಸಿದರು.
ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಅಧ್ಯಕ್ಷ ಬಾಲಾಜಿ ಅಮರವಾಡಿ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಪಂಡರಿ ಆಡೆ ಮಾತನಾಡಿದರು. ಮುಖ್ಯಶಿಕ್ಷಕ ಶಿವಾಜಿ ಸಿಗ್ರೆ, ರಾಜಕುಮಾರ ನಾಯ್ಕವಾಡೆ, ಅಶೋಕ ಶೆಂಬೆಳ್ಳಿ, ಅಮರಸ್ವಾಮಿ ಸ್ಥಾವರಮಠ, ವಿನೋದ ರಾಠೋಡ, ಆನಂದ ಪವಾರ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.