ADVERTISEMENT

ಏರ್‌ಪೋರ್ಟ್‌ ಮಾದರಿಯಲ್ಲಿ ರೈಲು ನಿಲ್ದಾಣ: ವಿ. ಸೋಮಣ್ಣ

₹15 ಕೋಟಿಯ ಸರಕು ಸಾಗಣೆ ಶೆಡ್‌, ₹10 ಕೋಟಿಯ ಆರ್‌ಯುಬಿ ಶಂಕುಸ್ಥಾಪನೆ

​ಪ್ರಜಾವಾಣಿ ವಾರ್ತೆ
Published 31 ಮೇ 2025, 16:41 IST
Last Updated 31 ಮೇ 2025, 16:41 IST
   

ಖಾನಾಪೂರ (ಬೀದರ್‌): ಭಾಲ್ಕಿ ತಾಲ್ಲೂಕಿನ ಖಾನಾಪೂರ ರೈಲು ಜಂಕ್ಷನ್‌ನಲ್ಲಿ ಶನಿವಾರ ಸಂಜೆ ಏರ್ಪಡಿಸಿದ್ದ ಸಮಾರಂಭದಲ್ಲಿ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣನವರು ಹೊಸ ಸರಕು ಸಾಗಣೆ ಶೆಡ್‌ ಹಾಗೂ ಭಾಲ್ಕಿ ಸಮೀಪ ಉದ್ದೇಶಿತ ರೈಲ್ವೆ ಕೆಳ ಸೇತುವೆ (ಆರ್‌ಯುಬಿ) ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದರು.

₹15 ಕೋಟಿಯಲ್ಲಿ ಹೊಸ ಸರಕು ಸಾಗಣೆ ಶೆಡ್ ಹಾಗೂ ಸುಗಮ ವಾಹನಗಳ ಸಂಚಾರದ ದೃಷ್ಟಿಯಿಂದ ₹10.85 ಕೋಟಿಯಲ್ಲಿ ಆರ್‌ಯುಬಿ ನಿರ್ಮಿಸುವುದು ಸೇರಿದೆ. ಸಚಿವ ವಿ. ಸೋಮಣ್ಣ ಮಾತನಾಡಿ, ರಸಗೊಬ್ಬರ, ಸಕ್ಕರೆ ಸೇರಿದಂತೆ ಇತರೆ ವಸ್ತುಗಳ ದಾಸ್ತಾನು, ಸರಬರಾಜಿಗೆ ಈ ಸರಕು ಸಾಗಣೆ ಶೆಡ್‌ ಸಹಕಾರಿ ಆಗಲಿದೆ. ಒಂದು ವರ್ಷದಲ್ಲಿ ಕಾಮಗಾರಿ ಮುಗಿಯಲಿದೆ. ಆರ್‌ಯುಬಿ ನಿರ್ಮಾಣದಿಂದ ಸುಗಮ ಸಂಚಾರ ಸಾಧ್ಯವಾಗಲಿದೆ. ಇದು ಪ್ರಗತಿಯ ಸಂಕೇತ. ದೇಶದ ಎಲ್ಲ ರೈಲು ನಿಲ್ದಾಣಗಳನ್ನು ಏರ್‌ಪೋರ್ಟ್‌ ಮಾದರಿಯಲ್ಲಿ ಅಭಿವೃದ್ಧಿಪಡಿಸುವ ಗುರಿ ನಮ್ಮದು ಎಂದು ಹೇಳಿದರು.

ಕಲಬುರಗಿ, ಗಾಣಗಾಪೂರ, ಶಹಾಬಾದ್‌, ವಾಡಿ, ರಾಯಚೂರು, ಯಾದಗಿರಿ ಸೇರಿದಂತೆ ಇತರೆ ರೈಲು ನಿಲ್ದಾಣಗಳನ್ನು ಈ ವರ್ಷದೊಳಗೆ ಅಭಿವೃದ್ಧಿಪಡಿಸಲಾಗುವುದು. ₹25 ಕೋಟಿಯಲ್ಲಿ ಬೀದರ್‌ ನಿಲ್ದಾಣದ ನವೀಕರಣ ಕಾಮಗಾರಿ ಪ್ರಗತಿಯಲ್ಲಿದ್ದು, ಜೂನ್‌ ಅಂತ್ಯದೊಳಗೆ ಮುಗಿಸಲು ಸೂಚಿಸಲಾಗಿದೆ. ಸಿಕಂದರಾಬಾದ್‌–ವಾಡಿ 3 ಮತ್ತು 4ನೇ ಲೈನ್‌ ಡಿಪಿಆರ್‌ ಪೂರ್ಣಗೊಂಡಿದ್ದು, ಶೀಘ್ರದಲ್ಲೇ ಕಾಮಗಾರಿ ಪ್ರಾರಂಭವಾಗಲಿದೆ. ಪರಳಿ–ಲಾತೂರ್‌–ವಿಕಾರಾಬಾದ್‌–ತಾಂಡೂರ್‌ ಬೈಪಾಸ್‌ ಡಿಪಿಆರ್‌ ಆಗಿದ್ದು, ಶೀಘ್ರವೇ ಕೆಲಸಕ್ಕೆ ಚಾಲನೆ ನೀಡಲಾಗುವುದು ಎಂದರು.

ADVERTISEMENT

ಕಲ್ಯಾಣ ಕರ್ನಾಟಕ ಭಾಗದಲ್ಲಿ 30 ವರ್ಷಗಳಿಂದ ಕಡತಗಳಲ್ಲಿ ಇದ್ದ ಯೋಜನೆಗಳಿಗೆ ಚಾಲನೆ ಕೊಡಲಾಗಿದೆ. ಹೋಬಳೀ, ತಾಲ್ಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಅಭಿವೃದ್ಧಿ ಮಾಡುವುದರ ಮೂಲಕ ದೇಶದ ಸಮಗ್ರ ಅಭಿವೃದ್ಧಿ ನಮ್ಮ ಕನಸು. ಬೀದರ್‌–ನವದೆಹಲಿ ನಡುವೆ ರೈಲು ಆರಂಭಿಸಬೇಕೆಂದು ಕೇಳಿದ್ದಾರೆ. ಅದೇ ರೀತಿ ಬೀದರ್‌–ಅಜ್ಮೇರ್‌ಗೂ ಕೇಳಿದ್ದಾರೆ. ಅದನ್ನು ಪರಿಶೀಲಿಸುವೆ. ಬೀದರ್‌–ಬೆಂಗಳೂರು ನಡುವೆ ವಂದೇ ಭಾರತ್‌ ರೈಲಿಗೆ ಬೇಡಿಕೆ ಇಟ್ಟಿದ್ದಾರೆ. ಈ ಬಗ್ಗೆ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ಜೊತೆಗೆ ಚರ್ಚಿಸುವೆ ಎಂದು ಆಶ್ವಾಸನೆ ನೀಡಿದರು.

ಕಳೆದ 50 ವರ್ಷಗಳಲ್ಲಿ ಆಗದ ಕೆಲಸಗಳು ಹತ್ತು ವರ್ಷಗಳಲ್ಲಿ ಆಗಿವೆ. ರೈಲ್ವೆ ಬಜೆಟ್‌ ಸಾಮಾನ್ಯ ಬಜೆಟ್‌ಗೆ ಸೇರಿಸಿದ ನಂತರ ಹೆಚ್ಚಿನ ಅನುದಾನ ರೈಲ್ವೆಗೆ ಸಿಗುತ್ತಿದೆ. ₹39 ಸಾವಿರ ಕೋಟಿಯ ಯೋಜನೆಗಳು ಸದ್ಯ ಕರ್ನಾಟಕದಲ್ಲಿ ನಡೆಯುತ್ತಿವೆ. ಇನ್ನೂ ಮೂರು ವರ್ಷಗಳಲ್ಲಿ ಕರ್ನಾಟಕದಲ್ಲಿ ಹಲವು ಯೋಜನೆಗಳು ಪೂರ್ಣಗೊಳ್ಳಲಿವೆ. ಎಲ್ಲ ಕಡೆಗಳಲ್ಲಿ ಕೆಳ ಸೇತುವೆ ಹಾಗೂ ಮೇಲ್ಸೇತುವೆಗಳನ್ನು ನಿರ್ಮಿಸಲು ಯೋಜನೆ ರೂಪಿಸಲಾಗಿದೆ ಎಂದರು.

ದಕ್ಷಿಣ ಮಧ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕ ಅರುಣಕುಮಾರ್‌ ಜೈನ್‌, ಡಿಆರ್‌ಎಮ್‌ ಭರತೇಶ ಕುಮಾರ, ನೀರಜ್‌ ಅಗರವಾಲ್‌, ಸಂಸದ ಸಾಗರ್‌ ಖಂಡ್ರೆ, ಶಾಸಕರಾದ ಡಾ. ಶೈಲೇಂದ್ರ ಕೆ. ಬೆಲ್ದಾಳೆ, ಪ್ರಭು ಚವಾಣ್‌, ಡಾ. ಸಿದ್ದಲಿಂಗಪ್ಪ ಪಾಟೀಲ, ಶರಣು ಸಲಗರ್‌, ಎಂ.ಜಿ. ಮುಳೆ, ಮಳಚಾಪೂರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲಕ್ಷ್ಮಿಬಾಯಿ ಚಂದ್ರಶೇಖರ ಪಾಟೀಲ ಹಾಜರಿದ್ದರು.

ಉದ್ಘಾಟನೆಗೆ ಮೊದಲು ಭಾಷಣ

ಭಾಷಣಕ್ಕೆ ಮೊದಲು ವಂದನಾರ್ಪಣೆ

ಖಾನಾಪೂರ ರೈಲು ನಿಲ್ದಾಣದಲ್ಲಿ ಶನಿವಾರ ಸಂಜೆ ನಡೆದ ಕಾರ್ಯಕ್ರಮವು ಗೊಂದಲಕ್ಕೆ ಸಾಕ್ಷಿಯಾಯಿತು. ರೈಲು ಸರಕು ಶೆಡ್‌ ನಿರ್ಮಾಣಕ್ಕೆ ಸಚಿವರು ಶಂಕುಸ್ಥಾಪನೆ ನೆರವೇರಿಸಬೇಕಿತ್ತು. ಆದರೆ, ಅದಕ್ಕೂ ಮುನ್ನವೇ ಅವರನ್ನು ನಿರೂಪಕರು ಭಾಷಣಕ್ಕೆ ಕರೆದರು. ಸಚಿವರು ಕೂಡ ಮಾತನಾಡಿದರು. ಬಳಿಕ ನೆನಪಿಸಿಕೊಂಡ ಅವರು, ಮೊದಲು ಶಂಕುಸ್ಥಾಪನೆ ನೆರವೇರಿಸೋಣ ಎಂದು ಹೇಳಿ ರಿಮೋಟ್‌ ಸಹಾಯದಿಂದ ಶಂಕುಸ್ಥಾಪನೆ ನೆರವೇರಿಸಿದರು. ಇದಾದ ಬಳಿಕ ನಿರೂಪಕರು ಸಚಿವರಿಗೆ ವಂದನಾರ್ಪಣೆ ಸಲ್ಲಿಸಿದರು. ‘ನಾನು ಇನ್ನೂ ಮಾತನಾಡಿಲ್ಲ. ಏನು ಹೇಳುತ್ತಿದ್ದೀರಿ. ಇಲ್ಲಿ ಮಾಧ್ಯಮದವರು ಇದ್ದಾರೆ. ಈ ರೀತಿ ಮಾಡಿದರೆ ಏನಾಗಬೇಕು’ ಎಂದು ಸಚಿವ ಸೋಮಣ್ಣ ಹೇಳಿದರು.

ಬಸವಕಲ್ಯಾಣಕ್ಕೆ ರೈಲು ಸಂಪರ್ಕಕ್ಕೆ ಆಗ್ರಹ

ಬಸವಣ್ಣನವರ ಕರ್ಮಭೂಮಿ ಬಸವಕಲ್ಯಾಣಕ್ಕೆ ರೈಲು ಮಾರ್ಗ ನಿರ್ಮಿಸಿ, ರೈಲು ಸಂಪರ್ಕ ಕಲ್ಪಿಸಬೇಕೆಂದು ಪೌರಾಡಳಿತ ಸಚಿವ ರಹೀಂ ಖಾನ್‌ ಹಾಗೂ ಸಂಸದ ಸಾಗರ್‌ ಖಂಡ್ರೆ ಒತ್ತಾಯಿಸಿದರು.

ಸಾಗರ್‌ ಖಂಡ್ರೆ ಮಾತನಾಡಿ, ಬಸವಕಲ್ಯಾಣದಲ್ಲಿ ಅನುಭವ ಮಂಟಪ ಆಗುತ್ತಿದೆ. ಮೊದಲ ಸಂಸತ್ತು ಸ್ಥಾಪನೆಗೊಂಡ ನೆಲ. ಅಲ್ಲಿಗೆ ರೈಲು ಸಂಪರ್ಕ ಕಲ್ಪಿಸಬೇಕು. ಬೀದರ್‌–ಬೆಂಗಳೂರು ಹಾಲಿ ರೈಲಿನಲ್ಲಿ ಜನದಟ್ಟಣೆ ಅಧಿಕವಾಗಿದೆ. ಹೊಸದೊಂದು ರೈಲು ಆರಂಭಿಸಬೇಕು. ವಂದೇ ಭಾರತ್‌ ಕೂಡ ಪ್ರಾರಂಭಿಸಬೇಕು. ಬೀದರ್‌–ನವದೆಹಲಿ, ಬೀದರ್‌–ಪಂಡರಾಪೂರ, ಬೀದರ್‌–ಮುಂಬೈಗೆ ರೈಲು ಸಂಪರ್ಕ ಕಲ್ಪಿಸಬೇಕು. ಭಾಲ್ಕಿ, ಹುಮನಾಬಾದ್‌ ರೈಲು ನಿಲ್ದಾಣಗಳನ್ನು ಅಭಿವೃದ್ಧಿಪಡಿಸಬೇಕು ಎಂದು ಕೋರಿದರು.

ರಹೀಂ ಖಾನ್‌ ಮಾತನಾಡಿ, ಬಸವಕಲ್ಯಾಣಕ್ಕೆ ರೈಲು ಸಂಪರ್ಕ ಕಲ್ಪಿಸಬೇಕು. ಅದೇ ರೀತಿ ಬೀದರ್‌–ತಿರುಪತಿ, ಬೀದರ್‌–ಅಜ್ಮೇರ್‌, ಬೀದರ್‌–ಬೆಂಗಳೂರಿಗೂ ಹೊಸ ರೈಲು ಓಡಿಸಬೇಕು ಎಂದು ಮನವಿ ಮಾಡಿದರು.

ಶಾಸಕ ಡಾ. ಶೈಲೇಂದ್ರ ಕೆ. ಬೆಲ್ದಾಳೆ ಮಾತನಾಡಿ, ವಿಕಾರಾಬಾದ್‌, ವಾಡಿ ಜಂಕ್ಷನ್‌ ಮಾದರಿಯಲ್ಲಿ ಖಾನಾಪೂರ ಜಂಕ್ಷನ್‌ ಅಭಿವೃದ್ಧಿಪಡಿಸಬೇಕು ಎಂದು ಕೋರಿದರು.

‘ಮೈಲಾರ ಮಲ್ಲಣ್ಣ ಹೆಸರಿಡಿ’

ಖಾನಾಪೂರ ರೈಲು ನಿಲ್ದಾಣಕ್ಕೆ ಮೈಲಾರ ಮಲ್ಲಣ್ಣ ಜಂಕ್ಷನ್‌ ಎಂದು ನಾಮಕರಣ ಮಾಡಬೇಕು. ಈ ಭಾಗದ ಎಲ್ಲ ಜನರೂ ಮೈಲಾರ ಮಲ್ಲಣ್ಣನನ್ನು ನಡೆದುಕೊಳ್ಳುತ್ತಾರೆ. ಜೊತೆಗೆ ಸ್ಥಳೀಯರ ಬೇಡಿಕೆಯೂ ಆಗಿದೆ ಎಂದು ಸಂಸದ ಸಾಗರ್‌ ಖಂಡ್ರೆ ಹೇಳಿದರು.

ಮೈಲಾರ ಕ್ಷೇತ್ರಕ್ಕೆ ರಾಜ್ಯದ ಹಲವು ಕಡೆಗಳಿಂದ ನಿತ್ಯ ಅಪಾರ ಸಂಖ್ಯೆಯ ಭಕ್ತರು ಬರುತ್ತಾರೆ. ಎಲ್ಲರ ಆರಾಧ್ಯದೈವ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.