
ಗೌರಿಬಿದನೂರು ತಾಲ್ಲೂಕಿನ ಹೊಸೂರು ಪಂಚಾಯಿತಿಯಲ್ಲಿ ಅವಿಶ್ವಾಸ ಮಂಡನೆ ನಡೆಯಿತು
ಗೌರಿಬಿದನೂರು: ತೀವ್ರ ಕುತೂಹಲ ಕೆರಳಿಸಿದ್ದ ಹೊಸೂರು ಗ್ರಾಮ ಪಂಚಾಯಿತಿ ಅಧ್ಯಕ್ಷರ ಅವಿಶ್ವಾಸ ನಿರ್ಣಯ ಮಂಡನೆಯಲ್ಲಿ ಶಾಸಕ ಕೆ.ಎಚ್ ಪುಟ್ಟಸ್ವಾಮಿಗೌಡ ಮೇಲುಗೈ ಸಾಧಿಸಿದ್ದಾರೆ.
17 ಸದಸ್ಯ ಬಲದ ಹೊಸೂರು ಗ್ರಾಮ ಪಂಚಾಯಿತಿಯಲ್ಲಿ, ಅಧ್ಯಕ್ಷೆ ಗೀತಾ ನಾಗರಾಜ್ ಆಡಳಿತ ವಿರೋಧಿ ಮತ್ತು ಏಕಪಕ್ಷೀಯ ನಿರ್ಧಾರ ಕೈಗೊಳ್ಳುತ್ತಿದ್ದಾರೆ ಎಂದು 12 ಸದಸ್ಯರು ಅವಿಶ್ವಾಸ ಮಂಡಿಸಲು ಅವಕಾಶ ಮಾಡಿಕೊಡಬೇಕು ಎಂದು ಮೇ 22 ರಂದು ಉಪವಿಭಾಗಾಧಿಕಾರಿಗೆ ಮನವಿ ಸಲ್ಲಿಸಿದ್ದರು.
ಅದರಂತೆ ಶುಕ್ರವಾರ ಪಂಚಾಯಿತಿ ಆವರಣದಲ್ಲಿ ಅವಿಶ್ವಾಸ ಮಂಡನೆ ಮಾಡಲು ಉಪವಿಭಾಗಾಧಿಕಾರಿ ಅಶ್ವಿನ್ ಸಮಯಾವಕಾಶ ನೀಡಿದ್ದರು. ಆದರೆ 12 ಸದಸ್ಯರ ಪೈಕಿ 10 ಸದಸ್ಯರು ಹಾಜರಾದರು. ಉಳಿದ ಇಬ್ಬರು ಸದಸ್ಯರು ಗೈರಾದ ಕಾರಣ ಅವಿಶ್ವಾಸ ಸೂಚನೆ ಸಭೆ ವಿಸರ್ಜನೆ ಮಾಡಲಾಗಿದೆ ಎಂದು ಉಪವಿಭಾಗಾಧಿಕಾರಿ ಅಶ್ವಿನ್ ತಿಳಿಸಿದರು.
ಅಧ್ಯಕ್ಷೆ ಗೀತಾ ನಾಗರಾಜ್ ಮಾತನಾಡಿ, ‘ಶಾಸಕರ ಅಭಿವೃದ್ಧಿ ಕಾರ್ಯಗಳನ್ನು ಸಹಿಸದೆ ಕೆಲವರು ನನ್ನನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲು ಪಿತೂರಿ ಮಾಡಿದ್ದರು. ಆದರೆ ಅದು ಕೈಗೂಡಲಿಲ್ಲ’ ಎಂದರು.
ಕೆಎಚ್ಪಿ ಮುಖಂಡ ಬೊಮ್ಮಣ್ಣ, ನಾಗರಾಜು, ಕುರೂಡಿ ರಾಕೇಶ್, ಕಿಮ್ಲಾನಾಯಕ್, ಛಾಯಾನಾಥ್, ಇಮ್ರಾನ್, ಉಮೇಶ್, ಟೈಲ್ಸ್ ಮೂರ್ತಿ, ಶಿವ, ವೆಂಕಟೇಶ್, ನಂಜುಂಡಪ್ಪ, ಚಂದ್ರಶೇಖರ್, ಗೌತಮ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.