
ಗುಡಿಬಂಡೆ: ಯಲಕರಾಳ್ಳಹಳ್ಳಿ ಸುತ್ತಮುತ್ತ ಗ್ರಾನೈಟ್ ತೆಗೆಯುವ ಕ್ವಾರಿಗಳಿಂದ ಮಿತಿ ಮೀರಿದ ಭಾರವನ್ನು ಹೊತ್ತು ಸಾಗುವ ಗಾಣಿಗಾರಿಕೆಯ ಲಾರಿಗಳು ಸಂಚರಿಸುವುದರಿಂದ ರಸ್ತೆಗಳು ಹಾಳಾಗಿವೆ. ಇತ್ತೀಚೆಗೆ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ನದಿ ನೀರು ಹರಿದು ಕುಶಾವತಿ ಜಲನಯನ ಪ್ರದೇಶದ ನವಿಲಗುರ್ಕಿ ಗ್ರಾಮಕ್ಕೆ ಹೊಗುವ ರಸ್ತೆಯ ಮೋರಿ ಕೊಚ್ಚಿಹೊಗಿದೆ.
ಚಿಕ್ಕಬಳ್ಳಾಪುರ ತಾಲ್ಲೂಕಿನ ಮಂಡಿಕಲ್, ಆವುಲಬೆಟ್ಟ ಸೇರಿದಂತೆ ಸುತ್ತಮುತ್ತಲಿನ ಬೆಟ್ಟ ಗುಡ್ಡಗಳ ಸಾಲಿನಲ್ಲಿ ಧಾರಾಕಾರ ಮಳೆ ಸುರಿದ ಪರಿಣಾಮ ಕುಶಾವತಿ ನದಿ ನೀರಿನ ಹರಿವು ಹೆಚ್ಚಾಗಿದ್ದರಿಂದ ಈ ರಸ್ತೆಯಲ್ಲಿನ ಮೋರಿ ಕೊಚ್ಚಿ ಹೋಗಿದ್ದು, ಹತ್ತಾರು ಹಳ್ಳಿಗಳ ಸಂಪರ್ಕ ಕಡಿತವಾಗಿದೆ.
ಚಿಕ್ಕಬಳ್ಳಾಪುರದಿಂದ ಮಂಡಿಕಲ್ ಮೂಲಕ ಕಮ್ಮಾಗುಟ್ಟಹಳ್ಳಿ ಗ್ರಾಪಂ ವ್ಯಾಪ್ತಿಯ ಹಳ್ಳಿಗಳು ಹಾಗೂ ಗುಡಿಬಂಡೆ ತಾಲ್ಲೂಕಿನ ಹಲವು ಹಳ್ಳಿಗಳ ಮೂಲಕ ಹಾದುಹೋಗಿ ಗುಡಿಬಂಡೆ ಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯು ಕುಶಾವತಿ ನದಿ ನೀರಿನ ಸೆಳೆತಕ್ಕೆ ಸಿಕ್ಕಿ ಕೊಚ್ಚಿಹೋಗಿದ್ದು, ಈ ರಸ್ತೆಯಲ್ಲಿ ಸಂಚರಿಸುವ ಸಾವಿರಾರು ವಾಹನಗಳ ಸಂಪರ್ಕ ಕಡಿತಗೊಂಡಿದೆ. 4 ಕಿ.ಮೀ. ವ್ಯಾಪ್ತಿಯೊಳಗಿನ ಗ್ರಾಮಗಳಿಗೆ ಹೋಗಬೇಕಾದವರು 20 ಕಿ.ಮೀ. ಸುತ್ತಿ ಬರಬೇಕಾದ ಪರಿಸ್ಥಿತಿ ಎದುರಾಗಿದೆ.
ಗ್ರಾನೈಟ್ ತುಂಬಿದ ಟಿಪ್ಪರ್ಗಳು ರಸ್ತೆಯಲ್ಲಿ ಸಂಚರಿಸುವುದರಿಂದ ಈ ದುರವಸ್ಥೆ ಉಂಟಾಗಿದ್ದು, ಮಳೆಗೆ ಮತ್ತಷ್ಟು ಉಲ್ಬಣವಾಗಿದೆ. ಅಧಿಕಾರಿಗಳು ಇದನ್ನು ಪರಿಶೀಲಿಸಿ ಸಮಸ್ಯೆ ಕೂಡಲೇ ಸಮಸ್ಯೆ ಬಗೆಹರಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಶಾಸಕರು ₹ 3 ಕೋಟಿ ವೆಚ್ಛದಲ್ಲಿ ಈ ಸೇತುವೆ ನಿರ್ಮಿಸುವುದಾಗಿ ಹೇಳಿಕೆ ನೀಡಿದ್ದರು. ಅದು ಈವರೆಗೂ ವಾಸ್ತವಕ್ಕೆ ಬಂದಿಲ್ಲ. ಈಗಲಾದರೂ ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆಯನ್ನು ಪರಿಶೀಲಿಸಿ, ಸಂಚಾರಕ್ಕೆ ವ್ಯವಸ್ಥೆ ಮಾಡಬೇಕು. ಲೋಕೋಪಯೋಗಿ ಅಧಿಕಾರಿಗಳು ಎಸಿ ಕೊಣೆಗಳಿಂದ ಹೊರಬಂದು, ಇಂತಹ ಸಮಸ್ಯೆಗಳ ನಿವಾರಣೆಗೆ ಮುಂದಾಗಬೇಕು ಎಂದು ನವಿಲಗುರ್ಕಿ, ಜೀಗಾನಹಳ್ಳಿ, ರಾಮ ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ನಿವಾಸಿಗಳು, ಮುಖಂಡರು ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.