ADVERTISEMENT

"ಏಕತಾ ನಡಿಗೆ ರಾಷ್ಟ್ರಭಕ್ತರಿಗೆ ಸಲ್ಲಬೇಕು'

ಏಕತಾ ನಡಿಗೆ ನಿಶಾನೆ ತೋರಿದ ಸಂಸದ ಕೋಟ ಶ್ರೀನಿವಾಸ ಪೂಜಾರಿ

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2025, 2:45 IST
Last Updated 14 ನವೆಂಬರ್ 2025, 2:45 IST
ಚಿಕ್ಕಮಗಳೂರಿನ ಶ್ರೀಕಂಠಪ್ಪ ವೃತ್ತದಲ್ಲಿ ಏಕತಾ ನಡಿಗೆಗೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ಹಸಿರು ನಿಶಾನೆ ತೋರಿಸಿದರು
ಚಿಕ್ಕಮಗಳೂರಿನ ಶ್ರೀಕಂಠಪ್ಪ ವೃತ್ತದಲ್ಲಿ ಏಕತಾ ನಡಿಗೆಗೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ಹಸಿರು ನಿಶಾನೆ ತೋರಿಸಿದರು   

ಚಿಕ್ಕಮಗಳೂರು: ‘ನನಗಿಂತ, ನನ್ನ ಜಾತಿಗಿಂತ, ನನ್ನ ಧರ್ಮಕ್ಕಿಂತ ನನ್ನ ದೇಶ ಮೊದಲು ಎನ್ನುವ ರಾಷ್ಟ್ರಭಕ್ತರಿಗೆ ಏಕತಾ ನಡಿಗೆ ಸಲ್ಲುತ್ತದೆ’ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.

ಕೇಂದ್ರ ಹಾಗೂ ರಾಜ್ಯ ಸರ್ಕಾರ, ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯಿತಿ, ಮೈ ಭಾರತ್ ಕೇಂದ್ರ(ಯುವ ವ್ಯವಹಾರಗಳು ಹಾಗೂ ಕ್ರೀಡಾ ಸಚಿವಾಲಯ), ಕುವೆಂಪು ವಿಶ್ವವಿದ್ಯಾನಿಲಯದ ಎನ್‌ಎಸ್‌ಎಸ್ ಘಟಕಗಳ ಸಹಯೋಗದಲ್ಲಿ ನಗರದ ಟೌನ್ ಕ್ಯಾಂಟೀನ್ ಸಮೀಪದಿಂದ ಹೊಸಮನೆ ಬಡಾವಣೆಯ ಸ್ವಾತಂತ್ರ್ಯ ಹೋರಾಟಗಾರರ ಸ್ಮಾರಕದ ತನಕ ಆಯೋಜಿಸಿದ್ದ ಏಕತಾ ನಡಿಗೆ ಕಾರ್ಯಕ್ರಮಕ್ಕೆ ಹಸಿರು ನಿಶಾನೆ ತೋರಿ ಅವರು ಮಾತನಾಡಿದರು.

ಸರ್ದಾರ್ ವಲ್ಲಭಬಾಯಿ ಪಟೇಲ ಅವರ 150ನೇ ಜನ್ಮ ದಿನಾಚರಣೆ ಅಂಗವಾಗಿ ಏಕತಾ ನಡಿಗೆ ಆಯೋಜಿಸಲಾಗಿದೆ. ಇದು ದೇಶಭಕ್ತರಿಗಾಗಿ ನಡೆದಿರುವ ನಡಿಗೆ ಎಂದರು.

ADVERTISEMENT

ಹರಿದು ಹಂಚಿಹೋಗಿದ್ದ ರಾಜಮಹಾರಾಜರನ್ನು ಒಗ್ಗೂಡಿಸಿ ಭಾರತದ ಏಕತೆಯನ್ನು ಕಾಪಾಡಿದವರು ಭಾರತದ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಬಾಯಿ ಪಟೇಲ್ ಅವರು. ಈ ಸಂದರ್ಭದಲ್ಲಿ ಅವರ ಹೆಸರು ನೆನಪಿಸಿಕೊಂಡು ಎಲ್ಲರೂ ಏಕತಾ ನಡಿಗೆಯಲ್ಲಿ ಪಾಲ್ಗೊಳ್ಳುವ ಮೂಲಕ ರಾಷ್ಟ್ರ ಮೊದಲು ಎನ್ನುವ ಕಲ್ಪನೆಗೆ ಒತ್ತು ಕೊಟ್ಟು ಕೆಲಸ ಮಾಡಬೇಕಿದೆ ಎಂದು ಹೇಳಿದರು.

ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ ಮಾತನಾಡಿ, ‘ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ ಜನ್ಮ ದಿನಾಚರಣೆ ಪ್ರಯುಕ್ತ ಏಕತಾ ನಡಿಗೆ ಒಂದೆಡೆಯಾದರೆ, ಇನ್ನೊಂದೆಡೆ ಈ ದೇಶದ ವಂದೇ ಮಾತರಂ ಗೀತೆಗೂ 150 ವರ್ಷ ತುಂಬಿದೆ’ ಎಂದರು.

‘ಆತ್ಮ ನಿರ್ಭರ ಭಾರತ ಎಂದು ನಮ್ಮ ಪ್ರಧಾನಿ ಘೋಷಣೆ ಮಾಡಿದ್ದಾರೆ. ಆತ್ಮನಿರ್ಭರ ಭಾರತ ಆಗಬೇಕೆನ್ನುವುದು ವಲ್ಲಭಬಾಯಿ ಪಟೇಲ್ ಅವರ ಉದ್ದೇಶವೂ ಆಗಿತ್ತು. ನಮ್ಮೆಲ್ಲರ ಆಶಯವೂ ಅದೇ ಆಗಿದೆ. ಯುವಪೀಳಿಗೆ ಎತ್ತ ಸಾಗಿದೆ ಎನ್ನುವ ಬಗ್ಗೆಯೂ ನಾವು ಅವಲೋಕನ ಮಾಡಬೇಕಾಗಿದೆ’ ಎಂದು ಹೇಳಿದರು.

‘ಎಂಟು ಜ್ಞಾನಪೀಠ ಪ್ರಶಸ್ತಿ ಪಡೆದಿರುವ ಕನ್ನಡ ಶ್ರೇಷ್ಠ ಭಾಷೆ. ರಾಷ್ಟ್ರ ಕವಿ ನೀಡಿರುವ ನಾಡಗೀತೆ ನಮ್ಮ ಸಂವಿಧಾನದ ಆಶಯ. ಸರ್ದಾರ್ ವಲ್ಲಭಬಾಯಿ ಪಟೇಲ್ ಅವರು ರಾಷ್ಟ್ರದಲ್ಲಿ ಏಕತೆ ಮೂಡಿಸಿ ರಾಷ್ಟ್ರಪ್ರೇಮದ ಬಗ್ಗೆ ಯುವ ಪೀಳಿಗೆಯಲ್ಲಿ ಅಗತ್ಯ ವಿಚಾರಗಳನ್ನು ಪ್ರೇರೇಪಿಸಿದರು. ಅದನ್ನು ಇಂದಿನ ಪೀಳಿಗೆಗೆ ತಲುಪಿಸಲು ಏಕತಾ ನಡಿಗೆ ಹಮ್ಮಿಕೊಳ್ಳಲಾಗಿದೆ’ ಎಂದು ತಿಳಿಸಿದರು.

ಜಿಲ್ಲಾಧಿಕಾರಿ ಸಿ.ಎನ್.ಮೀನಾ ನಾಗರಾಜ್ ಪ್ರಾಸ್ತಾವಿಕ ಮಾತನಾಡಿ, ‘ಈ ಏಕತಾ ನಡಿಗೆ ಕಾರ್ಯಕ್ರಮವನ್ನು ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ 150ನೇ ಜನ್ಮ ದಿನಾಚರಣೆ ಅಂಗವಾಗಿ ದೇಶದಾದ್ಯಂತ ನಡೆದಿದೆ’ ಎಂದು ತಿಳಿಸಿದರು.

ಜಿಲ್ಲಾ ಪಂಚಾಯಿತಿ  ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಚ್.ಎಸ್.ಕೀರ್ತನಾ,  ಹೆಚ್ಚುವರಿ ಜಿಲ್ಲಾಧಿಕಾರಿ ನಾರಾಯಣರಡ್ಡಿ, ನಗರಸಭೆ ಆಯುಕ್ತ ಬಿ.ಸಿ.ಬಸವರಾಜ್, ಮುಖಂಡರಾದ ಎಚ್.ಸಿ.ಕಲ್ಮರುಡಪ್ಪ, ಬೆಳವಾಡಿ ರವೀಂದ್ರ, ದೀಪಕ್ ದೊಡ್ಡಯ್ಯ ಭಾಗವಹಿಸಿದ್ದರು.

ಏಕತಾ ನಡಿಗೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸಿದ್ದರು

ನಡಿಗೆಯಲ್ಲಿ ಹೆಜ್ಜೆ ಹಾಕಿದ ವಿದ್ಯಾರ್ಥಿಗಳು

ನಗರದ ಶ್ರೀಕಂಠಪ್ಪ ವೃತ್ತದಿಂದ(ಟೌನ್‌ಕ್ಯಾಂಟಿನ್) ಹೊರಟ ಮೆರವಣಿಗೆಯಲ್ಲಿ ನೂರಾರು ವಿದ್ಯಾರ್ಥಿಗಳು ಹೆಜ್ಜೆ ಹಾಕಿ ದೇಶಭಕ್ತಿ ಮೆರೆದರು. ಬಸವನಹಳ್ಳಿ ಮುಖ್ಯರಸ್ತೆ ಎಂ.ಜಿ.ರಸ್ತೆ ಆಜಾದ್ ಪಾರ್ಕ್ ವೃತ್ತ ಎಸ್ಪಿ ಕಚೇರಿ ಮೂಲಕ ಹೊಸಮನೆ ಬಡಾವಣೆಯ ಸ್ವಾತಂತ್ರ್ಯ ಹೋರಾಟಗಾರರ ಸ್ಮಾರಕದ ತನಕ ಮೆರವಣಿಗೆ ನಡೆಯಿತು. ಪ್ರತಿಜ್ಞಾವಿಧಿ ಬೋಧಿಸಲಾಯಿತು. ಸಾರ್ವಜನಿಕರು ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.