ADVERTISEMENT

ಪಾಕಿಸ್ತಾನದ ಪರ ಘೋಷಣೆ ಪ್ರಕರಣ: ಅಮೂಲ್ಯ ವಿರುದ್ಧ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2020, 10:14 IST
Last Updated 22 ಫೆಬ್ರುವರಿ 2020, 10:14 IST
ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ಗುಬ್ಬಗದ್ದೆ ಗ್ರಾಮದಲ್ಲಿನ ಅಮೂಲ್ಯ ಮನೆ ಕಿಟಕಿ ಗಾಜು ಪುಡಿಯಾಗಿರುವುದು.
ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ಗುಬ್ಬಗದ್ದೆ ಗ್ರಾಮದಲ್ಲಿನ ಅಮೂಲ್ಯ ಮನೆ ಕಿಟಕಿ ಗಾಜು ಪುಡಿಯಾಗಿರುವುದು.   

ಕೊಪ್ಪ: ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಗುರುವಾರ ಆಯೋಜಿಸಿದ್ದ ಪೌರತ್ವ (ತಿದ್ದುಪಡಿ) ಕಾಯ್ದೆ (ಸಿಎಎ) ವಿರೋಧಿ ಪ್ರತಿಭಟನೆಯಲ್ಲಿ ಕೊಪ್ಪದ ಅಮೂಲ್ಯ ಲಿಯೋನ್‌ ‘ಪಾಕಿಸ್ತಾನ ಜಿಂದಾಬಾದ್’ ಎಂದು ಕೂಗಿದ್ದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ಚಿಕ್ಕಮಗಳೂರು, ಕೊಪ್ಪ ಸಹಿತ ಜಿಲ್ಲೆಯ ವಿವಿಧೆಡೆಗಳಲ್ಲಿ ಅಮೂಲ್ಯ ವಿರುದ್ಧ ಪ್ರತಿಭಟನೆಗಳು ನಡೆದವು. ಬಜರಂಗದಳ, ಶ್ರೀರಾಮಸೇನೆ, ಹನುಮೋತ್ಸವ ಸೇವಾ ಸಮಿತಿ ಸಹಿತ ವಿವಿಧ ಸಂಘಟನೆ, ರಾಜಕೀಯ ಪಕ್ಷಗಳ ಮುಖಂಡರು ಭಾಗವಹಿಸಿದ್ದರು.

ಮನೆ ಮೇಲೆ ಕಲ್ಲು ತೂರಾಟ: ಕೊಪ್ಪ ತಾಲ್ಲೂಕಿನ ಹಿರೇಕೊಡಿಗೆ ಸಮೀಪದ ಗುಬ್ಬಗದ್ದೆಯಲ್ಲಿನ ಅಮೂಲ್ಯ ಲಿಯೋನ್‌ ಮನೆ ಮೇಲೆ ಕೆಲವರು ಗುರುವಾರ ರಾತ್ರಿ ಕಲ್ಲು ತೂರಿದ್ದಾರೆ. ಕಿಟಕಿ ಗಾಜುಗಳು ಒಡೆದಿವೆ. ಮನೆ ಬಳಿ ಪೊಲೀಸರನ್ನು ನಿಯೋಜಿಸಲಾಗಿದೆ.

ADVERTISEMENT

ಮನೆ ಮೇಲೆ ಕಲ್ಲು ತೂರಿದ್ದಕ್ಕೆ ಸಂಬಂಧಿಸಿದಂತೆ ಒಂಬತ್ತು ಮಂದಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಕೊಪ್ಪ ಪೊಲೀಸರು ತಿಳಿಸಿದ್ದಾರೆ.

‘ಕಾನೂನು ಕ್ರಮ ಕೈಗೊಳ್ಳಲಿ’:

‘ವಿದ್ಯಾಭ್ಯಾಸದ ಹೊರತು ಬೇರೆ ಕಡೆಗೆ ಗಮನ ಕೊಡಬೇಡ ಎಂದು ಅಮೂಲ್ಯಗೆ ಎಚ್ಚರಿಸಿದ್ದೆ. ಮಾತನ್ನು ಕೇಳಿಲ್ಲ. ನನಗೆ ಆರೋಗ್ಯ ಸಮಸ್ಯೆ ಇದೆ. ಆಸ್ಪತ್ರೆಗೆ ಹೋಗಬೇಕು ಜತೆಗೆ ಬಾ ಎಂದು ಕರೆದಿದ್ದೆ, ಬಂದಿರಲಿಲ್ಲ. ಪುತ್ರಿಯ ತಪ್ಪನ್ನು ಕ್ಷಮಿಸಲು ಸಾಧ್ಯವಿಲ್ಲ. ಕಾನೂನು ರೀತಿ ಕ್ರಮ ಕೈಗೊಳ್ಳಲಿ’ ಎಂದು ಅಮೂಲ್ಯ ತಂದೆ ವೋಸಲ್ಡ್ ನರೋನಾ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.