ADVERTISEMENT

ಕರಿಸಿದ್ದೇಶ್ವರ ಸ್ವಾಮಿ ಲಕ್ಷ ದೀಪೋತ್ಸವ ನಾಳೆ

ರಾಮಗಿರಿಯಲ್ಲಿ ಕಡೇ ಕಾರ್ತಿಕ ಸಂಭ್ರಮ, ಬಾಳೆಹಣ್ಣು ಪರಿಷೆ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2025, 5:35 IST
Last Updated 7 ಡಿಸೆಂಬರ್ 2025, 5:35 IST
ಹೊಳಲ್ಕೆರೆ ತಾಲ್ಲೂಕಿನ ರಾಮಗಿರಿಯಲ್ಲಿರುವ ಕರಿಸಿದ್ದೇಶ್ವರ ಸ್ವಾಮಿ ಬೆಟ್ಟ
ಹೊಳಲ್ಕೆರೆ ತಾಲ್ಲೂಕಿನ ರಾಮಗಿರಿಯಲ್ಲಿರುವ ಕರಿಸಿದ್ದೇಶ್ವರ ಸ್ವಾಮಿ ಬೆಟ್ಟ   

ಹೊಳಲ್ಕೆರೆ: ತಾಲ್ಲೂಕಿನ ರಾಮಗಿರಿಯ ಕರಿಸಿದ್ದೇಶ್ವರ ಸ್ವಾಮಿಯ ಲಕ್ಷ ದೀಪೋತ್ಸವ ಡಿ.8ರಂದು ನಡೆಯಲಿದೆ. 

ಗ್ರಾಮಕ್ಕೆ ಸಮೀಪದ ಕರಿಸಿದ್ದೇಶ್ವರ ಸ್ವಾಮಿಯ ಬೆಟ್ಟದ ಮೆಟ್ಟಿಲುಗಳ ಮೇಲೆ ದೀಪಗಳನ್ನು ಹಚ್ಚಲಾಗುತ್ತದೆ. ರಾತ್ರಿ ವೇಳೆ ಇಡೀ ಬೆಟ್ಟ ದೀಪಗಳಿಂದ ಕಂಗೊಳಿಸುತ್ತದೆ. ಮಂಗಳವಾರ ಬೆಳಗಿನ ಜಾವ ಕರಿಸಿದ್ದೇಶ್ವರ ಸ್ವಾಮಿಯನ್ನು ಬೆಟ್ಟದಿಂದ ಕೆಳಗೆ ಕರೆ ತರಲಾಗುತ್ತದೆ. ಬಾಳೆ ದಿಂಡುಗಳಲ್ಲಿ ಕಲಾತ್ಮಕವಾಗಿ ನಿರ್ಮಿಸುವ ಕದಳಿ ಮಂಟಪದಲ್ಲಿ ಕರಿಸಿದ್ದೇಶ್ವರ ಸ್ವಾಮಿ, ಕರಿಯಮ್ಮ ದೇವಿ, ಆಂಜನೇಯ ಸ್ವಾಮಿಯನ್ನು ಪ್ರತಿಷ್ಠಾಪಿಸಿ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಇಡೀ ರಾತ್ರಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತವೆ.

ಕರಿಸಿದ್ದೇಶ್ವರ ಸ್ವಾಮಿ ಜಾತ್ರೆಯನ್ನು ಬಾಳೆಹಣ್ಣು ಪರಿಷೆ ಎಂದೇ ಕರೆಯಲಾಗುತ್ತದೆ. ಭಕ್ತರು ತಮ್ಮ ಇಷ್ಟಾನುಸಾರ 101, 501, 1,001 ಬಾಳೆಹಣ್ಣು ನೀಡುವುದಾಗಿ ಹರಕೆ ಹೊರುತ್ತಾರೆ. ಭಕ್ತರು ಕೊಟ್ಟ ಬಾಳೆಹಣ್ಣನ್ನು ದೇವರ ಮುಂದೆ ರಾಶಿ ಹಾಕಲಾಗುತ್ತದೆ. ಈ ರಾಶಿ 10 ರಿಂದ 15 ಅಡಿ ಎತ್ತರ ಇರುತ್ತದೆ. ಪೂಜೆ ಸಲ್ಲಿಸಿ ಭಕ್ತರಿಗೆ ಹಂಚಲಾಗುತ್ತದೆ. ಇದರೊಂದಿಗೆ ನೆನೆಸಿದ ಕಡಲೆ ಕಾಳು ವಿತರಿಸಲಾಗುತ್ತದೆ.

ADVERTISEMENT

ಜಾತ್ರೆಯಲ್ಲಿ ಬಾಳೆ ಹಣ್ಣು ಮಾರಾಟ ಜೋರಾಗಿರುತ್ತದೆ. ವ್ಯಾಪಾರಿಗಳು ಮಾರಾಟಕ್ಕೆಂದೇ ಟನ್‌ಗಟ್ಟಲೆ ಬಾಳೆಹಣ್ಣು ತರಿಸಿ ಮಾರಾಟ ಮಾಡುತ್ತಾರೆ. ದೇವರಿಗೆ ಬಾಳೆಹಣ್ಣು ಅರ್ಪಿಸಿಲ್ಲವೆಂದರೆ ಪೂಜೆ ಪೂರ್ಣಗೊಳ್ಳುವುದಿಲ್ಲ ಎಂಬ ನಂಬಿಕೆ ಭಕ್ತರದು.

ಕರಿಸಿದ್ದೇಶ್ವರ ಸ್ವಾಮಿ

ಕಾಲಜ್ಞಾನಿ ಬಾವಿ

‘ಬೆಟ್ಟದ ಮೇಲಿನ ಕರಿಸಿದ್ದೇಶ್ವರ ಸ್ವಾಮಿ ದೇವಾಲಯದ ಒಳಗೆ ಗಂಗಮ್ಮನ ಬಾವಿ ಇದ್ದು ಇದನ್ನು ‘ಕಾಲಜ್ಞಾನಿ ಬಾವಿ’ ಎಂದೇ ನಂಬಲಾಗಿದೆ. ಬೆಟ್ಟದ ತುದಿಯಲ್ಲಿದ್ದರೂ ಈ ಬಾವಿಯ ನೀರು ಎಂದೂ ಬತ್ತಿಲ್ಲ. ಇದು ಭವಿಷ್ಯ ನುಡಿಯುವ ಬಾವಿಯಾಗಿದ್ದು ಇದರಲ್ಲಿನ ನೀರು ಸ್ವಲ್ಪ ಕೆಳಗೆ ಹೋದರೆ ಆ ವರ್ಷ ಹೆಚ್ಚು ಮಳೆ ಬರುತ್ತದೆ ನೀರು ಮೇಲೆ ಬಂದರೆ ಮಳೆಗಾಲ ಕಡಿಮೆ ಆಗುತ್ತದೆ. ಈ ನೀರು ಅನೇಕ ರೋಗಗಳನ್ನು ಗುಣಪಡಿಸುವ ಶಕ್ತಿ ಹೊಂದಿದೆ' ಎನ್ನುತ್ತಾರೆ ಇಲ್ಲಿನ ಅರ್ಚಕರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.