
ಚಿತ್ರದುರ್ಗ: ಉತ್ತಮ ಮಳೆಯಾಗುತ್ತಿರುವ ಕಾರಣ ಈ ಬಾರಿ ಆಯುಧ ಪೂಜೆ ಹಾಗೂ ವಿಜಯದಶಮಿಗೆ ಸಿದ್ಧತೆಗಳು ಸಂಭ್ರಮದಿಂದ ಸಾಗಿವೆ. ಗುರುವಾರ ನಗರದ ಮಾರುಕಟ್ಟೆ ಪ್ರದೇಶದಲ್ಲಿ ಜನಜಂಗುಳಿ ಉಂಟಾಗಿತ್ತು.
ಮುಂಜಾನೆಯಿಂದಲೇ ಮೋಡ ಮುಸುಕಿದ ವಾತಾವರಣವಿದ್ದ ಕಾರಣ ಮಧ್ಯಾಹ್ನ ಇಲ್ಲವೇ ಸಂಜೆ ವೇಳೆಗೆ ಮಳೆ ಬರುವ ಆತಂಕದಲ್ಲಿ ಜನರು ಬೆಳಿಗ್ಗೆಯಿಂದಲೇ ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದರು. ಶುಕ್ರವಾರ ಆಯುಧಪೂಜೆ ಹಾಗೂ ಶನಿವಾರ ವಿಜಯದಶಮಿ ನಡೆಯಲಿದೆ.
ಎಪಿಎಂಸಿ ಆವರಣದ ಹೂವಿನ ಮಾರುಕಟ್ಟೆಗೆ ವಿವಿಧ ಬಗೆಯ ಪುಷ್ಪಗಳನ್ನು ಮಾರಾಟಕ್ಕೆ ತರಲಾಗಿತ್ತು. ಹಬ್ಬಕ್ಕೆ ಹೂವುಗಳನ್ನು ಖರೀದಿಸಲು ಬೆಳಿಗ್ಗೆಯಿಂದ ರಾತ್ರಿವರೆಗೂ ಜನರು ಮಾರುಕಟ್ಟೆಯತ್ತ ಹೆಜ್ಜೆ ಹಾಕಿದರು. ಹೂವು, ಹಣ್ಣು, ಕಾಯಿ, ಎಲೆ, ಬಾಳೆದಿಂಡು, ಹೊಂಬಾಳೆ, ಬೂದುಗುಂಬಳ ಕಾಯಿ ಸೇರಿ ಇತರ ಪೂಜಾ ಸಾಮಗ್ರಿಗಳ ಖರೀದಿ ಭರಾಟೆ ಜೋರಾಗಿತ್ತು.
ನಗರದ ಗಾಂಧಿ ವೃತ್ತ, ಎಪಿಎಂಸಿ, ಚಿಕ್ಕಪೇಟೆ, ಆನೆಬಾಗಿಲು ರಸ್ತೆ, ಬಿಡಿ ರಸ್ತೆ, ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ರಸ್ತೆ, ಹೊಳಲ್ಕೆರೆ ರಸ್ತೆ, ಮೇದೆಹಳ್ಳಿ ರಸ್ತೆ ಮಾರ್ಗದಲ್ಲಿ ವ್ಯಾಪಾರ ವಹಿವಾಟು ಜೋರಾಗಿ ಸಾಗಿತು. ಪೂಜಾ ಸಾಮಗ್ರಿಗಳಿಗೆ ಬೇಡಿಕೆ ಹೆಚ್ಚಾಗಿತ್ತು. ಹಬ್ಬದ ಅಂಗವಾಗಿ ದೇವರ ಮೂರ್ತಿ, ಮನೆಯ ಅಲಂಕಾರ, ವಾಹನಗಳು, ಯಂತ್ರೋಪಕರಣ ಹಾಗೂ ಎಲೆಕ್ಟ್ರಿಕಲ್ ವಸ್ತುಗಳನ್ನು ಅಲಂಕರಿಸಿ ಪೂಜಿಸಲು ಜನರು ಸೇವಂತಿ ಹೂವು ಖರೀದಿಗೆ ಮುಗಿಬಿದ್ದಿದ್ದರು. ಇದರಿಂದ ಇಡೀ ಮಾರುಕಟ್ಟೆಯಲ್ಲಿ ಹಳದಿ ಸೇವಂತಿಗೆ ಹೆಚ್ಚಿನ ಬೇಡಿಕೆ ಉಂಟಾಗಿತ್ತು.
ಬಾಳೆ ಕಂದು ಜೋಡಿ ₹ 50, ಬಟನ್ಸ್ ಹೂವು ಕೆ.ಜಿ.ಗೆ ₹ 500, ಮಾವಿನ ಎಲೆಯ ತೋರಣ ಜೋಡಿಗೆ ₹ 40ರಂತೆ ಮಾರಾಟವಾದವು. ಪೂಜೆಯ ದಿನ ಮನೆ, ವಾಹನ, ಅಂಗಡಿ, ಕಾರ್ಖಾನೆಗಳ ಮುಂಭಾಗ ಒಡೆಯುವ ಬೂದುಗುಂಬಳ ಕೆ.ಜಿ.ಗೆ ₹ 30ರಂತೆ ಮತ್ತು ಗಾತ್ರದ ಆಧಾರದ ಮೇಲೆ ಒಂದಕ್ಕೆ ₹ 150ರಿಂದ ₹ 200ರಂತೆ ಖರೀದಿಸಿದರು.
ನಗರದ ಶಕ್ತಿದೇವತೆಗಳ ದೇವಸ್ಥಾನದಲ್ಲಿ ಹಬ್ಬದ ವಿಶೇಷ ಪೂಜೆಗೆ ಸಿದ್ಧತೆಗಳು ಪೂರ್ಣಗೊಂಡಿವೆ. ಮೇಲುದುರ್ಗದ ಅಧಿದೇವತೆ ಏಕನಾಥೇಶ್ವರಿ, ಪಾಳೇಗಾರರ ಕುಲದೈವತೆ ಉಚ್ಚಂಗಿ ಯಲ್ಲಮ್ಮ, ಕಣಿವೆ ಮಾರಮ್ಮ, ಚೌಡೇಶ್ವರಿ, ಬರಗೇರಮ್ಮ, ಗೌರಸಂದ್ರ ಮಾರಮ್ಮ, ಕುಕ್ಕವಾಡೇಶ್ವರಿ, ಬನ್ನಿ ಮಹಾಕಾಳಮ್ಮ, ತ್ರಿಪುರಸುಂದರಿ ತಿಪ್ಪಿನಘಟ್ಟಮ್ಮ ದೇಗುಲಗಳು ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸುತ್ತಿವೆ.
ಶುಕ್ರವಾರ ಮುಂಜಾನೆಯಿಂದಲೇ ಭಕ್ತರು ದೇವಸ್ಥಾನಕ್ಕೆ ಆಗಮಿಸುವ ನಿರೀಕ್ಷೆಯಿದೆ. ಶನಿವಾರ ಬನ್ನಿ ಮುಡಿಯುವ ದಿನದಂದು ಭಕ್ತರ ದಟ್ಟಣೆ ಹೆಚ್ಚಾಗುವ ಸಾಧ್ಯತೆಗಳಿವೆ. ದೇವಸ್ಥಾನ ಸಮಿತಿಯವರು ಸಹ ಅಗತ್ಯ ಸಿದ್ಧತೆ ನಡೆಸಿದ್ದಾರೆ.
ಮನೆಗಳಲ್ಲಿ ಪ್ರತಿಷ್ಠಾಪಿಸುವ ದೇವಿ ಲಕ್ಷ್ಮಿ ಮೂರ್ತಿ ಕಳಸದ ಹಾರ ಹಾಗೂ ಬೈಕ್ ಕಾರು ಬಸ್ ಲಾರಿ ಸೇರಿ ವಿವಿಧ ವಾಹನಗಳಿಗೆ ಗ್ರಾಹಕರ ಅಭಿರುಚಿಗೆ ತಕ್ಕಂತೆ ಹಾರಗಳನ್ನು ಮಾರಾಟಗಾರರು ತಯಾರಿಸಿದ್ದರು. ಎಪಿಎಂಸಿ ಆವರಣದ ಸಗಟು ಹೂವಿನ ಮಾರುಕಟ್ಟೆಯಲ್ಲಿ ಸೇವಂತಿಗೆ ಕನಕಾಂಬರ ಮಲ್ಲಿಗೆ ದುಂಡು ಮಲ್ಲಿಗೆ ಹೂವುಗಳು ₹ 1000ಕ್ಕೆ ತಲಾ 5ರಿಂದ 8ಮಾರಿನಂತೆ ಮಾರಾಟವಾದವು. ಖಾಸಗಿ ಬಸ್ ನಿಲ್ದಾಣ ಹಿಂಭಾಗದ ಮಾರುಕಟ್ಟೆ ಹಾಗೂ ಗಾಂಧಿ ವೃತ್ತದಲ್ಲಿ ಕಳಶದ ಹಾರ ₹ 300ರಿಂದ 500 ವಾಹನಗಳ ಹಾರ ₹ 800 ಮೇಲ್ಪಟ್ಟು ನಿಗಧಿಗೊಳಿಸಲಾಗಿತ್ತು. ಬಟನ್ಸ್ ಗುಲಾಬಿ ಚೆಂಡು ಹೂ ಬನ್ನಿ ಮತ್ತು ಬಿಲ್ವ ಪತ್ರೆ ಬಾಳೆಕಂದು ವಿಳ್ಯದ ಎಲೆ ಕಾಯಿ ಅಲಂಕಾರಿಕ ವಸ್ತುಗಳಿಗೂ ಬೇಡಿಕೆ ಹೆಚ್ಚಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.