
ಚಿತ್ರದುರ್ಗ: ‘ಜಿಲ್ಲೆಯಾದ್ಯಂತ ನ.14 ರಂದು ಏಕಕಾಲಕ್ಕೆ ಸರ್ಕಾರಿ ಶಾಲೆ, ಕಾಲೇಜುಗಳಲ್ಲಿ ಪೋಷಕ–ಶಿಕ್ಷಕ ಮಹಾಸಭೆ ನಡೆಯಲಿದೆ. ಶಾಲೆ ಕಾಲೇಜುಗಳ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗಾಗಿ ಪೋಷಕರು ಮತ್ತು ಮಕ್ಕಳೊಂದಿಗೆ ಆರೋಗ್ಯಪೂರ್ಣ ಚರ್ಚೆ ನಡೆಸಿ, ವಿಚಾರ ವಿನಿಮಯ ಮಾಡಿಕೊಳ್ಳಲಾಗುತ್ತದೆ’ ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಎಸ್. ಆಕಾಶ್ ತಿಳಿಸಿದ್ದಾರೆ.
‘ಸರ್ಕಾರದ ಸೂಚನೆಯಂತೆ ಶಾಲಾ ಕಾಲೇಜುಗಳನ್ನು ತಳಿರು–ತೋರಣಗಳಿಂದ ಅಲಂಕರಿಸಿ, ಹಬ್ಬದ ವಾತಾವರಣ ಸೃಷ್ಟಿಸಲಾಗಿದೆ. ವಿದ್ಯಾರ್ಥಿಗಳಿಗೆ ನೀಡುತ್ತಿರುವ ವಿವಿಧ ಸವಲತ್ತುಗಳ ಅನುಷ್ಠಾನ ಕುರಿತು ಪೋಷಕರಿಗೆ ಮಾಹಿತಿ ಒದಗಿಸಲಾಗುತ್ತದೆ. ಜತೆಗೆ ಮಕ್ಕಳ ಹಕ್ಕುಗಳು, ಮಕ್ಕಳ ರಕ್ಷಣಾ ನೀತಿ, ಪೋಕ್ಸೊ ಕಾಯ್ದೆ ಕುರಿತಂತೆ ಅರಿವು ಮೂಡಿಸುವ ಕಾರ್ಯ ಮಾಡಲಾಗುತ್ತಿದೆ’ ಎಂದು ಹೇಳಿದ್ದಾರೆ.
‘ಜಿಲ್ಲೆಯಲ್ಲಿನ 1,619 ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ 88,613 ವಿದ್ಯಾರ್ಥಿಗಳು, 115- ಪ್ರೌಢಶಾಲೆಗಳಲ್ಲಿ 18,362 ವಿದ್ಯಾರ್ಥಿಗಳು ಹಾಗೂ 38 ಪದವಿಪೂರ್ವ ಕಾಲೇಜುಗಳಲ್ಲಿ 8,054 ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 2,22,004 ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ಈಗಾಗಲೇ ವಿದ್ಯಾರ್ಥಿಗಳ ಪೋಷಕರು ಮಹಾಸಭೆಯಲ್ಲಿ ಭಾಗವಹಿಸಲು ಅನುವಾಗುವಂತೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ’ ಎಂದು ಡಿಡಿಪಿಐ ಮಂಜುನಾಥ್ ಹಾಗೂ ಡಿಡಿಪಿಯು ತಿಮ್ಮಯ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.