
ಹೊಸದುರ್ಗ: ತಾಲ್ಲೂಕಿನ ಅರಳೀಹಳ್ಳಿಯಲ್ಲಿ ಜವಳಿ ಪಾರ್ಕ್ ನಿರ್ಮಿಸುವ ಉದ್ದೇಶದಿಂದಾಗಿ ಶಾಸಕ ಬಿ.ಜಿ. ಗೋವಿಂದಪ್ಪ ಅಧಿಕಾರಿಗಳು ಹಾಗೂ ಮುಖಂಡರೊಂದಿಗೆ ಸೋಮವಾರ ಭೇಟಿ ನೀಡಿ, ಮೂಲ ಸೌಕರ್ಯಗಳ ಪರಿಶೀಲನೆ ನಡೆಸಿದರು.
ಹೊಸದುರ್ಗದಲ್ಲಿ ಜವಳಿ ಪಾರ್ಕ್ ಸ್ಥಾಪನೆ ಬಗ್ಗೆ ಈಚೆಗೆ ಬೆಂಗಳೂರಿನ ವಿಕಾಸಸೌಧದಲ್ಲಿ ನಡೆದ ಸಭೆಯಲ್ಲಿ ಶಾಸಕ ಗೋವಿಂದಪ್ಪ ಭಾಗವಹಿಸಿ, ‘ನಾವು ಯಾವುದೇ ಕಂಪನಿಯನ್ನು ಶಿಫಾರಸು ಮಾಡುವುದಿಲ್ಲ. ಇಲಾಖೆ ಯಾವುದೇ ಕಂಪನಿಗೆ ಅವಕಾಶ ಕೊಡಲಿ, ಕ್ಷೇತ್ರದಲ್ಲಿ ಜವಳಿ ಪಾರ್ಕ್ ಆಗಬೇಕು ಎಂಬುದಷ್ಟೇ ನಮ್ಮ ಉದ್ದೇಶ’ ಎಂದು ಸ್ಪಷ್ಟಪಡಿಸಿದರು.
‘ಅರಳಿಹಳ್ಳಿಯಲ್ಲಿ 30 ಎಕರೆ ಭೂಮಿಯನ್ನು ಭೂ–ಪರಿವರ್ತನೆ ಮಾಡಿ ಜವಳಿ ಉದ್ಯಮ ಅಭಿವೃದ್ಧಿ ಉದ್ದೇಶಕ್ಕೆ ಚಿತ್ರದುರ್ಗ ಜಿಲ್ಲಾಧಿಕಾರಿಗಳು ಮಂಜೂರು ಮಾಡಿದ್ದಾರೆ. ಈ ಭೂಮಿ ಮಂಜೂರಾತಿಗೆ ಕರ್ನಾಟಕ ರಾಜ್ಯ ಜವಳಿ ಅಭಿವೃದ್ಧಿ ನಿಗಮದಿಂದ ₹ 23.30 ಲಕ್ಷ ಪಾವತಿ ಮಾಡಲಾಗಿದೆ’ ಎಂದು ವ್ಯವಸ್ಥಾಪಕ ನಿರ್ದೆಶಕ ಪ್ರಕಾಶ್ ಸಚಿವರ ಗಮನಕ್ಕೆ ತಂದರು.
‘ಡಾ.ಡಿ.ಎಂ.ನಂಜುಂಡಪ್ಪ ವರದಿಯಂತೆ ಅತಿ ಹಿಂದುಳಿದ ತಾಲ್ಲೂಕಾಗಿದ್ದು, 2011ರ ಜನಗಣತಿ ಪ್ರಕಾರ 30 ಸಾವಿರ ಯುವ ಪೀಳಿಗೆ ಇದೆ. 19 ಸಾವಿರ ಯುವಕರು ಬೆಂಗಳೂರು ಹಾಗೂ ಇತರ ಪ್ರದೇಶಗಳಲ್ಲಿ ಉದ್ಯೋಗದಲ್ಲಿದ್ದಾರೆ. 11 ಸಾವಿರ ಯುವಕ, ಯುವತಿಯರು ನಿರುದ್ಯೋಗಿಗಳಿದ್ದಾರೆ. ಜವಳಿ ಪಾರ್ಕ್ ಸ್ಥಾಪನೆಯಿಂದ ಉದ್ಯೋಗಾವಕಾಶ ಸೃಷ್ಟಿಯಾಗಲಿದೆ’ ಎಂದು ಅವರು ವಿವರಿಸಿದರು.
‘ಉದ್ಯಮ ಸ್ಥಾಪನೆಗೆ ₹ 100 ಕೋಟಿ ಬಂಡವಾಳ ಹೂಡಿ, ಐದು ಸಾವಿರ ಜನರಿಗೆ ಉದ್ಯೋಗ ಒದಗಿಸುವ ಭರವಸೆ ನೀಡಿದೆ. ಶಾಹಿ ಗಾರ್ಮೆಂಟ್ಸ್ ಕೂಡ ಆಸಕ್ತಿ ತೋರಿಸಿದೆ’ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.