
ಪುತ್ತೂರು: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಹಲವು ಕಾರ್ಯಕ್ರಮಗಳಿಂದ ಊರಿನ ಬಡತನ ದೂರವಾಗಿದೆ. ಮದ್ಯವರ್ಜನ ಶಿಬಿರಗಳಿಂದಾಗಿ ಮಹಿಳೆಯರು ತಮ್ಮ ಕುಟುಂಬವನ್ನು ಬಲಪಡಿಸಿ ಮುನ್ನಡೆಸುವಂತಾಗಿದೆ ಎಂದು ಪಾಣಾಜೆಯ ರಣಮಂಗಳ ದೇವಸ್ಥಾನದ ಆಡಳಿತ ಮೊಕ್ತೇಸರ ಶ್ರೀಕೃಷ್ಣ ಬೊಳ್ಳಿಲ್ಲಾಯ ಕಡಮಾಜೆ ಹೇಳಿದರು.
ಪುತ್ತೂರು ತಾಲ್ಲೂಕಿನ ಪಾಣಾಜೆಯ ಸಂತೃಪ್ತಿ ಜ್ಞಾನವಿಕಾಸ ಕೇಂದ್ರದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ವತಿಯಿಂದ ಪುತ್ತೂರು ತಾಲ್ಲೂಕಿನ ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದಡಿ ನಡೆದ ವಾರ್ಷಿಕೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.
ಸಂಪನ್ಮೂಲ ವ್ಯಕ್ತಿಯಾಗಿದ್ದ ಅಚ್ಯುತ ನಾಯಕ್ ಪುತ್ತೂರು ಮಾತನಾಡಿ, ಮಹಿಳೆ ತನ್ನ ಕುಟುಂಬದ ಎಲ್ಲ ಸದಸ್ಯರನ್ನು ಪ್ರೀತಿಸಿ ಒಳ್ಳೆಯ ರೀತಿಯಲ್ಲಿ ಮುನ್ನಡೆಸಿಕೊಂಡು ಹೋದಾಗ ಆ ಕುಟುಂಬ ಮತ್ತು ಮನೆ ಆನಂದದಿಂದ ಕೂಡಿರುತ್ತದೆ ಎಂದರು.
ಪಾಣಾಜೆಯ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ನಾರಾಯಣ ಪ್ರಕಾಶ್ ನೆಲ್ಲಿತ್ತಿಮಾರು ಮಾತನಾಡಿ, ಜ್ಞಾನವಿಕಾಸ ಕಾರ್ಯಕ್ರಮ ಮಹಿಳೆಯರಲ್ಲಿ ಧೈರ್ಯ ಮತ್ತು ಛಲ ತುಂಬಿದೆ ಎಂದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಬಾಬು ನಾಯ್ಕ್ ಮಾತನಾಡಿದರು.
ತಾಲ್ಲೂಕು ಜನಜಾಗೃತಿ ವೇದಿಕೆ ಸದಸ್ಯ ಸದಾಶಿವ ರೈ ಸೂರಂಬೈಲು, ಪಾಣಾಜೆ ಸಿ.ಎ ಬ್ಯಾಂಕ್ ಮಾಜಿ ಅಧ್ಯಕ್ಷ ರವೀಂದ್ರ ಭಂಡಾರಿ, ಪಾಣಾಜೆ ಹಾಲು ಉತ್ಪಾದಕರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸತ್ಯನಾರಾಯಣ ಅಡಿಗ, ಯೋಜನೆಯ ವಲಯ ಮೇಲ್ವಿಚಾರಕ ಸೋಹನ್ ಗೌಡ, ಪಾಣಾಜೆ ಒಕ್ಕೂಟದ ಅಧ್ಯಕ್ಷ ಐತ್ತಪ್ಪ ನಾಯ್ಕ, ಪಾಣಾಜೆ ಎ ಒಕ್ಕೂಟದ ಅಧ್ಯಕ್ಷೆ ಕಮಲಾ ಭಾಗವಹಿಸಿದ್ದರು.
ಕೇಂದ್ರದ ಸಂಯೋಜಕಿ ಜಯಶ್ರೀ ವರದಿ ಮಂಡಿಸಿದರು. ಸೇವಾಪ್ರತಿನಿಧಿ ಜಯಶ್ರೀ ಸ್ವಾಗತಿಸಿದರು. ಕೇಂದ್ರದ ಸದಸ್ಯೆ ಭವಾನಿ ವಂದಿಸಿದರು. ಜ್ಞಾನವಿಕಾಸ ಸಮನ್ವಯಾಧಿಕಾರಿ ಕಾವ್ಯಶ್ರೀ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.