
ಉಪ್ಪಿನಂಗಡಿ: ಇಲ್ಲಿ ಹರಿಯುವ ಕುಮಾರಧಾರಾ ಮತ್ತು ನೇತ್ರಾವತಿ ನದಿ 25 ದಿನಗಳ ಅಂತರದಲ್ಲಿ 4ನೇ ಬಾರಿಗೆ ಉಕ್ಕಿ ಹರಿಯಲಾರಂಭಿಸಿದೆ. ಎರಡೂ ನದಿಯಲ್ಲಿ ನೀರಿನ ಮಟ್ಟದಲ್ಲಿ ಏರಿಕೆಯಾಗಿದೆ.
ಕುಮಾರಧಾರಾ ನದಿಗೆ ಪ್ರವಾಹ ಬಂದಿದ್ದು, ನಟ್ಟಿಬೈಲು, ಕುರ್ಪೇಲು, ಅಡೆಕ್ಕಲ್, ನೆಕ್ಕಿಲಾಡಿ ಮೊದಲಾದ ಕಡೆಗಳಲ್ಲಿ ನದಿ ನೀರು ತೋಟದೊಳಗೆ ನುಗ್ಗಿದೆ. ನೇತ್ರಾವತಿ ನದಿ ನೀರು ಇಳಂತಿಲ, ಅಂಡೆತ್ತಡ್ಕ ಮೊದಲಾದ ಪ್ರದೇಶದಲ್ಲಿ ತೋಟದೊಳಗೆ ನುಗ್ಗಿದೆ. ಕೆಮ್ಮಾರದ ಕಡೆಯಿಂದ ಬರುವ ತೋಡಿನ ನೀರಿಗೆ ಕೂಟೇಲು ಸೇತುವೆ ಬಳಿ ತಡೆಯಾಗಿದೆ.
ಹೊಸ್ಮಠ, ಆಲಂಕಾರು, ಕೊಯಿಲ, ಕಡಬ, ಸುಬ್ರಹ್ಮಣ್ಯ ಭಾಗಗಳಲ್ಲಿ ಎರಡು ದಿನಗಳಿಂದ ಮಳೆ ಕಡಿಮೆ ಇದ್ದರೂ, ಸಕಲೇಶಪುರ, ಕೆಂಪುಹೊಳೆ, ಶಿರಾಡಿ ಘಾಟ್ ಭಾಗದಲ್ಲಿ ಸುರಿದ ಭಾರಿ ಮಳೆ ಕಾರಣದಿಂದಾಗಿ ಗುಂಡ್ಯ ಹೊಳೆಯಲ್ಲಿ ನೀರು ಬರುತ್ತಿದ್ದು, ಹೀಗಾಗಿ ಕುಮಾರಧಾರಾ ನದಿಗೆ ಪ್ರವಾಹ ಪರಿಸ್ಥಿತಿ ಎದುರಾಗಿದೆ.
ನೇತ್ರಾವತಿ ನದಿ ಸಂಪರ್ಕದ ಬಂದಾರು, ಕೊಕ್ಕಡ, ಧರ್ಮಸ್ಥಳ ಭಾಗದಲ್ಲಿಯೂ ಮಳೆ ಕಡಿಮೆ ಇದ್ದು, ದಿಡುಪೆ, ಹೊರನಾಡು, ಕುದುರೆಮುಖ, ಚಾರ್ಮಾಡಿ ಭಾಗದಲ್ಲಿ ಮಳೆ ಜೋರಾಗಿದೆ.
ಬುಧವಾರ ರಾತ್ರಿ 8 ಗಂಟೆಯ ಹೊತ್ತಿಗೆ ನದಿ ಸಮುದ್ರ ಮಟ್ಟದಿಂದ 28.5 ಮೀಟರ್ ಎತ್ತರದಲ್ಲಿ ನದಿ ನೀರು ಹರಿಯುತ್ತಿದ್ದುದು ಕಂಡು ಬಂದಿದೆ. ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ದೇವಳದ ಬಳಿಯ ಸಂಗಮ ಕ್ಷೇತ್ರದ
ಸ್ಥಾನಘಟ್ಟದ 36 ಮೆಟ್ಟಲುಗಳ ಪೈಕಿ 27 ಮೆಟ್ಟಲು ಮುಳುಗಡೆಯಾಗಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.