ADVERTISEMENT

ರ‍್ಯಾಂಕ್‌ಗಾಗಿ ಅಲ್ಲ, ಜ್ಞಾನಕ್ಕಾಗಿ ಕಲಿಯಿರಿ: ನಿಖಿಲ್ ಸೊನ್ನದ ಸಲಹೆ

ನೀಟ್: ಅಖಿಲ ಭಾರತ ಮಟ್ಟದಲ್ಲಿ 17ನೇ ರ‍್ಯಾಂಕ್ ವಿಜೇತ ನಿಖಿಲ್ ಸೊನ್ನದ ಸಲಹೆ

​ಪ್ರಜಾವಾಣಿ ವಾರ್ತೆ
Published 18 ಜೂನ್ 2025, 4:17 IST
Last Updated 18 ಜೂನ್ 2025, 4:17 IST
ನೀಟ್‌ನಲ್ಲಿ ಟ17ನೇ ರ‍್ಯಾಂಕ್ ಪಡೆದ ಎಕ್ಸ್‌ಪರ್ಟ್‌ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ನಿಖಿಲ್ ಸೊನ್ನದ (ಎಡದಿಂದ  ಮೂರನೆಯವರು), ಅವರ ತಂದೆ ಡಾ.ಸಿದ್ಧು ಸೊನ್ನದ, ತಾಯಿ ಮೀನಾಕ್ಷಿ ಸೊನ್ನದ ಅವರನ್ನು ಪ್ರೊ.ನರೇಂದ್ರ  ನಾಯಕ್‌ ಅಭಿನಂದಿಸಿದರು. ಉಷಾಪ್ರಭಾ ನಾಯಕ್‌ ಭಾಗವಹಿಸಿದ್ದರು: ಪ್ರಜಾವಾಣಿ ಚಿತ್ರ
ನೀಟ್‌ನಲ್ಲಿ ಟ17ನೇ ರ‍್ಯಾಂಕ್ ಪಡೆದ ಎಕ್ಸ್‌ಪರ್ಟ್‌ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ನಿಖಿಲ್ ಸೊನ್ನದ (ಎಡದಿಂದ  ಮೂರನೆಯವರು), ಅವರ ತಂದೆ ಡಾ.ಸಿದ್ಧು ಸೊನ್ನದ, ತಾಯಿ ಮೀನಾಕ್ಷಿ ಸೊನ್ನದ ಅವರನ್ನು ಪ್ರೊ.ನರೇಂದ್ರ  ನಾಯಕ್‌ ಅಭಿನಂದಿಸಿದರು. ಉಷಾಪ್ರಭಾ ನಾಯಕ್‌ ಭಾಗವಹಿಸಿದ್ದರು: ಪ್ರಜಾವಾಣಿ ಚಿತ್ರ   

ಮಂಗಳೂರು: ‘ರ‍್ಯಾಂಕ್‌ ಪಡೆಯುವ ಉದ್ದೇಶದಿಂದ ಕಲಿಯಬೇಡಿ. ಹೊಸತನ್ನು ತಿಳಿಯಲು ಕಲಿಯಿರಿ. ಜ್ಞಾನ ಗಳಿಸುವುದು ನಿಮ್ಮ ಉದ್ದೇಶವಾಗಿದ್ದರೆ, ಯಶಸ್ಸು ತನ್ನಿಂದ ತಾನೆ ಹಿಂಬಾಲಿಸುತ್ತದೆ... ’

ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯಲ್ಲಿ (ನೀಟ್‌) ದಕ್ಷಿಣ ಭಾರತ ಹಾಗೂ ರಾಜ್ಯ ಮಟ್ಟದಲ್ಲಿ ಮೊದಲ  ಹಾಗೂ ಅಖಿಲ ಭಾರತ ಮಟ್ಟದಲ್ಲಿ 17ನೇ ರ‍್ಯಾಂಕ್ ಪಡೆದ ಎಕ್ಸ್‌ಪರ್ಟ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ನಿಖಿಲ್ ಸೊನ್ನದ ಅವರ ಸಲಹೆ ಇದು.

ಈ ಅಪೂರ್ವ ಸಾಧನೆಗಾಗಿ ಅವರು ಇಲ್ಲಿ ಕಾಲೇಜಿನ ಆಡಳಿತ ಮಂಡಳಿ ವತಿಯಿಂದ ಸನ್ಮಾನ ಸ್ವೀಕರಿಸಿ ಮಂಗಳವಾರ ಮಾತನಾಡಿದರು. 

ADVERTISEMENT

‘ಈ ಸಲದ ನೀಟ್ ನಿಜಕ್ಕೂ ಕಠಿಣವಾಗಿತ್ತು. ವಿದ್ಯಾರ್ಥಿಗಳ ನೈಜ ಸಾಮರ್ಥ್ಯ ಅಳೆಯ ಬೇಕಾದರೆ, ಪರೀಕ್ಷೆ ಈ ರೀತಿ ಕಠಿಣವಾಗಿಯೇ ಇರಬೇಕು’ ಎಂದು ಅವರು ಅಭಿಪ್ರಾಯಪಟ್ಟರು.

ನಿಖಲ್‌ ಅವರ ಜೊತೆಗೆ ಅವರ ತಂದೆ ವಿಜಯಪುರದ ಸಂಜೀವಿನಿ ಆಸ್ಪತ್ರೆಯ ನರರೋಗ ತಜ್ಞ ಡಾ.ಸಿದ್ದು ಸೊನ್ನದ ಹಾಗೂ ನೇತ್ರತಜ್ಞೆಯಾಗಿರುವ ತಾಯಿ ಮೀನಾಕ್ಷಿ ಸೊನ್ನದ ಅವರನ್ನೂ ಸನ್ಮಾನಿಸಲಾಯಿತು. 

ಎಕ್ಸ್‌ಪರ್ಟ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಪ್ರೊ.ನರೇಂದ್ರ ಎಲ್.ನಾಯಕ್, ‘2025ನೇ ಸಾಲಿನ ನೀಟ್‌ನಲ್ಲಿ 601ಕ್ಕಿಂತ ಹೆಚ್ಚಿನ ಅಂಕಗಳನ್ನು ಗಳಿಸಿದ  ವಿದ್ಯಾರ್ಥಿಗಳಲ್ಲಿ ಶೇ 1.43 ರಷ್ಟು ಪಾಲು ಎಕ್ಸ್‌ಪರ್ಟ್‌ನ ವಿದ್ಯಾರ್ಥಿಗಳದು. ಕಾಲೇಜಿನ 7 ವಿದ್ಯಾರ್ಥಿಗಳು 720ರಲ್ಲಿ 625ಕ್ಕಿಂತ ಅಧಿಕ, 19 ವಿದ್ಯಾರ್ಥಿಗಳು 600ಕ್ಕಿಂತ ಅಧಿಕ ಅಂಕ ಪಡೆದಿದ್ದಾರೆ. ಪರೀಕ್ಷೆ ಬರೆದ ಸಂಸ್ಥೆಯ ವಿದ್ಯಾರ್ಥಿಗಳಲ್ಲಿ ಶೇ 99 ವಿದ್ಯಾರ್ಥಿಗಳು ಎಂಬಿಬಿಎಸ್ ಸೀಟು ಪಡೆಯಲು ಅರ್ಹರಾಗಿದ್ದಾರೆ. ಇದೊಂದು ಅಭೂತಪೂರ್ವ ಸಾಧನೆ’ ಎಂದರು.

ವಳಚ್ಚಿಲ್‌ನ ಎಕ್ಸ್‌ಪರ್ಟ್‌ ಕಾಲೇಜಿನ ಪ್ರಾಂಶುಪಾಲ ಎನ್.ಕೆ ವಿಜಯನ್, ಕೊಡಿಯಾಲ್‌ಬೈಲಿನ ಎಕ್ಸ್‌ಪರ್ಟ್‌ ಕಾಲೇಜಿನ ಪ್ರಾಂಶುಪಾಲ ರಾಮಚಂದ್ರ ಭಟ್, ಎಕ್ಸ್‌ಪರ್ಟ್ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷೆ ಉಷಾಪ್ರಭಾ ಎನ್ ನಾಯಕ್, ಪ್ರಮುಖರಾದ ಅಂಕುಶ್ ಎನ್ ನಾಯಕ್,  ದೀಪಿಕಾ ಎ.ನಾಯಕ್,  ಪ್ರೊ.ಸುಬ್ರಹ್ಮಣ್ಯ ಉಡುಪ,  ಶ್ಯಾಮ್‌ಪ್ರಸಾದ್,  ವಿನಯ್ ಕುಮಾರ್,  ಗುರುದತ್ ಮತ್ತು ಕುರುಣಾಕರ ಬಳ್ಕೂರು ಭಾಗವಹಿಸಿದ್ಧರು.

ತಂದೆಯ ಪರಿಶ್ರಮ ನೆನೆದು ಕಣ್ಣೀರಿಟ್ಟ ನಿಧಿ

‘ನಾನು ಈ ಸಾಧನೆ ಮಾಡಬೇಕಾದರೆ ನನ್ನ ತಂದೆ ತಾಯಿ ಅದೆಷ್ಟೋ ಪರಿಶ್ರಮ ಪಟ್ಟಿದ್ದಾರೆ. ಕೊಡಗು ಜಿಲ್ಲೆಯಲ್ಲಿ ಎಎಸ್ಐ ಆಗಿರುವ ನನ್ನಪ್ಪ ರಾತ್ರಿ ಪಾಳಿಯಲ್ಲಿ ಕೆಲಸ ಮುಗಿಸಿ ಸ್ವಲ್ಪವೂ ವಿಶ್ರಾಂತಿ ಪಡೆಯದೇ ನನ್ನನ್ನು ಕಾಣಲು ಬರುತ್ತಿದ್ದರು‘ ಎಂದು ಹೇಳುತ್ತಾ ವಿದ್ಯಾರ್ಥಿನಿ ನಿಧಿ  ಕೆ.ಜಿ. ಕಣ್ಣೀರಿಟ್ಟರು. ಅಖಿಲ ಭಾರತದ ಮಟ್ಟದಲ್ಲಿ 84ನೇ ರ‍್ಯಾಂಕ್ ಪಡೆರುವ ನಿಧಿ ‘ಎಕ್ಸ್‌ಪರ್ಟ್‌ನಲ್ಲಿ ಉತ್ತಮ ರ‍್ಯಾಂಕ್‌ ಪಡೆದ ಬಳಿಕ ಇತರ ವಿದ್ಯಾರ್ಥಿಗಳಿಗೆ ಪ್ರೇರಣೆಯ ಮಾತುಗಳನ್ನಾಡುವುದು ನನ್ನ ಕನಸು. ಅದು ಈಡೇರಿದೆ.  ಕೊಡಗಿನ ಸೋಮವಾರಪೇಟೆಯಂಥ ಸಣ್ಣ ಪಟ್ಟಣದಿಂದ ಬಂದವಳು ನಾನು. ಕಡಿಮೆ ಅಂಕ ಬಂದಿದ್ದಕ್ಕೆ ಅತ್ತಿದ್ದೆ. ಆಗ ಸಂಸ್ಥೆಯ ಅಧ್ಯಕ್ಷರು ಸ್ಥೈರ್ಯ ತುಂಬಿದರು. ಗುರುಗಳು ಸಹಪಾಠಿಗಳು ಹಾಗೂ ಬೋಧಕೇತರ ಸಿಬ್ಬಂದಿಯನ್ನೊಳಗೊಂಡ ಇಲ್ಲಿನ ಕುಟುಂಬದ ಬೆಂಬಲದಿಂದ ಈ ಸಾಧನೆ ಸಾಧ್ಯವಾಗಿದೆ’ ಎಂದರು. ಮಗಳ ಮಾತನ್ನು ಆಲಿಸುತ್ತಿದ್ದಂತೆಯೇ ಆಕೆಯ ತಂದೆ ಕೆ.ಎಚ್.ಗಣಪತಿ ಅವರ ಕಣ್ಣಾಲಿಗಲು ತೇವಗೊಂಡಿದ್ದವು.

ಜಿಲ್ಲಾಡಳಿತದಿಂದ ಸನ್ಮಾನ

ಮಂಗಳೂರು: ನೀಟ್ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ಜಿಲ್ಲೆಯ ವಿದ್ಯಾರ್ಥಿಗಳಿಗೆ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಮಂಗಳವಾರ ಸನ್ಮಾನ ಮಾಡಿದರು. ಎಕ್ಸ್‌ಪರ್ಟ್ ಕಾಲೇಜಿನ ವಿದ್ಯಾರ್ಥಿಗಳಾದ ನಿಖಿಲ್ ಸೊನ್ನದ (ಅಖಿಲ ಭಾರತ ಮಟ್ಟದ 17ನೇ ರ್‍ಯಾಂಕ್) ಹಾಗೂ ಕೆ.ಜಿ. ನಿಧಿ (ಅಖಿಲ ಭಾರತ ಮಟ್ಟದ 84ನೇ ರ್‍ಯಾಂಕ್) ಅವರನ್ನು ಜಿಲ್ಲಾಧಿಕಾರಿ ತಮ್ಮ ಕಚೇರಿಯಲ್ಲಿ ಸನ್ಮಾನಿಸಿದರು. ಎಕ್ಸ್‌ಪರ್ಟ್ ವಿದ್ಯಾಸಂಸ್ಥೆಗಳ ಮುಖ್ಯಸ್ಥ ನರೇಂದ್ರ ನಾಯಕ್ ವಿದ್ಯಾರ್ಥಿಗಳ ಪಾಲಕರು ಜೊತೆಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.