
ಉಜಿರೆ: ನಮ್ಮ ಇತಿಹಾಸ, ಸಂಸ್ಕೃತಿ ಮತ್ತು ಪರಂಪರೆಯನ್ನು ಉಳಿಸಿ, ಬೆಳೆಸಲು ಹಾಗೂ ಮುಂದಿನ ಪೀಳಿಗೆಗೆ ಅರಿವು ಮೂಡಿಸಲು ದೇಶದ ಸಮಗ್ರ ಚಿಂತನೆಯ ಹಿನ್ನೆಲೆಯಲ್ಲಿ ಸಾಹಿತ್ಯ ರಚನೆಯಾಗಬೇಕು ಎಂದು ಮಂಗಳೂರಿನ ಆಸರೆ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷೆ ಡಾ.ಆಶಾಜ್ಯೋತಿ ರೈ ಹೇಳಿದರು.
ಧರ್ಮಸ್ಥಳದ ಸೂರ್ಯಕಮಲ್ ಸಭಾಭವನದಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಆಶ್ರಯದಲ್ಲಿ ಬೆಳ್ತಂಗಡಿ ತಾಲ್ಲೂಕು ಮಹಿಳಾ ಘಟಕದ ಸಹಯೋಗದಲ್ಲಿ ಆಯೋಜಿಸಿದ್ದ ರಾಜ್ಯ ಮಹಿಳಾ ಗೋಷ್ಠಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಾದೇಶಿಕ ಭಾಷೆಗಳಲ್ಲಿಯೂ ಸಾಹಿತ್ಯ ರಚನೆಯಾಗಬೇಕು. ತುಳುವಿನಲ್ಲಿ ಸಂಧಿ-ಪಾಡ್ದನಗಳ ಮೂಲಕ ಮೌಖಿಕ ಸಾಹಿತ್ಯ ಹೆಚ್ಚು ಜನಪ್ರಿಯವಾಗಿದೆ. ಮಹಿಳೆಯರ ಬಗ್ಗೆ ಪ್ರತಿಯೊಬ್ಬರ ಭಾವನೆಗಳು, ಚಿಂತನೆ ಯೋಚನೆಯೊಂದಿಗೆ ಅಂತರಂಗದ ಶುದ್ಧಿಗಾಗಿ ಸಾಹಿತ್ಯ ರಚನೆಯಾಗಬೇಕು. ಆಧುನಿಕ ಶಿಕ್ಷಣದಿಂದಾಗಿ ಮಹಿಳೆಯ ಯೋಚನೆಗಳು, ಭಾವನೆಗಳು ಪ್ರತ್ಯೇಕವಾಗಿರುತ್ತವೆ. ಕೇವಲ ವಿರೋಧಿಸುವುದಕ್ಕಾಗಿ ವಿರೋಧ ಸಲ್ಲದು ಎಂದರು.
ಸಮಾಜಕ್ಕೆ ಒಳಿತಾಗುವ ಸಾಹಿತ್ಯವನ್ನೇ ರಚಿಸಬೇಕು. ಬೆರಳೆಣಿಕೆಯಷ್ಟು ಮಹಿಳಾ ಸಾಹಿತಿಗಳಿದ್ದು, ಮಹಿಳೆಯರ ಸಾಹಿತ್ಯಕ್ಕೆ ಪ್ರೋತ್ಸಾಹ ನೀಡಬೇಕು ಎಂದು ಅವರು ಹೇಳಿದರು.
ದಿಕ್ಸೂಚಿ ಭಾಷಣ ಮಾಡಿದ ಮಂಗಳೂರಿನ ಪ್ರಾಧ್ಯಾಪಕಿ ಪ್ರಮೀಳಾ ರಾವ್, ಸಾಮಾಜಿಕ ಹಾಗೂ ಮಾನವೀಯ ಮೌಲ್ಯಗಳು ಕುಸಿಯುತ್ತಿದ್ದು, ಜಾನಪದ ಸಾಹಿತ್ಯವೂ ಕಣ್ಮರೆಯಾಗುತ್ತಿರುವುದು ಬೇಸರದ ವಿಷಯ ಎಂದರು.
ರಾಮನಗರದ ವಿನುತಾ ಕೆ.ಆರ್. ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.
ವಿಧಾನಪರಿಷತ್ ಸದಸ್ಯ ಕೆ.ಪ್ರತಾಪಸಿಂಹ ನಾಯಕ್ ಭಾಗವಹಿಸಿದ್ದರು.
ಸ್ವಾಗತ ಸಮಿತಿ ಅಧ್ಯಕ್ಷೆ ಉಜಿರೆಯ ಸೋನಿಯಾವರ್ಮ ಸ್ವಾಗತಿಸಿದರು. ದಿವ್ಯಾ ಹೆಗಡೆ ಕಬ್ಬಿನಗದ್ದೆ ವಂದಿಸಿದರು.
ಉಜಿರೆ: ಬೆಳ್ತಂಗಡಿ ತಾಲ್ಲೂಕಿನ ಕಾಯರ್ತಡ್ಕ ನಿವಾಸಿ ಮಹಿಳೆಯೊಬ್ಬರಿಗೆ ಆನ್ಲೈನ್ ಉದ್ಯೋಗ ನೀಡುವುದಾಗಿ ಭರವಸೆ ನೀಡಿದ ಅಪರಿಚಿತ ವ್ಯಕ್ತಿಯೊಬ್ಬ ₹4.25 ಲಕ್ಷ ವಂಚನೆ ಮಾಡಿದ್ದಾನೆ.
ಈ ಬಗ್ಗೆ ಮಹಿಳೆ ಧರ್ಮಸ್ಥಳ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.