ADVERTISEMENT

ಸುಳ್ಯ ತಾಲ್ಲೂಕು ಪ್ರಗತಿ ಪರಿಶೀಲನಾ ಸಭೆ

​ಪ್ರಜಾವಾಣಿ ವಾರ್ತೆ
Published 13 ಜೂನ್ 2025, 16:17 IST
Last Updated 13 ಜೂನ್ 2025, 16:17 IST

ಸುಳ್ಯ: ಇಲ್ಲಿನ ತಾಲ್ಲೂಕು ಪಂಚಾಯಿತಿ ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆ ಶಾಸಕಿ ಭಾಗೀರಥಿ ಮುರುಳ್ಯ ಅಧ್ಯಕ್ಷತೆಯಲ್ಲಿ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ನಡೆಯಿತು.

ಕೆಡಿಪಿ ನಾಮನಿರ್ದೇಶಿತ ಸದಸ್ಯ ಧರ್ಮಪಾಲ ಕೊಯಿಂಗಾಜೆ ಮಾತನಾಡಿ, ಕೆಡಿಪಿ ಸಭೆಯಲ್ಲಿ ಎಲ್ಲ ಅಧಿಕಾರಿಗಳು ಭಾಗವಹಿಸಿದ್ದಾರೆಯೇ ಎಂಬ ಬಗ್ಗೆ ಮಾಹಿತಿ ಪಡೆದು ಬಳಿಕ ಸಭೆ ನಡೆಸುವಂತೆ ಅಧ್ಯಕ್ಷರಿಗೆ ವಿನಂತಿಸಿದರು. ಗೈರಾದ ಅಧಿಕಾರಿಗಳಿಗೆ ನೋಟಿಸ್ ನೀಡಲು ಸೂಚನೆ ನೀಡಿದರು.

ಕೆಲ ದಿನಗಳ ಹಿಂದೆ 2ನೇ ಹೆರಿಗೆಗಾಗಿ ಆಸ್ಪತ್ರೆಗೆ ದಾಖಲಾದ ಮಹಿಳೆ ಮೃತಪಟ್ಟ ಬಗ್ಗೆ ಶಾಸಕಿ ಭಾಗೀರಥಿ ಅವರು ತಾಲ್ಲೂಕು ಆರೋಗ್ಯಾಧಿಕಾರಿ ತ್ರಿಮೂರ್ತಿ, ತಾಲ್ಲೂಕು ಆಸ್ಪತ್ರೆಯ ವೈದ್ಯಾಧಿಕಾರಿ ಕರುಣಾಕರ ಅವರನ್ನು ಪ್ರಶ್ನಿಸಿದರು.

ADVERTISEMENT

ತಾಲ್ಲೂಕು ಆಸ್ಪತ್ರೆಯಲ್ಲಿ ಔಷಧಿ ಕೊರತೆ ಇದ್ದು, ಹೊರಗಡೆಯಿಂದ ಔಷಧಿ ಪಡೆಯುವಂತೆ ಹೊರ ರೋಗಿಗಳಿಗೆ ಚೀಟಿ ನೀಡಿ ಕಳುಹಿಸುತ್ತಿದ್ದು ಸರಿಯಲ್ಲ ಎಂದು ನಾಮನಿರ್ದೇಶಿತ ಸದಸ್ಯರು ತಿಳಿಸಿದರು.

ಸರ್ಕಾರಕ್ಕೆ ಪತ್ರ ಬರೆದು ಔಷಧಿ ತರಿಸುವಂತೆ ಕೋರಲು ನಿರ್ಣಯಿಸಲಾಯಿತು.

ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಸುಧಾಕರ ಮಾತನಾಡಿ, ವ್ಯಾಪ್ತಿಯಲ್ಲಿ ರಸ್ತೆ, ನದಿ ಪರಂಬೋಕುಗಳಲ್ಲಿ ಅಕ್ರಮ ಕಟ್ಟಡದ ಕುರಿತು ಜಂಟಿ ಸರ್ವೆ ನಡೆಸಿದ ಕುರಿತು ಮಾಹಿತಿ ನೀಡಿದರು.

ಪಟ್ಟಣ ಪಂಚಾಯಿತಿ ಸಿಬ್ಬಂದಿ, ಪ್ರತಿನಿಧಿಗಳು ಅಧ್ಯಯನ ಪ್ರವಾಸ ನಡೆಸಿರುವ ಔಚಿತ್ಯದ ಬಗ್ಗೆ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಶಾಹುಲ್ ಹಮೀದ್ ಕುತ್ತಮೊಟ್ಟೆ ಆಕ್ರೋಶ ವ್ಯಕ್ತಪಡಿಸಿದರು.

ಮಧ್ಯಪ್ರದೇಶಿಸಿದ ಶಾಸಕಿ ನಮಗೂ ಅಧ್ಯಯನ ಪ್ರವಾಸಗಳು ಇರುತ್ತವೆ. ಅದು ಸರ್ಕಾರದ ಯೋಜನೆ ಎಂದರು.

ಕಾರ್ಯನಿರ್ವಹಣಾಧಿಕಾರಿ ರಾಜಣ್ಣ ಚರ್ಚೆಗೆ ವಿರಾಮ ನೀಡಿದರು.

ತಾಲ್ಲೂಕಿನಲ್ಲಿ ಬಾಧಿಸುತ್ರಿರುವ ಅಡಿಕೆ ‌ಹಳದಿ ರೋಗದ ಅಧ್ಯಯನಕ್ಕೆ ಈಗಾಗಲೇ ತಂಡ ರಚಿಸಿ ಸಮೀಕ್ಷೆ ನಡೆಸಿ ಕೇಂದ್ರ ಸರ್ಕಾರಕ್ಕೆ ಮಾಹಿತಿ ನೀಡಲಾಗಿದೆ ಎಂದು ತೋಟಗಾರಿಕಾ ಇಲಾಖೆಯ ಅಧಿಕಾರಿ ತಿಳಿಸಿದರು.

ಸುಳ್ಯದಲ್ಲಿ ನೂತನ ನಿರೀಕ್ಷಣಾ ಮಂದಿರ, ಪಯಸ್ವಿನಿ ನದಿಯಲ್ಲಿನ ಮೀನುಗಳ ಮಾರಣಹೋಮ, ಗಾಂಧಿನಗರ ಶಾಲೆಯ ಬಳಿಯ ವಿದ್ಯುತ್ ಕಂಬ, ಹಿಂದುಳಿದ ವರ್ಗದ ವಿದ್ಯಾರ್ಥಿ ನಿಲಯಗಳ ವಾರ್ಡನ್ ಕೊರತೆ ಕುರಿತು ಚರ್ಚೆ ನಡೆಯಿತು.

ಸುಳ್ಯಕ್ಕೆ ಪ್ರತ್ಯೇಕ ಸರ್ಕಾರಿ ರಕ್ತ ಶೇಖರಣಾ ಘಟಕ ಸ್ಥಾಪನೆಗೆ ಒತ್ತಾಯಿಸಿ ಪತ್ರ ಬರೆಯಲು ನಿರ್ಣಯಿಸಿ, ಸಚಿವರ ಜೊತೆಗೆ ಮಾತನಾಡುವುದಾಗಿ ಶಾಸಕಿ ಭಾಗೀರಥಿ ಮುರುಳ್ಯ ತಿಳಿಸಿದರು.

ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಶಶಿಕಲಾ ನೀರಬಿದರೆ‌, ತಹಶೀಲ್ದಾರ್ ಮಂಜುಳಾ ಎಂ., ಕೆಡಿಪಿ ನಾಮನಿರ್ದೇಶಿತ ಸದಸ್ಯರಾದ ಧರ್ಮಪಾಲ ಕೊಯಿಂಗಾಜೆ, ಅಶ್ರಫ್ ಗುಂಡಿ, ಪರಮೇಶ್ವರ ಕೆಂಬಾರೆ, ತೀರ್ಥರಾಮ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.