
ಮಲೇಬೆನ್ನೂರು: ಸಮೀಪದ ಕೊಮಾರನಹಳ್ಳಿ ಹೆಳವನಕಟ್ಟೆ ಲಕ್ಷ್ಮಿ ರಂಗನಾಥ ಸ್ವಾಮಿ ತೆಪ್ಪೋತ್ಸವಕ್ಕೆ ಸಿದ್ಧತೆಗಳನ್ನು ನಡೆಸಲು ಬುಧವಾರ ಚಾಲನೆ ನೀಡಲಾಯಿತು.
ಅರ್ಚಕ ಗುರುರಾಜಾಚಾರ್ ನೇತೃತ್ವದಲ್ಲಿ ವಿನಾಯಕ, ಕ್ಷೇತ್ರನಾಥ ಹಾಗೂ ಗಂಗಾ, ತೆಪ್ಪ ಕಟ್ಟುವ ಸಾಮಗ್ರಿಗಳಾದ ಬಿದರಿನ ಬೊಂಬು, ಡ್ರಂ, ಹಗ್ಗದ ಪೂಜೆ ನೆರವೇರಿಸಿದರು. ಗೋವಿಂದ ನಾಮ ಸ್ಮರಣೆ ಮಾಡುತ್ತಾ ತೆಪ್ಪ ಕಟ್ಟುವ ಕೆಲಸ ಸಾಗಿತು.
48 ಡ್ರಂ ಬಳಸಿ 2 ತೆಪ್ಪ ಕಟ್ಟಲಾಗುವುದು, ಕೊಮಾರನಹಳ್ಳಿ ಸೇರಿ ಸುತ್ತಮುತ್ತಲ ಗ್ರಾಮಗಳಾದ ಮಲೇಬೆನ್ನೂರು, ದಿಬ್ಬದಹಳ್ಳಿ, ಹರಳಹಳ್ಳಿ, ಹಾಲಿವಾಣ, ಕೊಪ್ಪ ಮೊದಲಾದ ಕಡೆಯಿಂದ ಸ್ವಯಂ ಪ್ರೇರಣೆಯಿಂದ ಯಾವುದೇ ಫಲಾಪೇಕ್ಷೆ ಇಲ್ಲದೇ ಭಕ್ತರು ಸೇವೆ ನೀಡುತ್ತಿದ್ದಾರೆ ಎಂದು ರಾಮಚಂದ್ರಾಚಾರ್ ಪ್ರಶಂಸೆ ವ್ಯಕ್ತಪಡಿಸಿದರು.
15 ವರ್ಷಗಳ ನಂತರ ಉತ್ಸವ ಮಾಡುವ ಭಾಗ್ಯ ಸಿಕ್ಕಿದೆ ಎಂದು ಕೇಶವ, ಗದ್ದಿಗೇಶ್, ರಂಗನಾಥ, ಮಂಜುನಾಥ್, ಕಲ್ಲೇಶ್, ಧನಂಜಯ ಆಂಜನೇಯ, ಹಾಲೇಶ್ ತಿಳಿಸಿದರು.
ಈಗಾಗಲೇ ಮೊದಲ ಹಂತದಲ್ಲಿ ಸ್ವಚ್ಛತೆ ಮಾಡಲಾಗಿದೆ. ಕೆರೆಯಲ್ಲಿ ಬೆಳದಿರುವ ಜಲಸಸ್ಯ, ಮುಳ್ಳುಕಂಟಿ, ಲಂಟನ್ ಗಿಡ ತೆರವು ಮಾಡಲಾಗುವುದು ಎಂದು ರೇವಣಸಿದ್ದಪ್ಪ, ಐರಣಿ ಮೂರ್ತಿ, ಮಹೇಶ್ ಹೇಳಿದರು.
ಕೆರೆದಂಡೆ ಅಲ್ಪಸ್ವಲ್ಪ ದುರಸ್ತಿ, ಮುಖ್ಯಸ್ಥಳದ ಅಟ್ಟಣಿಗೆ ನಿರ್ಮಾಣ ಮುಂದಿನವಾರ ಮಾಡಲಾಗುವುದು ಎಂದರು.
ದಾನಿಗಳು ಕೆಲಸ ಮಾಡುವವರಿಗೆ ತಿಂಡಿ, ಕುಡಿಯುವ ನೀರು, ಚಹಾ, ಕಾಫಿ ಊಟೋಪಚಾರ ವ್ಯವಸ್ಥೆ ಮಾಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.