
ಹರಿಹರ: ಯುದ್ಧ ಕಲೆಗಳನ್ನು ಕರಗತ ಮಾಡಿಕೊಂಡು ಬ್ರಿಟಿಷರ ವಿರುದ್ಧ ಹೋರಾಟಕ್ಕಿಳಿದ ಕಿತ್ತೂರ ರಾಣಿ ಚೆನ್ನಮ್ಮ ಭಾರತೀಯ ಮಹಿಳೆಯರ ಶೌರ್ಯಕ್ಕೆ ಸಾಕ್ಷಿಯಾಗಿದ್ದಾರೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಡಿ. ದುರುಗಪ್ಪ ಹೇಳಿದರು.
ಇಲ್ಲಿನ ತಾಲ್ಲೂಕು ಕಚೇರಿಯಲ್ಲಿ ತಾಲ್ಲೂಕು ಆಡಳಿತದಿಂದ ಗುರುವಾರ ಆಯೋಜಿಸಿದ್ದ ಕಿತ್ತೂರ ರಾಣಿ ಚೆನ್ನಮ್ಮರ ಜಯಂತಿ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು.
ಬ್ರಿಟಿಷರ ಹೊಸ ಕಾಯ್ದೆಯಿಂದಾಗಿ ರಾಜ್ಯಾಡಳಿತ ಕೈತಪ್ಪುವುದನ್ನು ತಪ್ಪಿಸಲು ಕೈಯಲ್ಲಿ ಖಡ್ಗ ಹಿಡಿದು ರಣರಂಗಕ್ಕೆ ಇಳಿದ ಚೆನ್ನಮ್ಮನ ಹೆಸರು ದೇಶದ ಇತಿಹಾಸದಲ್ಲಿ ಅಚ್ಚಳಿಯದಂತೆ ಉಳಿದಿದೆ ಎಂದು ಸ್ಮರಿಸಿದರು.
ರಾಣಿ ಚೆನ್ನಮ್ಮರ ಹೋರಾಟವು ಲಕ್ಷಾಂತರ ಭಾರತೀಯರಿಗೆ ಬ್ರಿಟೀಷರ ವಿರುದ್ಧದ ಹೋರಾಟಕ್ಕೆ ಇಳಿಯಲು ಪ್ರೇರಣೆ ನೀಡಿತು. ಅವರ ಶೌರ್ಯವನ್ನು ಸ್ಮರಿಸಲು ಸಂಸತ್ ಭವನದ ಆವರಣದಲ್ಲಿ ಕಿತ್ತೂರು ರಾಣಿ ಚೆನ್ನಮ್ಮರ ಪುತ್ಥಳಿ ಸ್ಥಾಪಿಸಲಾಗಿದೆ ಎಂದು ಪಂಚಮಸಾಲಿ ಗುರುಪೀಠದ ಧರ್ಮದರ್ಶಿ ಚಂದ್ರಶೇಖರ್ ಪೂಜಾರ್ ಹೇಳಿದರು.
ದೇಶದ ಅಸ್ಮಿತೆಯನ್ನು ಕಾಪಾಡಿದ ಅಸಂಖ್ಯಾತ ಹೋರಾಟಗಾರರ ಪೈಕಿ ಚೆನ್ನಮ್ಮರ ಹೆಸರು ಪ್ರಧಾನವಾಗಿದೆ. ಅವರ ಹೋರಾಟದ ಗುಣವನ್ನು ಈಗಿನ ಮಹಿಳೆಯರು ಹೊಂದಿದರೆ ಸಮಾಜದಲ್ಲಿ ಸಾಕಷ್ಟು ಪರಿವರ್ತನೆ ಆಗಲು ಸಾಧ್ಯವಿದೆ ಎಂದು ಅಖಿಲ ಭಾರತ ವೀರಶೈವ ಮಹಾಸಭಾದ ತಾಲ್ಲೂಕು ಘಟಕದ ಅಧ್ಯಕ್ಷ ಡಿ.ಜಿ. ಶಿವಾನಂದಪ್ಪ ಹೇಳಿದರು.
ತಾಲ್ಲೂಕು ಪಂಚಾಯಿತಿ ಮಾಜಿ ಅದ್ಯಕ್ಷ ಟಿ.ಜೆ. ಮುರುಗೇಶಪ್ಪ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ನಟರಾಜ್, ಪಂಚಮಸಾಲಿ ಸಮುದಾಯದ ಮುಖಂಡರು, ಸಿಬ್ಬಂದಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.