
ಮಾಯಕೊಂಡ: ‘ಗ್ರಾಮದ ಕುಡಿಯುವ ನೀರಿನ ಘಟಕದ ಮರಳು ತೆರವುಗೊಳಿಸಿ ಬೇರೆ ಮರಳು ಹಾಕುವಂತೆ’ ಜಿಲ್ಲಾ ಪಂಚಾಯಿತಿ ಮುಖ್ಯನಿರ್ವಹಣಾಧಿಕಾರಿ ಗಿತ್ತೆ ಮಾಧವ ವಿಠ್ಠಲರಾವ್ ಸೂಚಿಸಿದರು.
ದಾವಣಗೆರೆ ತಾಲ್ಲೂಕಿನ ವಿವಿಧ ಗ್ರಾಮ ಪಂಚಾಯಿತಿಗಳಿಗೆ ಗುರುವಾರ ದಿಢೀರ್ ಭೇಟಿ ನೀಡಿ ಪರಿಶೀಲಿಸಿದರು.
ಮಾಯಕೊಂಡ ಗ್ರಾಮದಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರ, ಗ್ರಂಥಾಲಯ, ತ್ಯಾಜ್ಯ ವಿಲೇವಾರಿ ಘಟಕ, ರಾಜೀವ್ ಗಾಂಧಿ ಕುಡಿಯುವ ನೀರಿನ ಘಟಕಗಳಿಗೆ ಭೇಟಿ ನೀಡಿದಾಗ ಹಲವು ಸಲಹೆ ಸೂಚನೆ ನೀಡಿದರು.
ಬಸ್ ನಿಲ್ದಾಣಕ್ಕೆ ನಿಗದಿಪಡಿಸಿರುವ ಜಾಗದಲ್ಲಿನ ಹಳೆಯ ಕಟ್ಟಡವನ್ನು ತೆರವುಗೊಳಿಸಿ ಸ್ವಚ್ಛ ಮಾಡಿಸಿ, ಸಮಸ್ಯೆಗಳನ್ನು ಶೀಘ್ರ ಪರಿಹರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಆರೋಪ: ಸದಸ್ಯ ಲಕ್ಷ್ಮಣ್ ಮಾತನಾಡಿ, ‘ಗ್ರಾಮ ಪಂಚಾಯಿತಿಯಲ್ಲಿ ಎಸಿ ಹಾಲ್ ಅವಶ್ಯಕತೆ ಇರಲಿಲ್ಲ. ಅದಕ್ಕೆ ₹ 6.5 ಲಕ್ಷ ಖರ್ಚು ತೋರಿಸಿದ್ದಾರೆ. ಎರಡೂವರೆ ಲಕ್ಷವೂ ಖರ್ಚಾಗಿಲ್ಲ ಎಂದು ಆರೋಪಿಸಿದರು. ಹಿಂದಿದ್ದ ಪಿಡಿಒ ಶ್ರೀನಿವಾಸ್ ಅವರ ಅವಧಿಯಲ್ಲಿ ಹಲವು ತಿಂಗಳಿಂದ ಕೆಲವರಿಗೆ ಇ–ಸ್ವತ್ತು ನೀಡಿಲ್ಲ. ಆದರೆ ಒಂದೊಂದೆ ದಿನ ರಾತ್ರೋರಾತ್ರಿ ನೂರಾರು ಇ–ಸ್ವತ್ತು ತೆಗೆದಿದ್ದಾರೆ. ಲೇಔಟ್ ನಿರ್ಮಾಣದಲ್ಲೂ ಸಾಕಷ್ಟು ಅಕ್ರಮ ನಡೆದಿವೆ. ಅವುಗಳ ತನಿಖೆ ಆಗಬೇಕು. ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು’ ಎಂದು ಒತ್ತಾಯಿಸಿದರು.
‘ವಾರ್ಡ್ ಸಭೆ, ಗ್ರಾಮಸಭೆಗಳಾಗಿಲ್ಲ. ರಾಜೀವ್ ಗಾಂಧಿ ಸಬ್ ಮಿಷನ್ ಯೋಜನೆಯ ಕುಡಿಯುವ ನೀರಿನ ಘಟಕಗಳಲ್ಲಿ ಫಿಲ್ಟರ್ ಆಗುತ್ತಿಲ್ಲ. ಆಸ್ಪತ್ರೆಯಲ್ಲೂ ಕಾಯಂ ವೈದ್ಯರು ಇಲ್ಲದ್ದರಿಂದ ರೋಗಿಗಳ ಪರದಾಟ ತಪ್ಪಿಲ್ಲ’ ಎಂದು ಆರೋಪಿಸಿದರು.
ಈ ವೇಳೆ ತಾ.ಪಂ. ಇಒ ರಾಮ ಭೋವಿ, ಗ್ರಾ.ಪಂ. ಅಧ್ಯಕ್ಷೆ ಸಾಕಮ್ಮ, ಉಪಾಧ್ಯಕ್ಷೆ ಶಿವಮ್ಮ, ಸದಸ್ಯರಾದ ನಾಗಪ್ಪ, ಪುಷ್ಪಾ, ಪಿಡಿಒ ಹನುಮಂತಪ್ಪ, ಮುಖಂಡರಾದ ಬೀರಪ್ಪ, ಉಮಾಶಂಕರ್ ಹಾಗೂ ಗ್ರಾಮಸ್ಥರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.