
ನ್ಯಾಮತಿ: ಹೊನ್ನಾಳಿ-ನ್ಯಾಮತಿ ತಾಲ್ಲೂಕುಗಳಲ್ಲಿ ಹೆಚ್ಚಿನ ಅಡಿಕೆ ಬೆಳೆಗಾರರಿದ್ದು, ಇತ್ತೀಚಿನ ದಿನಗಳಲ್ಲಿ ಖೇಣಿದಾರರಿಂದ ಸಾಕಷ್ಟು ಕಷ್ಟ ಅನುಭವಿಸುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅಡಿಕೆ ಬೆಳೆಗಾರರು ದೂರಿದ್ದಾರೆ.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಡಿಕೆ ಬೆಳೆಗಾರ ಹಾಗೂ ಕೃಷಿಕ ಸಮಾಜದ ತಾಲ್ಲೂಕು ಘಟಕದ ನಿರ್ದೇಶಕ ಸಾಲಬಾಳು ಎಸ್.ಎನ್. ಶಾಂತನಾಯ್ಕ, ‘ಅಡಿಕೆ ಖೇಣಿದಾರರು ಜಿಲ್ಲಾ ಮಟ್ಟದಲ್ಲಿ ಸಂಘ ರಚಿಸಿಕೊಂಡು, ಅವೈಜ್ಞಾನಿಕವಾಗಿ ಅಡಿಕೆ ಬೆಲೆ ನಿಗದಿಪಡಿಸುವುದು, ಖರೀದಿ ಮಾಡದೇ ಸತಾಯಿಸುವುದು, ಖೇಣಿಯನ್ನು ತಮಗಿಷ್ಟ ಬಂದ ರೀತಿಯಲ್ಲಿ ಕೇಳುವುದನ್ನು ಮಾಡುತ್ತಿದ್ದಾರೆ. ಇದರಿಂದ ಅಡಕೆ ಬೆಳೆಗಾರರಿಗೆ ತುಂಬಾ ತೊಂದರೆಯಾಗುತ್ತಿದೆ’ ಎಂದು ದೂರಿದರು.
ಖೇಣಿದಾರರ ಈ ನಿಲುವನ್ನು ಖಂಡಿಸಬೇಕಾದ ಹಸಿರುಸೇನೆ, ರೈತ ಸಂಘ, ಶಾಸಕರು, ತೋಟಗಾರಿಕೆ ಇಲಾಖೆಯವರು ಸುಮ್ಮನಿರುವುದು ಅನುಮಾನಕ್ಕೆ ಕಾರಣವಾಗಿದೆ. ಅವಳಿ ತಾಲ್ಲೂಕಿನ ತಹಶೀಲ್ದಾರರು ಅಡಕೆ ಖೇಣಿದಾರರು, ಬೆಳೆಗಾರರು ಮತ್ತು ರೈತ ಸಂಘಟನೆಗಳ ಸಭೆ ಕರೆದು ಸಮಸ್ಯೆಗೆ ಪರಿಹಾರ ತೋರಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಅಡಿಕೆ ಬೆಳೆಗಾರರಾದ ಮಾದಾಪುರ ಎ.ಬಿ.ರಂಗಪ್ಪ, ಸೋಗಿಲು ಸುರೇಶನಾಯ್ಕ, ಸಾಲಬಾಳ ಮಂಜುನಾಯ್ಕ, ಸೋಗಿಲು ತೋಟೇಶಪ್ಪ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.