ಅಳ್ನಾವರ: ‘ಕೃಷಿ ಚಟುವಟಿಕೆ ಜತೆಗೆ ಜೇನು ಸಾಕಾಣಿಕೆ ಮಾಡಿದರೆ ಉತ್ತಮ ಆದಾಯ ಪಡೆಯಬಹುದು’ ಎಂದು ತಾಲ್ಲೂಕು ಪಂಚಾಯಿತಿ ಇಒ ಪ್ರಶಾಂತ ತುರ್ಕಾಣಿ ಹೇಳಿದರು.
ಧಾರವಾಡ ತೋಟಗಾರಿಕೆ ಇಲಾಖೆ, ಬಾಗಲಕೋಟಿ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಪ್ರಾದೇಶಿಕ ತೋಟಗಾರಿಕೆ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರದ ಸಹಯೋಗದಲ್ಲಿ ಇಲ್ಲಿನ ಜೇನು ಕೃಷಿ ತರಬೇತಿ ಕೇಂದ್ರದಲ್ಲಿ ಶುಕ್ರವಾರ ನಡೆದ ‘ಸರ್ವೋತೋಮುಖ ಅಭಿವೃದ್ಧಿಗಾಗಿ ಜೇನುಕೃಷಿ’ ಕಾರ್ಯಾಗಾರ ಉದ್ಘಾಟಿಸಿ
ಅವರು ಮಾತನಾಡಿದರು.
‘ವೈಜ್ಞಾನಿಕ ಪದ್ಧತಿಯಿಂದ ಜೇನು ಸಾಕಾಣಿಕೆ ಕೈಗೊಳ್ಳಬೇಕು. ಜೇನು ನೊಣಗಳ ಪರಾಗ ಸ್ಪರ್ಶದಿಂದ ಇತರ ಬೆಳೆಗಳ ಇಳುವರಿಯೂ ಗಣನೀಯವಾಗಿ ಹೆಚ್ಚಳವಾಗುತ್ತವೆ. ರೈತರು ಜೇನು ಸಾಕಾಣಿಕೆಯನ್ನು ಉಪ ಕಸುಬಾಗಿ ಮಾಡಬಕು’ ಎಂದರು.
ಧಾರವಾಡ ಜಿಲ್ಲಾ ಪಂಚಾಯಿತಿಯ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಇಮ್ತಿಯಾಜ್ ಚಂಗಾಪೂರಿ ಅಧ್ಯಕ್ಷತೆ ವಹಿಸಿದ್ದರು. ಸಹ ಸಂಶೋಧನಾ ಹಾಗೂ
ವಿಸ್ತರಣಾ ನಿರ್ದೇಶಕ ಜೆ.ಬಿ.ಗೋಪಾಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ಜಗದೀಶ ಬಾಳಿಕಾಯಿ, ತೋಟಗಾರಿಕೆ ಇಲಾಖೆಯ ಅಧಿಕಾರಿಗಳಾದ ಜಿ.ಪಲ್ಲವಿ, ಮಹಾಂತೇಶ ಪಟ್ಟಣಶೆಟ್ಟಿ, ದೀಪ್ತಿ ವಾಲಿ ಇದ್ದರು.
ತರಬೇತಿ ಕಾರ್ಯಾಗಾರದಲ್ಲಿ ಧಾರವಾಡ ಜಿಲ್ಲೆಯ ವಿವಿಧೆಡೆಯಿಂದ ಜೇನು ಕೃಷಿಯಲ್ಲಿ ಆಸಕ್ತಿ ಇದ್ದ 50 ಜನ ಭಾಗವಹಿಸಿದ್ದರು.
ತರಬೇತಿಯಲ್ಲಿ ಜೇನು ನೊಣಗಳ ಜೀವನ ಕ್ರಮ, ತಳಿಗಳ ಮಹತ್ವ, ಜೇನು ಸಾಕಾಣಿಕೆ ಬಗೆ, ಜೇನಿನ ಪೆಟ್ಟಿಗೆ ನಿರ್ಹಹಣೆ, ಜೇನು ಕೃಷಿಯಿಂದ ಆದಾಯ ಪಡೆಯುವ ಬಗೆ ಕುರಿತು ಮಾಹಿತಿ ನೀಡಲಾಯಿತು. ಜೇನು ಸಾಕಾಣಿಕೆ ಬಗ್ಗೆ ಪ್ರಾತ್ಯಕ್ಷಿಕೆ ನೀಡಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.