
ಧಾರವಾಡ: ಜಿಲ್ಲೆಯ ಹಲವೆಡೆ ಕಡಲೆ ಬೆಳೆಗೆ ಸಿಡಿ (ಸೊರಗು) ರೋಗ ಅಂಟಿದ್ದು, ಬೆಳೆ ನಾಶವಾಗುವ ಹಾಗೂ ಇಳುವರಿ ಕುಸಿಯುವ ಆತಂಕ ಬೆಳೆಗಾರರನ್ನು ಕಾಡುತ್ತಿದೆ.
ಈ ಬಾರಿ ಸತತವಾಗಿ ಮಳೆಯಾಗಿದ್ದರಿಂದ ಗುರಿ ಮೀರಿ ಕಡಲೆ ಬಿತ್ತನೆ ಮಾಡಲಾಗಿದೆ. ಬಿತ್ತನೆ ಗುರಿ 1.22 ಲಕ್ಷ ಹೆಕ್ಟೇರ್ ಇತ್ತು, ಆದರೆ 1.36 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಕಡಲೆ ಬಿತ್ತನೆ ಸಮಯದಲ್ಲಿ ಸತತ ಮಳೆಯಾಗಿ ಭೂಮಿಯಲ್ಲಿ ತೇವಾಂಶ ಹೆಚ್ಚಳವಾಗಿದ್ದರಿಂದ ಬಿತ್ತನೆಗೆ ತೊಡಕಾಗಿತ್ತು. ಆದರೂ, ರೈತರು ನಂಬಿಕೆಯಿಂದ ಬಿತ್ತನೆ ಮಾಡಿ ಬೆಳೆ ನಿರ್ವಹಣೆ ಮಾಡಿದ್ದರು.
ತಡಕೋಡ, ಅಗಸನಹಳ್ಳಿ, ಕೋಟೂರ, ಕುರುಬಗಟ್ಟಿ, ಗರಗ, ಮಾದನಭಾವಿ, ಕೊಟಬಾಗಿ, ಹಾರೋಬೆಳವಡಿ, ಸೋಮಾಪುರ, ಲಕಮಾಪುರ, ಹೆಬ್ಬಳ್ಳಿ, ಶಿವಳ್ಳಿ, ಅಮ್ಮಿನಭಾವಿ ಸುತ್ತಲಿನ ಭಾಗದಲ್ಲಿ ಕಡಲೆಗೆ ರೋಗ ಬಾಧೆ ಕಂಡುಬಂದಿದೆ.
ರೋಗಕ್ಕೆ ತುತ್ತಾದ ಕಡಲೆ ಗಿಡಗಳ ಎಲೆಗಳು ಹಳದಿ ಬಣ್ಣಕ್ಕೆ ತಿರುಗಿವೆ. ಬಾಡಿ, ಜೋತು ಬಿದ್ದು ಒಣಗಿ, ಗಿಡಕ್ಕೆ ಅಂಟಿರುತ್ತವೆ. ದಿನದಿಂದ ದಿನಕ್ಕೆ ರೋಗ ಬಾಧೆ ಹೆಚ್ಚಿನ ಪ್ರಮಾಣದಲ್ಲಿ ಹರಡುತ್ತಿದೆ. ಬೆಳೆ ರಕ್ಷಣೆಗೆ ರೈತರು ಔಷಧ ಸಿಂಪಡಿಸಿದ್ದರೂ ನಿಯಂತ್ರಣಕ್ಕೆ ಬಂದಿಲ್ಲ.
‘ಆರು ಎಕರೆಯಲ್ಲಿ ಕಡಲೆ ಬೆಳೆ ಬೆಳೆದಿದ್ದೇನೆ. ಟ್ರ್ಯಾಕ್ಟರ್ ಬಾಡಿಗೆ, ಕಡಲೆ ಬಿತ್ತನೆ ಬೀಜ ಮತ್ತು ಗೊಬ್ಬರ, ಎಡೆ ಹೊಡೆಯಲು, ಕಸ ತೆಗೆಯಲು, ಕೀಟನಾಶಕ ಸಿಂಪಡಣೆಗಾಗಿ ಎಕರೆಗೆ ₹12 ಸಾವಿರ ಖರ್ಚಾಗಿದೆ. ಸಿಡಿ ರೋಗ ತಗುಲಿ ಶೇ 30ರಷ್ಟು ಬೆಳೆ ಹಾನಿಯಾಗಿದೆ’ ಎಂದು ತಡಕೋಡದ ಬೆಳೆಗಾರರೊಬ್ಬರು ಸಂಕಷ್ಟ ತೋಡಿಕೊಂಡರು.
ಕಡಲೆ ಬೆಳೆಗೆ ಸಿಡಿರೋಗ ತಗುಲಿದೆ. ಕೃಷಿ ಅಧಿಕಾರಿಗಳು ಸ್ಥಳಕ್ಕೆ ಬಂದು ಬೆಳೆ ಪರಿಶೀಲಿಸಬೇಕು. ರೋಗ ಹತೋಟಿಗಾಗಿ ಬೆಳೆಗಾರರಿಗೆ ಮಾಹಿತಿ ನೀಡಬೇಕು.ಮಡಿವಾಳಪ್ಪ ಜಿಟ್ಟಿ ಕಡಲೆ ಬೆಳೆಗಾರ ತಡಕೋಡ ಗ್ರಾಮ
ನಿರಂತರವಾಗಿ ದ್ವಿದಳ ಧಾನ್ಯ ಬೆಳೆಯಬಾರದು. ಪ್ರತಿ ವರ್ಷ ಕಡಲೆ ಬೆಳೆದರೆ ರೋಗ ಹತೋಟಿ ಕಷ್ಟವಾಗುತ್ತದೆ. ಬೆಳೆ ಪರಿವರ್ತನೆ ಬೀಜೋಪಚಾರ ಮಾಡಿದರೆ ಸ್ವಲ್ಪಮಟ್ಟಿಗೆ ನಿಯಂತ್ರಿಸಬಹುದುರಾಜಶೇಖರ ಅನಗೌಡರ ಸಹಾಯಕ ಕೃಷಿ ನಿರ್ದೇಶಕ
‘ಶಿಲೀಂಧ್ರ ನಾಶಕ ದ್ರಾವಣ ಸಿಂಪಡಿಸಿ‘
‘ಫ್ಯುಸಾರಿಯಮ್ ಎಂಬ ಶಿಲೀಂಧ್ರ ಭೂಮಿ ಮತ್ತು ಬೀಜದಲ್ಲಿ ಇರುತ್ತದೆ. ಕಡಲೆ ಮೊಳಕೆಯೊಡೆದ ನಂತರ ಅದು ಬೇರು ನಾಶಪಡಿಸುವುದರಿಂದ ಬೆಳೆ ಒಣಗುತ್ತದೆ’ ಎಂದು ಕೃಷಿ ವಿಶ್ವವಿದ್ಯಾಲಯದ ಬೇಸಾಯಶಾಸ್ತ್ರ ವಿಭಾಗದ ವಿಜ್ಞಾನಿ ಬಸವರಾಜ ಏಣಗಿ ತಿಳಿಸಿದರು. ‘ಸಿಡಿ ರೋಗ ಹತೋಟಿಗೆ ಶಾಶ್ವತ ಪರಿಹಾರ ಇಲ್ಲ. ಲೀಟರ್ ನೀರಿಗೆ ಎರಡು ಗ್ರಾಂ ಬ್ಯಾವಿಷ್ಟೀನ್ ಅಥವಾ ನಾಲ್ಕು ಗ್ರಾಂ ಕಾರ್ಬಾಕ್ಸಿನ್ ಶೇ 37.5 ಥೈರಾಮ್ ಸಂಯುಕ್ತ ಶಿಲೀಂಧ್ರ ನಾಶಕದ ದ್ರಾವಣವನ್ನು ರೋಗ ಬಾಧೆಯಿಂದ ನಾಶವಾದ ಗಿಡದ ಸುತ್ತಲಿನ ಗಿಡಗಳ ಬೇರು ವಲಯಕ್ಕೆ ಸಿಂಪಡಿಸಬೇಕು. ಇದರಿಂದ ರೋಗ ಹರಡದಂತೆ ತಡೆಗಟ್ಟಬಹುದು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.