
ಹಾಸನ: ಡಾ.ಅಂಬೇಡ್ಕರ್ ಅವರ ಚಿಂತನೆಗಳನ್ನು ವರ್ಷದ 365 ದಿನವೂ ಅವರನ್ನು ಸ್ಮರಿಸಿದರೂ ಕಡಿಮೆಯೇ ಎಂದು ಸಂಸದ ಶ್ರೇಯಸ್ ಪಟೇಲ್ ಬಣ್ಣಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ಡಾ. ಬಿ.ಆರ್. ಅಂಬೇಡ್ಕರ್ ಅವರ 69ನೇ ಪರಿನಿರ್ವಾಣ ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಿ ಅವರು ಮಾತನಾಡಿದರು.
ಸಂವಿಧಾನ, ಸಮಾನತೆಯ ಶಿಲ್ಪಿ, ಸಾಮಾಜಿಕ ನ್ಯಾಯದ ಹೋರಾಟಗಾರ ಡಾ. ಅಂಬೇಡ್ಕರ್ ನಮ್ಮನ್ನು ಸ್ವತಂತ್ರವಾಗಿ, ಮಾನವೀಯವಾಗಿ ಬದುಕುವ ದಾರಿ ತೋರಿಸಿದರು ಎಂದರು.
ಇಂದಿನ ಸಮಾಜದಲ್ಲಿ ಜನರು ಹಕ್ಕು, ಸ್ವಾತಂತ್ರ್ಯಗಳೊಂದಿಗೆ ನೆಮ್ಮದಿಯಿಂದ ಬದುಕುತ್ತಿರುವುದು, ಅವರ ನೀಡಿದ ಸಂವಿಧಾನದ ಬಲವಾಗಿದೆ. ಸಂವಿಧಾನವನ್ನು ತಿಳಿದು, ತಿಳಿಸುವುದು ಎಲ್ಲರ ಜವಾಬ್ದಾರಿ. ಡಾ.ಅಂಬೇಡ್ಕರ್ ಅವರ ಆದರ್ಶಗಳು ನಮ್ಮನ್ನು ಇನ್ನಷ್ಟು ಪ್ರಗತಿಪರ ಸಮಾಜದತ್ತ ಕರೆದೊಯ್ಯುತ್ತವೆ ಎಂದರು.
ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ಮಾತನಾಡಿ, ಅಂಬೇಡ್ಕರ್ ಇಲ್ಲಿ ಜನಿಸಿದ್ದು, ನಮ್ಮ ದೇಶಕ್ಕೆ ದೊರೆತ ಅಪರೂಪದ ವರ. ನಾವು ಅನುಭವಿಸುವ ಸಮಾನತೆ, ಹಕ್ಕುಗಳು ಅವರ ಕೊಡುಗೆ ಎಂದು ಸ್ಮರಿಸಿದರು.
ಅಂಬೇಡ್ಕರ್ ನೀಡಿದ ಮೌಲ್ಯ, ಸಂವಿಧಾನದ ಜೀವಾಳ ಪ್ರಜಾಪ್ರಭುತ್ವದ ನೆಲೆಯಾಗಿದೆ. ಅವರ ಆದರ್ಶಗಳನ್ನು ಉಳಿಸುವುದು, ಅನುಸರಿಸುವುದು ಮತ್ತು ಮುಂದಿನ ಪೀಳಿಗೆಗೆ ತಿಳಿಸುವುದು ನಮ್ಮ ಕರ್ತವ್ಯವಾಗಿದೆ ಎಂದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ಆರ್. ಪೂರ್ಣಿಮಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಹಮ್ಮದ್ ಸುಜೀತಾ, ದಲಿತ ಮುಖಂಡರಾದ ಕೃಷ್ಣದಾಸ್, ಸಂದೇಶ ಉಪಸ್ಥಿತರಿದ್ದರು.