ADVERTISEMENT

ಗಾಯಾಳುಗಳಿಗೆ 24 ಗಂಟೆಯಲ್ಲಿ ಪರಿಹಾರ ನೀಡಿ

ಮಾನವ–ಪ್ರಾಣಿ ಸಂಘರ್ಷ ತಡೆ ಕುರಿತ ಸಭೆಯಲ್ಲಿ ಜಿಲ್ಲಾಧಿಕಾರಿ ಲತಾಕುಮಾರಿ ಸೂಚನೆ

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2025, 1:58 IST
Last Updated 14 ನವೆಂಬರ್ 2025, 1:58 IST
ಹಾಸನದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ಮಾತನಾಡಿದರು.
ಹಾಸನದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ಮಾತನಾಡಿದರು.   

ಹಾಸನ: ಜಿಲ್ಲೆಯಲ್ಲಿ ವನ್ಯಜೀವಿಗಳ ದಾಳಿಯಿಂದ ಗಾಯಗೊಂಡವರಿಗೆ 24 ಗಂಟೆಯೊಳಗೆ ಪರಿಹಾರ ನೀಡಲು ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಕೆ.ಎಸ್‌.ಲತಾಕುಮಾರಿ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಮಾನವ ಮತ್ತು ಪ್ರಾಣಿಗಳ ಸಂಘರ್ಷ ಕುರಿತು ನಡೆದ ಸಭೆಯಲ್ಲಿ ಮಾತನಾಡಿದ ಅವರು, 2025ರ ಜನವರಿಯಿಂದ ಇದುವರೆಗೆ ಸಂಭವಿಸಿರುವ ಅವಘಡಗಳು, ಸಾವು, ಗಾಯಗೊಂಡವರ ಪಟ್ಟಿಯನ್ನು ತಾಲ್ಲೂಕುವಾರು ಸಿದ್ಧಪಡಿಸಿ ಎಂದು ಸೂಚಿಸಿದರು. 

ಗಾಯಗೊಂಡವರಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಹಾಗೂ ಸರ್ಕಾರ ಗುರುತಿಸಿರುವ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ನೀಡಲು ಸುತ್ತೋಲೆ ಹೊರಡಿಸಬೇಕು. ತಾಲ್ಲೂಕು ಆರೋಗ್ಯ ಅಧಿಕಾರಿಗಳು ವಿಳಂಬ ಮಾಡದೇ ಗಾಯಾಳುಗಳ ಆರೋಗ್ಯದ ಮೇಲೆ ಉಂಟಾಗಿರುವ ತೀವ್ರತೆ ಅರಿತು ತಕ್ಷಣ ಪ್ರಮಾಣ ಪತ್ರ ನೀಡಿ. ಇದರಿಂದ ಪರಿಹಾರ ನೀಡಲು ಸಹಾಯವಾಗುತ್ತದೆ ಎಂದು ತಿಳಿಸಿದರು.

ADVERTISEMENT

ಪರಿಹಾರಕ್ಕೆ ಜನರು ಅಲೆದಾಟ ಮಾಡದಂತೆ ಎಚ್ಚರಿಕೆ ವಹಿಸಿ. ಶಾಶ್ವತ ಅಂಗವಿಕಲತೆಗೆ ₹ 10 ಲಕ್ಷ, ಭಾಗಶಃ ಅಂಗವಿಕಲತೆಗೆ ₹ 5 ಲಕ್ಷ ಪರಿಹಾರ ನೀಡಲು ಅಧಿಕಾರಿಗಳು ನಿಗಾ ವಹಿಸಬೇಕು ಎಂದ ಅವರು, ಬೆಳೆ, ಪೈಪ್‌ಲೈನ್, ಗೇಟ್, ಕಾಂಪೌಂಡ್, ಶೆಡ್ ಮೇಲೆ ಪ್ರಾಣಿಗಳು ದಾಳಿ ಮಾಡಿ ನಷ್ಟ ಉಂಟು ಮಾಡಿದಾಗ, ಪರಿಹಾರ ನೀಡಬೇಕು ಎಂದರು.

ತೆಂಗು, ಅಡಿಕೆ, ಕಾಫಿ, ಮೆಣಸು ಮತ್ತಿತರ ತೋಟಗಾರಿಕೆ ಬೆಳೆಗಳನ್ನು ವನ್ಯ ಪ್ರಾಣಿಗಳು ನಾಶ ಮಾಡಿದಾಗ ಸೂಕ್ತ ಪರಿಹಾರ ದೊರಕಿಸುವ ನಿಟ್ಟಿನಲ್ಲಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಬೇಕು. ಇದಕ್ಕೆ ನೆರವಾಗುವಂತೆ ಒಂದು ಸಮಿತಿ ರಚಿಸಿ ವರದಿ ತಯಾರಿಸಲು ಕ್ರಮ ಕೈಗೊಳ್ಳುವಂತೆ ತಿಳಿಸಿದರು.

ಕಾಡುಕೋಣ, ಕರಡಿ, ಚಿರತೆ ಮತ್ತಿತರ ವನ್ಯಪ್ರಾಣಿಗಳ ದಾಳಿಯಿಂದ ಉಂಟಾಗುವ ನಷ್ಟದ ಬಗ್ಗೆ ಎಲ್ಲ ತಹಶೀಲ್ದಾರರು ಗಮನ ಹರಿಸಬೇಕು ಎಂದರು.

ಹೆಚ್ಚುವರಿ ಜಿಲ್ಲಾಧಿಕಾರಿ ಮಂಜುನಾಥ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಸೌರಭ್‌ಕುಮಾರ್, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಬಾಬು, ಭೂ ದಾಖಲೆಗಳ ಇಲಾಖೆಯ ಉಪ ನಿರ್ದೇಶಕಿ ಹೇಮಲತಾ, ಮತ್ತಿತರ ಅಧಿಕಾರಿಗಳು ಹಾಜರಿದ್ದರು.

‘ಆನೆ ಓಡಾಡುವ ಪ್ರದೇಶದಲ್ಲಿ ನಿಗಾ ವಹಿಸಿ’

ಬಿಕ್ಕೋಡು ಅರೇಹಳ್ಳಿ ವ್ಯಾಪ್ತಿಯಲ್ಲಿ ಆನೆಗಳು ಓಡಾಡುವುದರಿಂದ ಸಾರ್ವಜನಿಕರ ಅನುಕೂಲಕ್ಕಾಗಿ ರಸ್ತೆಯ ತಿರುವಿನಲ್ಲಿ ಹಾಗೂ ಎರಡು ಬದಿಗಳಲ್ಲಿ ವಿದ್ಯುತ್ ದೀಪ ಅಳವಡಿಸಬೇಕು. ಮಲೆನಾಡು ಪ್ರದೇಶದಲ್ಲಿ ನೆಟ್‌ವರ್ಕ್ ಸಿಗದಿರುವ ಗ್ರಾಮಗಳು ಮತ್ತು ಸ್ಥಳಗಳನ್ನು ಗುರುತಿಸಿ ಎಂದು ಜಿಲ್ಲಾಧಿಕಾರಿ ಲತಾಕುಮಾರಿ ಸೂಚಿಸಿದರು. ಅರೇಹಳ್ಳಿಯಲ್ಲಿ ಸುಸಜ್ಜಿತ ಆಂಬುಲೆನ್ಸ್ ನಿರಂತರ ಲಭ್ಯವಿರುವಂತೆ ನೋಡಿಕೊಳ್ಳಿ. ಈ ವ್ಯಾಪ್ತಿಯಲ್ಲಿ ಎಷ್ಟು ಶಾಲೆಗಳಿವೆ? ಎಷ್ಟು ಮಕ್ಕಳಿದ್ದಾರೆ? ನಿಗದಿತ ಸಮಯದಲ್ಲಿ ವಿದ್ಯಾರ್ಥಿಗಳಿಗೆ ಬಸ್ ಸೌಲಭ್ಯ ಕಲ್ಪಿಸಲು ಚಿಂತನೆ ನಡೆಸಬೇಕು. ನ.27 ರಂದು ನಡೆಯುವ ಸಭೆಯಲ್ಲಿ ತೆಗೆದುಕೊಂಡ ಕ್ರಮಗಳ ಬಗ್ಗೆ ವರದಿ ನೀಡುವಂತೆ ನಿರ್ದೇಶನ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.