ADVERTISEMENT

ಕಲಬುರಗಿ|ಮೊಗಳ್ಳಿ ಕತೆಗಳಲ್ಲಿದೆ ಬುಕರ್‌ ತರುವ ಶಕ್ತಿ: ಪ್ರೊ.ಅರುಣ ಜೋಳದಕೂಡ್ಲಿಗಿ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2025, 7:36 IST
Last Updated 17 ಅಕ್ಟೋಬರ್ 2025, 7:36 IST
ಕಲಬುರಗಿಯ ಕನ್ನಡ ಭವನದಲ್ಲಿ ಪ್ರೊ.ಮೊಗಳ್ಳಿ ಗಣೇಶ ಅವರ ನುಡಿನಮನ ಕಾರ್ಯಕ್ರಮದಲ್ಲಿ ಪ್ರೊ. ಅರುಣ ಜೋಳದ ಕೂಡ್ಲಿಗಿ ಮಾತನಾಡಿದರು
ಕಲಬುರಗಿಯ ಕನ್ನಡ ಭವನದಲ್ಲಿ ಪ್ರೊ.ಮೊಗಳ್ಳಿ ಗಣೇಶ ಅವರ ನುಡಿನಮನ ಕಾರ್ಯಕ್ರಮದಲ್ಲಿ ಪ್ರೊ. ಅರುಣ ಜೋಳದ ಕೂಡ್ಲಿಗಿ ಮಾತನಾಡಿದರು   

ಕಲಬುರಗಿ: ‘ಪ್ರೊ. ಮೊಗಳ್ಳಿ ಗಣೇಶ ಸೃಜನಶೀಲ ರೂಪಕಗಳ ಬರಹಗಾರ. ಜಗತ್ತಿನ ಶ್ರೇಷ್ಠ ಕತೆಗಾರರ ಸಾಲಿನಲ್ಲಿ ನಿಲ್ಲುವಂಥವರು’ ಎಂದು ಪ್ರೊ.ಅರುಣ ಜೋಳದಕೂಡ್ಲಿಗಿ ಬಣ್ಣಿಸಿದರು.

ನಗರದ ಕನ್ನಡ ಭವನದಲ್ಲಿ ಪ್ರೊ.ಮೊಗಳ್ಳಿ ಗಣೇಶ ನುಡಿ ನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಮೊಗಳ್ಳಿ ಕನ್ನಡದ ಶ್ರೇಷ್ಠ ಕತೆಗಾರ. ಸಾಹಿತಿಗಳು ತಮ್ಮ ಬರಹದಲ್ಲಿ ಸಹಜವಾಗಿ ಘಟನೆ ಕಟ್ಟಿಕೊಡುತ್ತಾರೆ. ಆದರೆ, ಮೊಗಳ್ಳಿ ಗಣೇಶ ಅವರು ಇಡೀ ಸಮುದಾಯದ ನೋವನ್ನು ತಾವೊಬ್ಬರೇ ಅನುಭವಿಸಿ ಭಟ್ಟಿ ಇಳಿಸಿದಂತೆ ಬರೆಯುತ್ತಿದ್ದರು. ಅವರ ಅತ್ಯುತ್ತಮ ಕತೆಗಳು ಇಂಗ್ಲಿಷ್‌ಗೆ ಭಾಷಾಂತರವಾಗಿದ್ದರೆ, ಕನ್ನಡಕ್ಕೆ ಎಂದೋ ಅಂತರರಾಷ್ಟ್ರೀಯ ಬೂಕರ್ ಪ್ರಶಸ್ತಿ ಸಲ್ಲುತ್ತಿತ್ತು’ ಎಂದು ಪ್ರತಿಪಾದಿಸಿದರು.

ADVERTISEMENT

‘ನಾವೆಲ್ಲ ಬಾಲ್ಯದ ನೆನಪುಗಳನ್ನು ಒಂದು ಹಂತಕ್ಕೆ ಬಂದ ಬಳಿಕ ಕಳಚಿಕೊಳ್ಳುತ್ತೇವೆ. ಆದರೆ, ಮೊಗಳ್ಳಿ ಅವರಿಗೆ ಬಾಲ್ಯದ ಕೌರ್ಯ, ಒಂಟಿತನ, ಹಿಂಸೆ ಸೇರಿದಂತೆ ಬಾಲ್ಯದ ಯಾವುದೇ ನೆನಪುಗಳಿಂದ ಅವರಿಗೆ ಬಿಡಿಸಿಕೊಳ್ಳಲು ಆಗಲಿಲ್ಲ. ಅದು ಅವರನ್ನು ಕೊನೇ ತನಕ ಕಾಡಿತು. ಅದುವೇ ಮೊಗಳ್ಳಿ ಅವರನ್ನು ಬರಹಗಳ ಮೂಲಕ ಜೀವಂತವಾಗಿಟ್ಟಿತು’ ಎಂದು ಅಭಿಪ್ರಾಯಪಟ್ಟರು.

‘ಕನ್ನಡದ ಸಂಶೋಧನೆಗಳು ಶಾಸನ, ಉಲ್ಲೇಖದ ಮೂಲಕವೇ ಬಂದಿದೆ. ಆದರೆ, ನಿಜವಾಗಿಯೂ ಆಳದ ಅನುಭವ ಲೋಕವು ಕನ್ನಡ ಸಂಶೋಧನೆಯ ಆಕರ ಆಗಬೇಕು. ಯಾವುದೇ ಪುಸ್ತಕ ಉಲ್ಲೇಖ ಮಾಡುವ ಬದಲು, ಶತ–ಶತಮಾನಗಳಿಂದ ಅನುಭವ ಹೊಂದಿರುವ ಅನುಭವ ಲೋಕ ಆಕರವಾಗಬೇಕು ಎಂಬುದು ಮೊಗಳ್ಳಿಯವರ ನಿಲುವಾಗಿತ್ತು’ ಎಂದರು.

‘ಪ್ರೊ.ಮೊಗಳ್ಳಿ ಒಂಟಿಯಾಗಿ ಇದ್ದಿದ್ದೇ ಹೆಚ್ಚು. ಜನರೊಟ್ಟಿಗೆ ಹೆಚ್ಚು ಬೆರೆಯಲಿಲ್ಲ, ಒಡನಾಡಲಿಲ್ಲ. ಆದರೂ, ಇಡೀ ಜಗತ್ತಿನ ನೋವು ತನ್ನದೇ ಎಂಬಂತೆ ಅನುಭವಿಸಿ ಬರೆಯುತ್ತಿದ್ದರು. ಪ್ರೊ.ರಹಮತ್ ತರಿಕೆರೆಯವರಂಥೆ ಆಳವಾಗಿ ಕರ್ನಾಟಕದಾದ್ಯಂತ ತಿರುಗಾಡಿ, ಸಂಶೋಧನೆ ಮಾಡಿ, ಲಕ್ಷಾಂತರ ಜನರೊಂದಿಗೆ ಒಡನಾಡಿದ್ದರೆ, ಪ್ರೊ.ಮೊಗಳ್ಳಿಯ ದೃಷ್ಟಿಕೋನ ಎಷ್ಟು ಎತ್ತರಕ್ಕೆ ಏರುತ್ತಿತ್ತು ಎಂಬ ಕುತೂಹಲ ನನಗಿದೆ’ ಎಂದರು.

‘ಅವರು ಬರೀ ಕತೆಗಾರ ಮಾತ್ರವೇ ಅಲ್ಲ. ಅದ್ಭುತ ಕವಿ, ಸಂಶೋಧಕರೂ ಹೌದು. ವಿಮರ್ಶೆಯ ಪರಿಭಾಷೆಯನ್ನೇ ಬದಲಿಸಿದಂಥ ವಿಮರ್ಶಕ’ ಎಂದು ಅಭಿಪ್ರಾಯಪಟ್ಟರು. 

ನುಡಿ ನಮನಕ್ಕೂ ಮುನ್ನ ಪ್ರೊ.ಮೊಗಳ್ಳಿ ಗಣೇಶ ಅವರ ಚಿತ್ರಕ್ಕೆ ಗಣ್ಯರು ಪುಷ್ಪ ನಮನ ಸಲ್ಲಿಸಿದರು. ಪ್ರೊ.ಅಪ್ಪಗೆರೆ ಸೋಮಶೇಖರ, ಪ್ರೊ. ಆರ್‌.ಕೆ.ಹುಡಗಿ, ಸುರೇಶ ಹಾದಿಮನಿ, ಎ.ಬಿ.ಹೊಸಮನಿ, ಮರೆಪ್ಪ ಹಳ್ಳಿ, ರೇಣುಕಾ ಸಿಂಗೆ ವೇದಿಕೆಯಲ್ಲಿದ್ದರು.

‘ಎಂ.ಪಿ.ಪ್ರಕಾಶರೇ ಖುದ್ದು ಬಂದರು...’

‘ಮೊಗಳ್ಳಿಯವರ ಬುಗುರಿ’ ಕತೆ ಓದಿ ಅವರಿಗೆ ರಾಜಕಾರಣಿ ಎಂ.ಪಿ.ಪ್ರಕಾಶರು ಪತ್ರ ಬರೆದ್ದರು. ಬೆಂಗಳೂರಿನತ್ತ ಬಂದಾಗ ವಿಧಾನಸೌಧದತ್ತ ಬಂದು ಹೋಗಿ ಎಂದು ಆಹ್ವಾನಿಸಿದ್ದರು. ನಾವೆಲ್ಲ ಆಗಿದ್ದರೆ ಹೋಗಿ ಭೇಟಿ ಆಗುತ್ತಿದ್ದೆವು. ಆದರೆ ಮೊಗಳ್ಳಿಯವರು ‘ಅಂಥ ಸ್ಥಳಕ್ಕೆಲ್ಲ ನಾನು ಬರಲ್ಲ. ಬೇಕಿದ್ದರೆ ನೀವೇ ಇತ್ತ ಬಂದಾಗ ನಮ್ಮನೆಗೆ ಬಂದು ಹೋಗಿ’ ಎಂದು ಮರುಪತ್ರ ಬರೆದಿದ್ದರು. ಕೆಲವು ದಿನಗಳ ಬಳಿಕ ತಮ್ಮ ಇಡೀ ಅಧಿಕಾರಿಗಳ ತಂಡದೊಂದಿಗೆ ಎಂ.ಪಿ.ಪ್ರಕಾಶರೇ ಖುದ್ದಾಗಿ ಪ್ರೊ.ಮೊಗಳ್ಳಿ ಮನೆಗೆ ಬರುತ್ತಾರೆ ಭೇಟಿಯಾಗುತ್ತಾರೆ. ಆಗ ‘ನಾನು ಒಬ್ಬನೇ ಬರಬಹುದಿತ್ತು. ಒಬ್ಬ ಸಾಹಿತಿಯ ಘನತೆ ಏನೆಂಬುದು ಸಮಾಜಕ್ಕೆ ತಿಳಿಯಲಿ ಎಂದುಕೊಂಡು ಇಡೀ ಅಧಿಕಾರಿಗಳ ತಂಡದೊಂದಿಗೆ ಬಂದಿದ್ದೇನೆ’ ಎಂದು ಎಂ.ಪಿ.ಪ್ರಕಾಶರು ಹೇಳಿದ್ದರಂತೆ’ ಎಂದು ಪ್ರೊ.ಜೋಳದ ಕೂಡ್ಲಿಗಿ ನೆನಪಿಸಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.