ಯಡ್ರಾಮಿ: ತಾಲ್ಲೂಕಿನ ವಸ್ತಾರಿ, ಕುಕನೂರ, ಕುಮ್ಮನಸಿರಸಿಗಿ ಗ್ರಾಮದ 21ಕ್ಕೂ ಹೆಚ್ಚು ಜನರಿಗೆ ಕಚ್ಚಿ ಗಂಭೀರವಾಗಿ ಗಾಯಗೊಳಿಸಿದ್ದ ಕೋತಿಯನ್ನು ಕುಮ್ಮನಸಿರಸಿಗಿಯಲ್ಲಿ ಅರಣ್ಯ ಅಧಿಕಾರಿಗಳು ಶುಕ್ರವಾರ ಬೆಳಿಗ್ಗೆ ಸೆರೆ ಹಿಡಿದಿದ್ದಾರೆ. ಕೋತಿ ಕಾಟದಿಂದ ಭಯದಲ್ಲಿದ್ದ ಗ್ರಾಮಸ್ಥರು ನಿಟ್ಟುಸಿರು ಬಿಡುವಂತಾಗಿದೆ.
ಕುಮ್ಮನಸಿರಸಿಗಿಯಲ್ಲಿ ಒಬ್ಬ ಅಜ್ಜನಿಗೆ ಕಚ್ಚಿತ್ತು. ಆಗ ಅರಣ್ಯ ಅಧಿಕಾರಿಗಳು ಮೂರು ದಿನ ಕಾರ್ಯಾಚರಣೆ ನಡೆದರೂ ಕೋತಿ ಸಿಕ್ಕಿರಲಿಲ್ಲ. ನಂತರ ಅದರ ಚಲನವಲನಗಳನ್ನು ಸೂಕ್ಷ್ಮವಾಗಿ ಗಮನಿಸಿ, ಗ್ರಾಮಸ್ಥರಿಂದ ಮಾಹಿತಿ ಕಲೆ ಹಾಕಲಾಗಿತ್ತು. ರಾತ್ರಿ ವೇಳೆ ಕಾರ್ಯಾಚರಣೆ ನಡೆಸಿದರೂ ಪ್ರಯೋಜನ ಆಗಿರಲಿಲ್ಲ.
ಕೋತಿ ಪದೇ ಪದೇ ಸ್ಥಳ ಬದಲಿಸುತ್ತಿದ್ದ ಕಾರಣ ಅರಣ್ಯ ಇಲಾಖೆಯವರಿಗೆ ಮತ್ತು ಗ್ರಾಮಸ್ಥರಿಗೆ ತಲೆನೋವಾಗಿತ್ತು. ಪಶು ವೈದ್ಯರನ್ನು ಕರೆಸಿ ಕೋತಿಯ ಚಲನವಲನ ತಿಳಿದು ಕೊನೆಗೂ ಅದನ್ನು ಅರಣ್ಯ ಅಧಿಕಾರಿಗಳು ಹಿಡಿದರು.
ಉಪ ಅರಣ್ಯ ಅಧಿಕಾರಿ ಸಿದ್ದುಗೌಡ, ಪರಸಪ್ಪ ಚಿತ್ತಾಪುರ, ಅರಣ್ಯ ರಕ್ಷಕ ಮಲ್ಲಿನಾಥ ಭಾಸಗಿ, ಪಶು ವೈದ್ಯಕೀಯ ಪರೀಕ್ಷಕ ಹಬೀಬ್ಖಾನ್ ಪಠಾಣ ಹಿಪ್ಪರಗಿ, ನಾಗೇಂದ್ರ ಸಿಪಾಯಿ, ಧರ್ಮಸಿಂಗ್ ಭಾರತಿ, ಗುರು ಯಂಕಂಚಿ, ಮಲ್ಲಿಕಾರ್ಜುನ ಉಮ್ಮರ್ಗಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.