
ಚಿತ್ತಾಪುರ: ‘ಶಾಲಾ ಕಾಲೇಜಿನಲ್ಲಿ ಆಯೋಜನೆ ಮಾಡುವ ಕ್ರೀಡಾ ಚಟುವಟಿಕೆಗಳು ಮತ್ತು ಕ್ರೀಡಾಕೂಟಗಳಿಂದ ವಿದ್ಯಾರ್ಥಿಗಳಲ್ಲಿ ಅಡಗಿರುವ ಸುಪ್ತ ಕ್ರೀಡಾ ಪ್ರತಿಭೆ ಹೊರಹೊಮ್ಮಲು ಸಹಾಯಕವಾಗುತ್ತದೆ. ಕ್ರೀಡೆಯಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯ ಸದೃಢಗೊಳ್ಳುತ್ತದೆ’ ಎಂದು ವಿಶ್ವಗುರು ಶಿಕ್ಷಣ ಸಂಸ್ಥೆಯ ಅಧ್ಯಕ್ಷ ನಾಗರೆಡ್ಡಿ ಪಾಟೀಲ್ ಕರದಾಳ ಹೇಳಿದರು.
ಪಟ್ಟಣದಲ್ಲಿ ವಿಶ್ವಗುರು ಶಿಕ್ಷಣ ಸಂಸ್ಥೆಯ ಮಹಾದೇವಮ್ಮ ಪಾಟೀಲ್ ಸಿಬಿಎಸ್ಇ ಶಾಲೆಯ ಅವರಣದಲ್ಲಿ ಗುರುವಾರ ಆಯೋಜಿಸಿದ್ದ ಸಿಬಿಎಸ್ಇ ಶಾಲೆಗಳ ಜಿಲ್ಲಾ ಮಟ್ಟದ ವಾಲಿಬಾಲ್ ಕ್ರೀಡಾಕೂಟ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಕ್ರೀಡಾಜ್ಯೋತಿ ಸ್ವೀಕರಿಸಿ ಅವರು ಮಾತನಾಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಶಶಿಧರ್ ಬಿರಾದಾರ ಕ್ರೀಡಾಕೂಟದ ಕಾರ್ಯಕ್ರಮ ಉದ್ಘಾಟಿಸಿದರು. ಪ್ರಾಂಶುಪಾಲರಾದ ಶ್ರೀದೇವಿ ಗಂಜಿ, ಬನ್ನೆಮ್ಮ, ಜೆ.ರೆಡ್ಡಿ, ಸಂಸ್ಥೆಯ ಪಿಯುಸಿ ಕಾಲೇಜಿನ ಪ್ರಾಂಶುಪಾಲರಾದ ತ್ರೀವೇಣಿ ವಿ. ಪಾಟೀಲ್ ಉಪಸ್ಥಿತರಿದ್ದರು.
14 ವರ್ಷದ ಬಾಲಕರ ವಿಭಾಗ: ಸೇಡಂ ತಾಲ್ಲೂಕಿನ ವಾಸವದತ್ತಾ ವಿದ್ಯಾವಿಹಾರ ಶಾಲೆಯ ತಂಡ (ಪ್ರಥಮ), ವಾಡಿಯ ಡಿ.ಎ.ವಿ ಶಾಲೆಯ ತಂಡ (ದ್ವಿತೀಯ),
14 ವರ್ಷದ ಬಾಲಕಿಯರ ವಿಭಾಗ: ಛತ್ರಶಾಲಾ ವಿಕಟ್ ಸಾಗರ್ ವಿದ್ಯಾಮಂದಿರ ತಂಡ (ಪ್ರಥಮ), ಮಹಾದೇವಮ್ಮ ಪಾಟೀಲ್ ಶಾಲೆಯ ತಂಡ (ದ್ವಿತೀಯ) ವಿಜೇತರಾಗಿ ಬಹುಮಾನ ಪಡೆದುಕೊಂಡವು.
17 ವರ್ಷದ ಬಾಲಕರ ವಿಭಾಗ: ಮಹಾದೇವಮ್ಮ ಪಾಟೀಲ್ ಶಾಲೆಯ ತಂಡ (ಪ್ರಥಮ), ಡಿ.ಎ.ವಿ ಶಾಲೆಯ ತಂಡ (ದ್ವಿತೀಯ),
17 ವರ್ಷದ ಬಾಲಕಿಯರ ವಿಭಾಗ: ಮಹಾದೇವಮ್ಮ ಪಾಟೀಲ್ ಶಾಲೆಯ ತಂಡ (ಪ್ರಥಮ), ಮಳಖೇಡದ ಆದಿತ್ಯ ಬಿರ್ಲಾ ಶಾಲೆ ತಂಡ (ದ್ವಿತೀಯ) ವಿಜೇತರಾಗಿ ಬಹುಮಾನ ಪಡೆದುಕೊಂಡವು. ವಿಜೇತ ತಂಡಗಳಿಗೆ ಬಹುಮಾನ ಮತ್ತು ಪ್ರಮಾಣ ಪತ್ರ ನೀಡಲಾಯಿತು. ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದ ಎಲ್ಲಾ ಸ್ಪರ್ಧಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು.
ಕಲಬುರಗಿ, ಛತ್ರಶಾಲಾ, ವಾಡಿ, ದಿಗ್ಗಾಂವ, ಸೇಡಂ, ಮಳಖೇಡ, ಚಿತ್ತಾಪುರ ಸೇರಿದಂತೆ ಒಟ್ಟು ಒಂಭತ್ತು ಸಿ.ಬಿ.ಎಸ್.ಇ ಶಾಲೆಗಳ ವಿದ್ಯಾರ್ಥಿಗಳು ಹಾಗೂ ದೈಹಿಕ ಶಿಕ್ಷಣ ಶಿಕ್ಷಕರು ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದರು.
ಒಂಭತ್ತನೇ ತರಗತಿಯ ವಿದ್ಯಾರ್ಥಿನಿ ಭವಾನಿ ಪ್ರಮೋದರೆಡ್ಡಿ ಸ್ವಾಗತಿಸಿದರು. ಒಂಭತ್ತನೇ ತರಗತಿ ವಿದ್ಯಾರ್ಥಿನಿ ಶಿವಲೀಲಾ ಭೋಜಪ್ಪ ಬೋಧಿಸಿದರು. ಹತ್ತನೇ ತರಗತಿ ವಿದ್ಯಾರ್ಥಿನಿ ಶೋಭಿತಾ ಬಸವರಾಜ ನಿರೂಪಿಸಿದರು. ಸ್ಫೂರ್ತಿ ಶರಣಗೌಡ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.