
ಸೋಮವಾರಪೇಟೆ: ಸಮಾಜದಲ್ಲಿ ಸಮಾನತೆ ಮತ್ತು ಮಾನವೀಯತೆ ಬೆಳೆಸುವಲ್ಲಿ ಅವರ ಚಿಂತನೆಗಳ ಮಾರ್ಗದರ್ಶನ ಅತ್ಯವಶ್ಯಕ ಎಂದು ‘ಸೂಡ’ ಅಧ್ಯಕ್ಷ ಕೆ.ಎ.ಆದಂ ಅಭಿಪ್ರಾಯಪಟ್ಟರು.
ಸಮಾಜ ಕಲ್ಯಾಣ ಇಲಾಖೆಯ ಆಶ್ರಯದಲ್ಲಿ ಶನಿವಾರ ಅಂಬೇಡ್ಕರ್ ಭವನದಲ್ಲಿ ನಡೆದ ಭಾರತ ಸಂವಿಧಾನ ಶಿಲ್ಪಿ, ಮಹಾನ್ ಚಿಂತಕ ಡಾ.ಬಿ.ಆರ್.ಅಂಬೇಡ್ಕರ್ ಅವರ 69ನೇ ಮಹಾ ಪರಿನಿಬ್ಭಾಣ ದಿನದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ಮಾನವ ಸಮಾಜಕ್ಕೆ ನೀಡಿದ ಸಂದೇಶಗಳು, ಸಮಾನತೆ, ಸ್ವಾತಂತ್ರ್ಯ ಮತ್ತು ಬಾಂಧವ್ಯ ಎಂಬ ಮೂರು ಮಹಾ ಮೌಲ್ಯಗಳ ಮೇಲೆ ನಿಂತಿವೆ. ಸಂವಿಧಾನ ರಚನೆ ಮಾಡಿದ ಮಹಾಯೋಗಿ ಅಂಬೇಡ್ಕರ್ ಅವರ ಕನಸಿನ ಭಾರತವನ್ನು ಕಟ್ಟುವ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ’ ಎಂದು ಹೇಳಿದರು.
ದಲಿತಪರ ಹೋರಾಟಗಾರ ಡಿ.ಎಸ್.ನಿರ್ವಾಣಪ್ಪ ಮಾತನಾಡಿ, ‘ಡಾ.ಅಂಬೇಡ್ಕರ್ ಅವರ ಬಡವರ ಪರ ಹೋರಾಟ, ಸಮಾಜದ ಶೋಷಿತರಿಗೆ ನೀಡಿದ ಧ್ವನಿ, ಸಂವಿಧಾನ ರೂಪಿಸುವಲ್ಲಿ ತೋರಿದ ದೃಢಸಂಕಲ್ಪ ಹೊಂದುವ ಮೂಲಕ ದೀನ ದಲಿತರ ಪರವಾಗಿ ಕೆಲಸ ಮಾಡಿದ್ದಾರೆ. ಅವರ ಹೋರಾಟದಿಂದಾಗಿ ಇಂದಿಗೂ ನಾವುಗಳೆಲ್ಲರೂ, ನೆಮ್ಮಧಿಯ ಬದುಕು ಕಾಣುವಂತಾಗಿದೆ’ ಎಂದರು.
ಮುಖಂಡರಾದ ವೇದಕುಮಾರ್, ಎಚ್.ಎ.ನಾಗರಾಜ್, ಹೊನ್ನಪ್ಪ, ಟಿ.ಈ.ಸುರೇಶ್, ಸಂದೀಪ್, ದಾಮೋದರ್, ವಿವಿಧ ಇಲಾಖಾಧಿಕಾರಿಗಳು, ಅಂಗನವಾಡಿ ಶಿಕ್ಷಕರು ಮತ್ತು ವಿವಿಧ ಸಂಘಟನೆಗಳ ಪ್ರಮುಖರು ಭಾಗವಹಿಸಿದ್ದರು. ಕಾರ್ಯಕ್ರಮದ ಆರಂಭದಲ್ಲಿ ಡಾ.ಅಂಬೇಡ್ಕರ್ ಅವರ ಪ್ರತಿಮೆಗೆ ಪುಷ್ಪಾರ್ಚನೆ ಮಾಡುವುದರೊಂದಿಗೆ ನಮನ ಸಲ್ಲಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.