
ಸಿ.ವಿ. ಚಂದ್ರಶೇಖರ್
ಕೊಪ್ಪಳ: ‘ಅನುದಾನ ಹಾಗೂ ಇಚ್ಛಾಶಕ್ತಿ ಇಲ್ಲದೆ ತಮ್ಮ ಕ್ಷೇತ್ರಗಳು ಅಭಿವೃದ್ಧಿಯಾಗುತ್ತಿಲ್ಲ ಎಂದು ಕಾಂಗ್ರೆಸ್ ಪಕ್ಷದ ಅನೇಕ ಶಾಸಕರು ಸಾರ್ವಜನಿಕವಾಗಿ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಗೃಹ ಮಂತ್ರಿ ಜಿ. ಪರಮೇಶ್ವರ್ ಅವರು ಮುಖ್ಯಮಂತ್ರಿ ಬಳಿ ಹಣವಿಲ್ಲ ಎಂದಿದ್ದಾರೆ. ಕೊಪ್ಪಳ ಕ್ಷೇತ್ರದಲ್ಲಿ ರಸ್ತೆಗಳಷ್ಟೇ ಮಾಯವಾಗಿಲ್ಲ. ಅಭಿವೃದ್ಧಿ ಹಾಗೂ ಇಚ್ಛಾಶಕ್ತಿಯೂ ಮಾಯವಾಗಿದೆ’ ಎಂದು ಜೆಡಿಎಸ್ ರಾಜ್ಯ ಕೋರ್ಕಮಿಟಿ ಸದಸ್ಯ ಸಿ.ವಿ. ಚಂದ್ರಶೇಖರ್ ಹೇಳಿದರು.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು ‘ಕೊಪ್ಪಳ ವಿಧಾನಸಭಾ ಕ್ಷೇತ್ರದಲ್ಲಿ ಮೂಲ ಸೌಕರ್ಯಗಳಿಲ್ಲ. ಕಾರ್ಖಾನೆಗಳಿಂದ ಪರಿಸರ ಮಾಲಿನ್ಯ, ನಿರುದ್ಯೋಗ, ಅನಿಯಂತ್ರಿತ ಮರಳು ದಂಧೆ ಅವ್ಯಾಹತವಾಗಿದೆ. ಸರ್ಕಾರ ಕೊಪ್ಪಳ ಕ್ಷೇತ್ರಕ್ಕೆ ಅನುದಾನ ನೀಡಿಲ್ಲವೋ, ಅನುದಾನ ಬಿಡುಗಡೆಯಾದರೂ ಕೆಲಸ ಮಾಡುತ್ತಿಲ್ಲವೋ ಎನ್ನುವುದನ್ನು ಶಾಸಕ ರಾಘವೇಂದ್ರ ಹಿಟ್ನಾಳ ಬಹಿರಂಗಪಡಿಸಬೇಕು’ ಎಂದು ಆಗ್ರಹಿಸಿದ್ದಾರೆ.
‘ಅಭಿವೃದ್ಧಿಯ ಕನಸು ಕಂಡ ಮತದಾರರು ಶಾಸಕ ಸ್ಥಾನ ಕಲ್ಪಿಸಿದ್ದಾರೆ. ಶಾಸಕರು ವಿಧಾನಸೌಧದಲ್ಲಿ ಮಾತನಾಡಿದ್ದು ಹಾಗೂ ಕೆಲಸ ಮಾಡಿದ್ದು ಎರಡೂ ಕಡಿಮೆಯೇ. ಕೊಪ್ಪಳದಲ್ಲಿ ಯಾಕೆ ಅಭಿವೃದ್ಧಿ ಮಾಯವಾಗಿದೆ. ಕೋಟ್ಯಂತರ ರೂಪಾಯಿ ಅನುದಾನದ ಬಂದಿದೆ ಎಂದು ಕೇವಲ ಪತ್ರಿಕಾ ಹೇಳಿಕೆಗಳನ್ನು ಬಿಡುಗಡೆ ಮಾಡಿದರೆ ಸಾಲದು. ಅಭಿವೃದ್ಧಿ ಕಾಮಗಾರಿಗಳ ವಾಸ್ತವಾಂಶ ಬಹಿರಂಗಪಡಿಸಬೇಕು’ ಎಂದು ಅವರು ಒತ್ತಾಯಿಸಿದ್ದಾರೆ. ಇಲ್ಲವಾದರೆ ಸರಣಿ ಹೋರಾಟ ನಡೆಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.