ADVERTISEMENT

ಕಾರಟಗಿ | ಲೋಕಾಯುಕ್ತ ದಾಳಿ: ಸರ್ವೇಯರ್‌ ವಿಜಯ್ ಚವ್ಹಾಣ ಬಂಧನ

​ಪ್ರಜಾವಾಣಿ ವಾರ್ತೆ
Published 20 ಮೇ 2025, 16:12 IST
Last Updated 20 ಮೇ 2025, 16:12 IST
<div class="paragraphs"><p>ಬಂಧನ </p></div>

ಬಂಧನ

   

ಕಾರಟಗಿ: ರೈತರೊಬ್ಬರ ಜಮೀನಿನ ಪೋಡಿಗಾಗಿ ಹಣಕ್ಕೆ ಬೇಡಿಕೆ ಇಟ್ಟು, ಹಣ ಪಡೆಯುವಾಗಲೇ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ, ಸರ್ವೇಯರ್‌ನನ್ನು ಬಂಧಿಸಿದ ಘಟನೆ ಸೋಮವಾರ ರಾತ್ರಿ ತಾಲ್ಲೂಕಿನ ಅರುಣೋದಯ ಕ್ಯಾಂಪ್‌ನಲ್ಲಿ ಜರುಗಿದೆ.

ತಾಲ್ಲೂಕು ಸರ್ವೇಯರ್‌ ವಿಜಯ್ ಚವ್ಹಾಣ ಬಂಧಿತ ಆರೋಪಿ.

ಸಂತೋಷಕುಮಾರ ಎಂಬುವವರಿಗೆ ಸೇರಿದ 6 ಎಕರೆ ಜಮೀನಿನ ಪೋಡಿ ಮಾಡಿಕೊಡಲು ಸರ್ವೇಯರ್‌ ವಿಜಯ ಚವ್ಹಾಣ ಅವರು ಸತಾಯಿಸಿ ವಿನಾಕಾರಣ ವಿಳಂಬ ಮಾಡುತ್ತಿದ್ದರು. ರೈತರು ಮತ್ತೆ, ಮತ್ತೆ ಪೋಡಿಗೆ ಒತ್ತಾಯಿಸಿದಾಗ ₹ 50 ಸಾವಿರಕ್ಕೆ ಬೇಡಿಕೆ ಇಟ್ಟಿದ್ದರು. ರೈತ ಲೋಕಾಯುಕ್ತಕ್ಕೆ ದೂರು ಸಲ್ಲಿಸಿ, ನ್ಯಾಯ ಕೋರಿದ್ದರು. ಸೋಮವಾರ ರಾತ್ರಿ ಅರುಣೋದಯ ಕ್ಯಾಂಪ್‌ನಲ್ಲಿದ್ದ ಸರ್ವೇಯರ್‌ ವಿಜಯ್‌ ಚವ್ಹಾಣಗೆ ₹30 ಸಾವಿರ ನಗದು ಹಣ ನೀಡುವಾಗಲೇ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದರು. ಹಣ ಮತ್ತು ಇತರ ದಾಖಲೆಗಳೊಂದಿಗೆ ಸರ್ವೇಯರ್‌ ವಿಜಯ ಚವ್ಹಾಣ ಅವರನ್ನು ಬಂಧಿಸಿ, ವಿಚಾರಣೆ ನಡೆಸಿದರು ಎಂದು ಮೂಲಗಳು ತಿಳಿಸಿವೆ.

ಮಂಗಳವಾರ ಗಂಗಾವತಿ ನ್ಯಾಯಾಲಯಕ್ಕೆ ಆರೋಪಿಯನ್ನು ಹಾಜರು ಪಡಿಸಲಾಗಿದ್ದು, ನ್ಯಾಯಾಧೀಶರು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ ಎಂದು ಲೋಕಾಯುಕ್ತ ಮೂಲಗಳು ತಿಳಿಸಿವೆ.

ಕೊಪ್ಪಳ ಲೋಕಾಯುಕ್ತ ಡಿವೈಎಸ್‌ಪಿ ವಂಸಂತಕುಮಾರ ನೇತೃತ್ವದಲ್ಲಿ ಇನ್‌ಸ್ಪೆಕ್ಟರ್‌ಗಳಾದ ಚಂದ್ರಪ್ಪ, ಸುನೀಲ್, ನಾಗರತ್ನ ಮತ್ತು ಸಿಬ್ಬಂದಿ ದಾಳಿ ನಡೆಸಿದ್ದರು. ತಡರಾತ್ರಿಯವರೆಗೆ ವಿಚಾರಣೆ ನಡೆದಿತ್ತು.

ಮತ್ತೊಂದು ಎಫ್‌ಐಆರ್‌ ದಾಖಲು: ಲೋಕಾಯುಕ್ತರ ತಂಡ ದಾಳಿ ನಡೆಸಿದ ಸಂದರ್ಭದಲ್ಲಿ ಸರ್ವೇಯರ್‌ ವಿಜಯ ಚವ್ಹಾಣರನ್ನು ಬೆಂಬಲಿಸಿ, ಲೋಕಾಯುಕ್ತ ತಂಡದ ಕ್ರಮಕ್ಕೆ ಆಕ್ಷೇಪಿಸಿ, ಹಲ್ಲೆ ನಡೆಸಲು ಮುಂದಾದ ಕೆಲವರು ಕಾರ್ಯಚರಣೆಗೆ ಅಡ್ಡಿಪಡಿಸಿದರು.

ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಸರ್ವೇಯರ್‌ ವಿಜಯ್‌ ಚವ್ಹಾಣ ಕುಟುಂಬದ ಸದಸ್ಯರಾದ ವಿಜಯ ಚವ್ಹಾಣ, ಲಿಂಬಾಜಿ, ಶಾಂತಾಬಾಯಿ, ಕಾಜಲ್‌, ರಾಜು ಸೇರಿದಂತೆ ಇತರ 50 ಜನರ ವಿರುದ್ಧ ಕಾರಟಗಿ ಪೊಲೀಸರಿಗೆ ಲೋಕಾಯುಕ್ತ ಇನ್‌ಸ್ಪೆಕ್ಟರ್‌ ಚಂದ್ರಪ್ಪ ಈಟಿ ಮಂಗಳವಾರ ರಾತ್ರಿ ದೂರು ಸಲ್ಲಿಸಿದ್ದಾರೆ.

ಕಾರಟಗಿ ಪೊಲೀಸ್‌ ಠಾಣೆ ಇನ್‌ಸ್ಪೆಕ್ಟರ್‌ ಸುಧೀರಕುಮಾರ ಬೆಂಕಿ ಪ್ರತಿಕ್ರಿಯಿಸಿ, ಲೋಕಾಯುಕ್ತ ಅಧಿಕಾರಿಗಳು ದೂರು ಸಲ್ಲಿಸಿದ್ದು, ಪ್ರಕರಣ ದಾಖಲಾಗಿದೆ. ಎಎಸ್‌ಐ ಭರಮಪ್ಪ ತನಿಖೆ ಕೈಗೊಂಡಿದ್ದಾರೆ’ ಎಂದು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.