
ಕೊಪ್ಪಳ: ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ಪ್ರಮುಖ ರಸ್ತೆಗಳಲ್ಲಿ ಹಾಗೂ ಬಡಾವಣೆಗಳಲ್ಲಿ ತರಹೇವಾರಿ ಬಣ್ಣಗಳ ವಿದ್ಯುತ್ ದೀಪಗಳ ಹೊಳಪು ಕಂಡುಬರುತ್ತಿದೆ. ಎಲ್ಲೆಡೆಯೂ ಗಣೇಶ ಮೂರ್ತಿಗಳ ಮಾರಾಟ ಹಾಗೂ ಖರೀದಿಯ ಉತ್ಸಾಹವೂ ಇದೆ.
ಶ್ರಾವಣ ಮಾಸ ಮುಗಿದ ತಕ್ಷಣವೇ ಬರುವ ಮೊದಲ ಹಬ್ಬ ಗೌರಿ ಹಾಗೂ ಗಣೇಶನ ಪ್ರತಿಷ್ಠಾಪನೆ ಜನರಲ್ಲಿ ಹುಮ್ಮಸ್ಸು ಮೂಡಿಸಿದೆ. ಅದರಲ್ಲಿಯೂ ವಿಶೇಷವಾಗಿ ಯುವಜನತೆಯಲ್ಲಿ ಗಣಪತಿ ಹಬ್ಬ ಹಬ್ಬದ ಹುಮಸ್ಸು ನೂರ್ಮಡಿಯಾಗಿದೆ. ಹಬ್ಬದ ತಿಂಗಳು ಮೊದಲೇ ಸಾರ್ವಜನಿಕರಿಂದ ಹಾಗೂ ಬಡಾವಣೆಯ ಜನರಿಂದ ಮನೆಮನೆಗೆ ಹೋಗಿ ಹಣ ಸಂಗ್ರಹಿಸಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಲಾಗುತ್ತದೆ.
ಸಾರ್ವಜನಿಕ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಪರವಾನಗಿ ಕಡ್ಡಾಯ ಮಾಡಿರುವುದರಿಂದ ಆಯಾ ಪೊಲೀಸ್ ಠಾಣೆಗಳಲ್ಲಿ ಜನಸಂದಣೆಯೂ ಹೆಚ್ಚಾಗಿತ್ತು. ಈ ಕುರಿತು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರು ಇತ್ತೀಚೆಗೆ ಸಭೆ ನಡೆಸಿ ಶಾಂತಿಗೆ ಧಕ್ಕೆಯಾಗದಂತೆ ಹಬ್ಬ ಆಚರಿಸಬೇಕು. ಪರವಾನಗಿ ಕಡ್ಡಾಯವಾಗಿ ಪಡೆಯಬೇಕು ಎಂದು ಸೂಚಿಸಿದ್ದಾರೆ.
ಕೊಪ್ಪಳ ಕಾ ರಾಜಾ, ಕೊಪ್ಪಳ ಕಾ ಸಾಮ್ರಾಟ, ಗಜಾನನ ಗೆಳೆಯರ ಬಳಗ, ಗಜಾನನ ಕೆಜಿಎಫ್ ಗೆಳೆಯರ ಬಳಗ, ಕೋಟೆ ರಸ್ತೆಯಲ್ಲಿ ವಿನಾಯಕ ಮಿತ್ರಮಂಡಳಿ, ಕಾವ್ಯಾನಂದ ಉದ್ಯಾನದಲ್ಲಿ ಹಿಂದೂ ಮಹಾ ಮಂಡಳಿ, ಮೇದಾರ ಕೇತೇಶ್ವರ ಯುವಕ ಮಂಡಳಿ ಹೀಗೆ ಅನೇಕ ಸಂಘಗಳು ದೊಡ್ಡಗಾತ್ರದ ಗಣೇಶ ಮೂರ್ತಿಗಳನ್ನು ಪ್ರತಿವರ್ಷವೂ ಪ್ರತಿಷ್ಠಾಪನೆ ಮಾಡುತ್ತಲೇ ಬಂದಿವೆ. ಈ ವರ್ಷವೂ ಅಗತ್ಯ ಸಿದ್ಧತೆ ಮಾಡಿಕೊಂಡಿದ್ದು, ಜವಾಹರ ರಸ್ತೆಯ ಎರಡೂ ಬದಿಗಳಲ್ಲಿ ಅಳವಡಿಸಿರುವ ವಿದ್ಯುತ್ ದೀಪಗಳು ಮತ್ತು ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಹಾಕಿರುವ ಟೆಂಟ್ಗಳು ಗಮನ ಸೆಳೆಯುವಂತಿವೆ.
ಮಾರುಕಟ್ಟೆಯಲ್ಲಿಯೂ ಸಂಭ್ರಮ: ನಗರದಾದ್ಯಂತ ಶುಕ್ರವಾರ ಮನೆಗಳಲ್ಲಿ ಮಹಿಳೆಯರು ಸ್ವರ್ಣಗೌರಿ ಪೂಜೆ ಸಲ್ಲಿಸಿದರು. ಗಣೇಶ ಹಬ್ದದ ಪೂಜೆಗೆ ಮಾರುಕಟ್ಟೆಯಲ್ಲಿ ಬಾಳೆದಿಂಡು, ಬೆಳೆ ಎಲೆ, ಬಾಳೆಹಣ್ಣು, ಸೇಬುಹಣ್ಣು, ಮೋಸಂಬಿ ಹಣ್ಣು ಹೀಗೆ ತರಹೇವಾರಿ ಹಣ್ಣುಗಳ ಖರೀದಿ ಜೋರಾಗಿತ್ತು. ಮಲ್ಲಿಗೆ, ಕನಕಾಂಬರ, ಸೇವಂತಿಗೆ, ಚೆಂಡು ಹೂ ಕೂಡ ಮಾರುಕಟ್ಟೆಯಲ್ಲಿ ಖರೀದಿ ನಡೆದಿತ್ತು.
ಕೊಪ್ಪಳದಲ್ಲಿ ಮೂರು, ಐದು ಹಾಗೂ ಹನ್ನೊಂದು ದಿನಗಳ ತನಕ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಲಾಗುತ್ತಿದ್ದು, ಬಹುತೇಕ ಸಂಘಟನೆಗಳು ನಿತ್ಯವೂ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿವೆ.
ಎಲ್ಲರೂ ಸೌಹಾರ್ದದಿಂದ ಹಬ್ಬ ಆಚರಿಸುವಂತೆ ಈಗಾಗಲೇ ಮನವಿ ಮಾಡಲಾಗಿದೆ. ರೌಡಿಗಳಿಗೆ ಎಚ್ಚರಿಕೆ ನೀಡಲಾಗಿದೆ. ಎಲ್ಲವೂ ಸುಗಮವಾಗಿ ಸಾಗಲು ಸಾರ್ವಜನಿಕರ ಸಹಭಾಗಿತ್ವ ಅಗತ್ಯ.ಡಾ. ರಾಮ್ ಎಲ್. ಅರಸಿದ್ಧಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ
ಕೊಪ್ಪಳ: ಗಣೇಶ ಹಬ್ಬದ ಅಂಗವಾಗಿ ವಿವಿಧ ಸಂಘಟನೆಗಳು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿವೆ. ಸಿಂಪಿ ಲಿಂಗಣ್ಣ ರಸ್ತೆಯಲ್ಲಿ ಗಜಾನನ ಗೆಳೆಯರ ಬಳಗ ಪ್ರತಿಷ್ಠಾಪಿಸಲಿರುವ ಗಣೇಶ ಮೂರ್ತಿ ಬಳಿ ಕನ್ನಡದ ಕೋಟ್ಯಾಧಿಪತಿ ಹಾಗೂ ಥಟ್ ಅಂತ ಹೇಳಿ ಕಾರ್ಯಕ್ರಮಗಳ ಮಾದರಿಯಲ್ಲಿ ಸೆ. 9ರಂದು ಕೊಪ್ಪಳದ ಕೋಟ್ಯಾಧಿಪತಿ ಕಾರ್ಯಕ್ರಮ ಆಯೋಜಿಸಿದೆ. ರಸಪ್ರಶ್ನೆ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಸೆ. 8ರೊಳಗೆ ಹೆಸರು ನೋಂದಾಯಿಸಬೇಕು. ಇವುಗಳ ಜೊತೆಗೆ ಮಕ್ಕಳಿಗಾಗಿ ಸ್ಲೋ ಸೈಕ್ಲಿಂಗ್ ರೇಸ್ ಸೂಪರ್ ಮಿನಿಟ್ ಮಹಿಳೆಯರಿಗಾಗಿ ರಂಗೋಲಿ ಸ್ಪರ್ಧೆ ಎಲ್ಲ ವಯೋಮಾನದವರಿಗೆ ಚೆಸ್ ಕೇರಂ ಸ್ಪರ್ಧೆ ವಿವಾಹಿತರಿಗೆ ಆದರ್ಶ ದಂಪತಿ ಕಾರ್ಯಕ್ರಮ ಆಯೋಜಿಸಲಾಗಿದೆ. ಕೊಪ್ಪಳದ ಕೋಟ್ಯಾಧಿಪತಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಕನಿಷ್ಠ 12 ವರ್ಷ ವಯಸ್ಸಾಗಿರಬೇಕು. ಈ ಕುರಿತು ಹೆಚ್ಚಿನ ಮಾಹಿತಿಗಾಗಿ 9380605892 ಸಂಪರ್ಕಿಸಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.