
ಗಂಗಾವತಿ: ‘ನಗರದ ಬೈಪಾಸ್ ರಸ್ತೆಯಲ್ಲಿನ ಬಾಲಾಜಿ ಗ್ಯಾಸ್ ಕಂಪನಿಯ ಗೋಡೌನ್ ಸ್ಥಳಾಂತರ ಮಾಡಿದ್ದು, ಇಲ್ಲಿನ ಹಮಾಲಿ ಕಾರ್ಮಿಕರಿಗೆ ಕೆಲಸವಿಲ್ಲದಂತಾಗಿದೆ. ಹಾಗಾಗಿ ಗ್ಯಾಸ್ ಕಂಪನಿಯವರು ಕಾರ್ಮಿಕರಿಗೆ ಪರಿಹಾರ ಒದಗಿಸಬೇಕು’ ಎಂದು ಒತ್ತಾಯಿಸಿ ಗ್ಯಾಸ್ ಕಂಪನಿ ಎದುರು ಹಮಾಲಿ ಫೆಡರೇಷನ್ ಬಜಾರ ಹಮಾಲರ ಸಂಘ ಹಾಗೂ ಸಿಐಟಿಯು ಸಂಘಟನೆ ಸದಸ್ಯರು ಬುಧವಾರ ಪ್ರತಿಭಟನೆ ನಡೆಸಿದರು.
ಸಂಘಟನೆ ಜಿಲ್ಲಾಧ್ಯಕ್ಷ ನಿರುಪಾದಿ ಬೆಣಕಲ್ ಮಾತನಾಡಿ,‘ ಬಾಲಾಜಿ ಗ್ಯಾಸ್ ಕಂಪನಿಯನ್ನು ಗಂಗಾವತಿ ನಗರದಲ್ಲಿ ಸ್ಥಾಪನೆ ಮಾಡಿದ ನಂತರ ಇಲ್ಲಿ ಹಲವು ಹಮಾಲಿ ಕೂಲಿ ಕಾರ್ಮಿಕರು ಸಿಲಿಂಡರ್ ಲೋಡ್ ಮಾಡುವುದು, ಇಳಿಸುವ ಕೆಲಸ ಮಾಡಿಕೊಂಡಿದ್ದಾರೆ. ಸದ್ಯ ಏಕಾಏಕಿ ಗ್ಯಾಸ್ ಕಂಪನಿ ಗೋಡೌನ್ಅನ್ನು ಚಿಕ್ಕಜಂತಕಲ್ ಸಮೀಪದ ನಾಗನಹಳ್ಳಿ ಗ್ರಾಮಕ್ಕೆ ಸ್ಥಳಾಂತರ ಮಾಡಿದ್ದಾರೆ. ಇದರಿಂದ 12 ಜನ ಹಮಾಲಿ ಕಾರ್ಮಿಕರಿಗೆ ಕೆಲಸವಿಲ್ಲದಂತಾಗಿದೆ. ಇವರಿಗೆ ಈವರೆಗೆ ಗ್ಯಾಸ್ ಕಂಪನಿ ಕಾರ್ಮಿಕ ಕಾಯ್ದೆಯ ಪ್ರಕಾರ ಯಾವ ಸೌಲಭ್ಯವನ್ನೂ ನೀಡಿಲ್ಲ. ಸ್ಥಳಾಂತರದ ನಂತರ ಕಾರ್ಮಿಕರಿಗೆ ಪರಿಹಾರವು ವಿತರಿಸಿಲ್ಲ. ಕೂಡಲೇ ಕಾರ್ಮಿಕ ಇಲಾಖೆ ಅಧಿಕಾರಿಗಳು ಎಚ್ಚೆತ್ತು ಗ್ಯಾಸ್ ಕಂಪನಿಯವರ ಮೇಲೆ ಕಾನೂನು ಕ್ರಮಕ್ಕೆ ಮುಂದಾಗಬೇಕು’ ಎಂದು ಒತ್ತಾಯಿಸಿ, ಮನವಿ ಸಲ್ಲಿಸಿದರು.
ಸಂಘಟನೆ ಸದಸ್ಯರಾದ ಎ.ರಮೇಶ, ಮಂಜುನಾಥ ಡಗ್ಗಿ, ಕೃಷ್ಣಪ್ಪ, ರವಿ ಅಕ್ಕಿರೊಟ್ಟಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.