ADVERTISEMENT

ಅನ್ನ, ವಿದ್ಯೆಯಲ್ಲಿ ಮಠಗಳ ಕ್ರಾಂತಿ: ಸಚಿವ ಶರಣ ಪ್ರಕಾಶ ಪಾಟೀಲ ಶ್ಲಾಘನೆ

ಉನ್ನತ ಶಿಕ್ಷಣ ಸಚಿವ ಶರಣ ಪ್ರಕಾಶ ಪಾಟೀಲ ಶ್ಲಾಘನೆ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2025, 5:34 IST
Last Updated 25 ಅಕ್ಟೋಬರ್ 2025, 5:34 IST
ಆದಿಚುಂಚನಗಿರಿ ವೈದ್ಯಕೀಯ ವಿಜ್ಞಾನ ಸಂಸ್ಥೆ–2025ನೇ ಸಾಲಿನ ವೈದ್ಯಕೀಯ ಮತ್ತು ಸಂಬಂಧಿತ ಆರೋಗ್ಯ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಗಣ್ಯರು ಹಾಗೂ ವಿದ್ಯಾರ್ಥಿ ವೃಂದ
ಆದಿಚುಂಚನಗಿರಿ ವೈದ್ಯಕೀಯ ವಿಜ್ಞಾನ ಸಂಸ್ಥೆ–2025ನೇ ಸಾಲಿನ ವೈದ್ಯಕೀಯ ಮತ್ತು ಸಂಬಂಧಿತ ಆರೋಗ್ಯ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಗಣ್ಯರು ಹಾಗೂ ವಿದ್ಯಾರ್ಥಿ ವೃಂದ   

ನಾಗಮಂಗಲ: ‘ಕರ್ನಾಟಕ ಅತ್ಯಂತ ಪಾರಂಪರಿಕ ರಾಜ್ಯವಾಗಿದ್ದು, ಮಠ ಮಾನ್ಯಗಳು ಅತ್ಯಂತ ದೊಡ್ಡ ಕೊಡುಗೆ ನೀಡುತ್ತಿವೆ. ಇದೇ ಮಾರ್ಗದಲ್ಲಿ ಆದಿಚುಂಚನಗಿರಿ ಮಹಾಸಂಸ್ಥಾನ ಮಠವು ಶಿಕ್ಷಣ, ದಾಸೋಹದಲ್ಲಿ ಸಾಗುತ್ತಿದೆ’ ಎಂದು ಉನ್ನತ ಶಿಕ್ಷಣ ಸಚಿವ ಶರಣ ಪ್ರಕಾಶ ಪಾಟೀಲ ಶ್ಲಾಘಿಸಿದರು.

ತಾಲ್ಲೂಕಿನ ಬಿಜಿ ನಗರದ ಬಿಜಿಎಸ್ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಆದಿಚುಂಚನಗಿರಿ ವೈದ್ಯಕೀಯ ವಿಜ್ಞಾನ ಸಂಸ್ಥೆ 2025ನೇ ಸಾಲಿನ ವೈದ್ಯಕೀಯ ಮತ್ತು ಸಂಬಂಧಿತ ಆರೋಗ್ಯ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ವಿದ್ಯಾರ್ಥಿಗಳಿಗೆ ಜೀವನದಲ್ಲಿ ಹೊಸ ಹೆಜ್ಜೆ ಇಡುವ ಈ ಕಾರ್ಯಕ್ರಮ ಮಹತ್ವದ್ದಾಗಿದೆ. ಈ ಶಿಕ್ಷಣ ಸಂಸ್ಥೆಯಲ್ಲಿ ಓದುವ ಅವಕಾಶ ವಿಶೇಷವಾಗಿದೆ. ಆದಿಚುಂಚನಗಿರಿ ಮಠ ರಾಜ್ಯದಲ್ಲಷ್ಟೇ ಅಲ್ಲ, ಅಂತರ ಹಾಗೂ ರಾಷ್ಟ್ರೀಯ ಮಟ್ಟದಲ್ಲೂ ಪ್ರತಿಷ್ಠಿತವಾಗಿದೆ. ಬಾಲಗಂಗಾಧರನಾಥ ಸ್ವಾಮೀಜಿ ಅವರ ದೂರದೃಷ್ಟಿಯ ಫಲವಾಗಿ ಗ್ರಾಮೀಣ ಭಾಗದಲ್ಲಿ ಉತ್ತಮ ವೈದ್ಯಕೀಯ ಕಾಲೇಜು ತಲೆ ಎತ್ತಿದೆ’ ಎಂದು ಸ್ಮರಿಸಿದರು.

ADVERTISEMENT

‘ಕರ್ನಾಟಕದ ಜನತೆ ಸುಸಂಸ್ಕೃತರು ಅವರಿಗೆ ಮಠ ಮಾನ್ಯಗಳ ಮಾರ್ಗದರ್ಶನ ಸಿಕ್ಕಿದ್ದು, 12ನೇ ಶತಮಾನದಿಂದ ರಾಜ್ಯವನ್ನು ಮಠಗಳು ಸರಿದಾರಿಗೆ ತರುವಲ್ಲಿ ಮಹತ್ವದ ಪಾತ್ರ ನಿರ್ವಹಿಸಿವೆ. ಅನ್ನ ದಾಸೋಹದ ಜೊತೆಗೆ ವಿದ್ಯೆ ಅಳವಡಿಸಿಕೊಂಡು ಮಠಗಳು ಕ್ರಾಂತಿ ಮಾಡುತ್ತಿದೆ’ ಎಂದು ಅಭಿಪ್ರಾಯಪಟ್ಟರು.

ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಮಾತನಾಡಿ, ‘ಆದಿಚುಂಚನಗಿರಿ ವೈದ್ಯಕೀಯ ಮಹಾವಿದ್ಯಾಲಯದಿಂದ ಹೊರಹೋದ ವೈದ್ಯರು ಉತ್ತಮವಾಗಿ ಕಾರ್ಯನಿರ್ವಹಿಸಿ ಹೆಸರು ಮಾಡುತ್ತಿದ್ದಾರೆ. ಗ್ರಾಮೀಣ ಕೋಟಾದಲ್ಲಿ‌ ಶಿಕ್ಷಣ ಪಡೆಯುವ ವೈದ್ಯರು ಪದವಿ ಪಡೆದ ಕೂಡಲೆ ನಗರ ಪ್ರದೇಶಗಳತ್ತ ಮುಖ ಮಾಡುತ್ತಿರುವುದು ವಿಷಾದ ಸಂಗತಿ’ ಎಂದು ಬೇಸರ ವ್ಯಕ್ತಪಡಿಸಿದರು.

ಮಠದ ಸತ್‌ಕೀರ್ತಿನಾಥ ಸ್ವಾಮೀಜಿ, ಆದಿಚುಂಚನಗಿರಿ ವಿವಿ ಕುಲಪತಿ ಎಸ್.ಎನ್.ಶ್ರೀಧರ, ರಿಜಿಸ್ಟ್ರಾರ್ ಸಿ.ಕೆ. ಸುಬ್ಬರಾಯ, ಪ್ರಾಂಶುಪಾಲ ಎಂ.ಜಿ.ಶಿವರಾಮು, ಪಂಚಾಯತ್ ರಾಜ್ ಇಲಾಖೆಯ ಐಎಎಸ್ ಅರುಂಧತಿ ಚಂದ್ರಶೇಖರ್, ಆದಿಚುಂಚನಗಿರಿ ವಿಶ್ವವಿದ್ಯಾಲಯದ ಭಾಗವಹಿಸಿದ್ದರು.

ಪ್ರಥಮ ವರ್ಷದ 250 ವೈದ್ಯಕೀಯ ವಿದ್ಯಾರ್ಥಿಗಳು, ಆರೋಗ್ಯ ವಿಜ್ಞಾನ ವಿಭಾಗದ 116 ವಿದ್ಯಾರ್ಥಿಗಳು ಹಾಗೂ ‍ಪೋಷಕರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.