
ಮಂಡ್ಯ: ‘ಶ್ರೀರಂಗಪಟ್ಟಣ ತಾಲ್ಲೂಕಿನ ಕೃಷ್ಣರಾಜಸಾಗರ ಅಣೆಕಟ್ಟೆ ಭರ್ತಿಯಾಗಿದ್ದು, ಜೂನ್ 30ರಂದು ಬೆಳಿಗ್ಗೆ 11ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಜಿಲ್ಲೆಯ ಶಾಸಕರೊಂದಿಗೆ ಬಾಗಿನ ಅರ್ಪಿಸಲಿದ್ದಾರೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು.
ಶುಕ್ರವಾರ ಮಾಧ್ಯಮದವರೊಂದಿಗೆ ಮಾತನಾಡಿ, ‘ನಾವು ಅಧಿಕಾರಕ್ಕೆ ಬಂದಾಗಲೆಲ್ಲ ಮಳೆ ಬರುವುದಿಲ್ಲ, ಬರ ಬರುತ್ತದೆ ಅಂತಿದ್ದವರಿಗೆ ಈಗ ಪಾಪ ನಿದ್ದೆ ಬರುತ್ತಿಲ್ಲ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಎಲ್ಲ ಕೆರೆಕಟ್ಟೆಗಳು ತುಂಬುತ್ತಿವೆ. ಇದರಿಂದ ಬೆಳೆ ಚೆನ್ನಾಗಿ ಆಗುತ್ತದೆಂದು ಕೆಲವರಿಗೆ ಸಂಕಟವಾಗುತ್ತಿದೆ’ ಎಂದು ಬಿಜೆಪಿ ನಾಯಕರನ್ನು ಟೀಕಿಸಿದರು.
‘1960ರಿಂದ ಇದುವರೆಗೆ ಜೂನ್ನಲ್ಲೇ ಕೆಆರ್ಎಸ್ ಅಣೆಕಟ್ಟೆ ಭರ್ತಿಯಾಗಿರುವುದು ಇದೇ ಮೊದಲು. ಇದು ನಮ್ಮ ಭಾಗ್ಯ’ ಎಂದರು.
ಅಣೆಕಟ್ಟೆಗೆ ಧಕ್ಕೆಯಾಗದು:
‘ಅಮ್ಯೂಸ್ಮೆಂಟ್ ಪಾರ್ಕ್, ಕಾವೇರಿ ಆರತಿ ಕುರಿತು ಬೆಂಗಳೂರಿನಲ್ಲಿ ಇತ್ತೀಚೆಗೆ ಕರೆದಿದ್ದ ಸಭೆಗೆ, ದೇವನಹಳ್ಳಿ ಚಲೋ ಹೋರಾಟದ ಕಾರಣದಿಂದ ಕೆಲವರು ಬಂದಿರಲಿಲ್ಲ. ಯಾವುದೇ ಮಾಲಿನ್ಯವಾಗುವುದಿಲ್ಲ ಮತ್ತು ಅಣೆಕಟ್ಟೆ ಸುರಕ್ಷತೆಗೆ ಧಕ್ಕೆಯಾಗುವುದಿಲ್ಲ ಎಂದು ತಜ್ಞರು ವರದಿ ಕೊಟ್ಟಿದ್ದಾರೆ. ಹೋರಾಟಗಾರರೊಂದಿಗೆ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳುತ್ತೇವೆ’ ಎಂದರು.
‘ಸಭೆಯಲ್ಲಿ ಭಾಗವಹಿಸಿದ್ದವರು ನಕಲಿ ರೈತರು’ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿ, ‘ನಾವೆಲ್ಲ ನಕಲಿ, ಅವರೇ ಒಳ್ಳೆಯವರು ಬಿಡಿ. ನಮ್ಮಲ್ಲಿ ಯಾರೂ ರೈತರಿಲ್ವಾ?
ಕಿಸಾನ್ ಸಂಘವಿದೆ, ಅವರು ರೈತರಲ್ವಾ? ಅವರು ಹೋರಾಡಲಿ, ಅಭಿಫ್ರಾಯ ಕೊಡಲಿ. ಬೇರೆಯವರನ್ನು ಅನುಮಾನಿಸಬಾರದು. ಹೋರಾಟಗಾರರು ಸಭೆಗೆ ಬಂದಿದ್ರೆ ಸ್ವಾಗತವಿತ್ತು. ಜೆಡಿಎಸ್ನಲ್ಲಿ ಗುರುತಿಸಿಕೊಂಡ ರೈತರು ಬಂದಿರಲಿಲ್ಲ’ ಎಂದರು.
ನ್ಯಾಯಾಲಯಕ್ಕೆ ಎಲ್ಲರೂ ತಲೆಬಾಗಬೇಕು:
ಕಾವೇರಿ ಆರತಿ ಮತ್ತು ಅಮ್ಯೂಸ್ಮೆಂಟ್ ಪಾರ್ಕ್ ಅನುಷ್ಠಾನಕ್ಕೆ ನ್ಯಾಯಾಲಯ ತಡೆಯಾಜ್ಞೆ ನೀಡಿರುವ ಕುರಿತು ಪ್ರತಿಕ್ರಿಯಿಸಿ, ‘ನ್ಯಾಯಾಲಯಕ್ಕೆ ಎಲ್ಲರ ತಲೆ ಬಾಗಬೇಕು. ಸೂಕ್ತ ಸಮಜಾಯಿಷಿಯನ್ನು ಸರ್ಕಾರ ಕೊಡುತ್ತದೆ. ತಡೆಯಾಜ್ಞೆ ತೆರವುಗೊಳಿಸಿದರೆ, ಹೋರಾಟಗಾರರೊಂದಿಗೆ ಮಾತನಾಡುತ್ತೇವೆ. ಇಲ್ಲದಿದ್ದರೆ ನಾವು ಕೆಲಸ ಮಾಡಲಾಗುವುದಿಲ್ಲ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.