ADVERTISEMENT

ಸಮಾನತೆ, ಶಕ್ತಿ ತುಂಬಿದ ಮಹಾನಾಯಕ

ಅಂಬೇಡ್ಕರ್‌ ಮಹಾಪರಿನಿರ್ವಾಣ ದಿನ ಕಾರ್ಯಕ್ರಮದಲ್ಲಿ ತನ್ವೀರ್‌ ಸೇಠ್

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2025, 4:20 IST
Last Updated 7 ಡಿಸೆಂಬರ್ 2025, 4:20 IST
ಮೈಸೂರಿನಲ್ಲಿ ಅಂಬೇಡ್ಕರ್‌ ಮಹಾಪರಿನಿರ್ವಾಣ ದಿನದ ಅಂಗವಾಗಿ ಅವರ ಪ್ರತಿಮೆಗೆ ಜಿಲ್ಲಾಡಳಿತದಿಂದ ಮಾಲಾರ್ಪಣೆ ಮಾಡಲಾಯಿತು. ಜನಪ್ರತಿನಿಧಿಗಳು, ಮುಖಂಡರು ಹಾಗೂ ಅಧಿಕಾರಿಗಳು ಪಾಲ್ಗೊಂಡಿದ್ದರು
ಮೈಸೂರಿನಲ್ಲಿ ಅಂಬೇಡ್ಕರ್‌ ಮಹಾಪರಿನಿರ್ವಾಣ ದಿನದ ಅಂಗವಾಗಿ ಅವರ ಪ್ರತಿಮೆಗೆ ಜಿಲ್ಲಾಡಳಿತದಿಂದ ಮಾಲಾರ್ಪಣೆ ಮಾಡಲಾಯಿತು. ಜನಪ್ರತಿನಿಧಿಗಳು, ಮುಖಂಡರು ಹಾಗೂ ಅಧಿಕಾರಿಗಳು ಪಾಲ್ಗೊಂಡಿದ್ದರು   

ಮೈಸೂರು: ‘ಸಮಾನತೆ ಹಾಗೂ ಶಕ್ತಿ ತುಂಬಿದ ಮಹಾನಾಯಕ ಡಾ.ಬಿ.ಆರ್. ಅಂಬೇಡ್ಕರ್‌ ಅವರ ಆದರ್ಶ–ವ್ಯಕ್ತಿತ್ವ ನಮಗೆಲ್ಲ ಪ್ರೇರಣೆ’ ಎಂದು ನರಸಿಂಹರಾಜ ಕ್ಷೇತ್ರದ ಶಾಸಕ ತನ್ವೀರ್‌ ಸೇಠ್‌ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ ಹಾಗೂ ಮಹಾನಗರ ಪಾಲಿಕೆ ಸಹಯೋಗದಲ್ಲಿ ಅಂಬೇಡ್ಕರ್ ಅವರ 69ನೇ ಮಹಾಪರಿನಿರ್ವಾಣ ದಿನದ ಅಂಗವಾಗಿ ಇಲ್ಲಿನ ಪುರಭವನ ಆವರಣದ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ನಂತರ ಅವರು ಮಾತನಾಡಿದರು.

‘ಭಾರತದ ಎಲ್ಲಾ ವರ್ಗದ ಜನರಿಗೆ ಸಮಾನತೆಯನ್ನು ಸಾರುವ ಸಂವಿಧಾನವನ್ನು ನೀಡಿದ ಬಾಬಾಸಾಹೇಬರು ಭೌತಿಕವಾಗಿ ನಮ್ಮೊಂದಿಗೆ ಇಲ್ಲ. ಆದರೆ, ಕಟ್ಟಕಡೆಯ ಭಾರತೀಯನಿಗೂ ಸಂವಿಧಾನದ ಮೂಲಕ ಶಕ್ತಿ ತುಂಬಿದ್ದಾರೆ’ ಎಂದರು.

ADVERTISEMENT

ಭವನ ಪೂರ್ಣಗೊಳ್ಳಲಿ:

‘ಸಂವಿಧಾನದ ಆಶಯಗಳನ್ನು ಯಥಾವತ್ತಾಗಿ ಜಾರಿಗೊಳಿಸಲು ನಮ್ಮ ಸರ್ಕಾರ ಪ್ರತಿ ಶಾಲಾ–ಕಾಲೇಜುಗಳಲ್ಲಿ, ಸಭೆ–ಸಮಾರಂಭಗಳಲ್ಲಿ ಸಂವಿಧಾನದ ಪೀಠಿಕೆ ಬೋಧನೆ ಕಡ್ಡಾಯಗೊಳಿಸಿದೆ. ನಗರದಲ್ಲಿ ಅಂಬೇಡ್ಕರ್ ಭವನದ ಕಾಮಗಾರಿ ತ್ವರಿತವಾಗಿ ಪೂರ್ಣಗೊಂಡು ಸೇವೆಗೆ ದೊರೆಯುವಂತಾಗಲಿ’ ಎಂದು ಹೇಳಿದರು.

ಚಾಮರಾಜ ಕ್ಷೇತ್ರದ ಶಾಸಕ ಕೆ. ಹರೀಶ್ ಗೌಡ ಮಾತನಾಡಿ, ‘ಅಂಬೇಡ್ಕರ್‌ ನೀಡಿದ ಸಂವಿಧಾನವನ್ನು ದೇಶದ ಜನರೆಲ್ಲರೂ ಪಾಲಿಸುತ್ತಾ ಬದುಕುತ್ತಿದ್ದೇವೆ. ಅವರ ತತ್ವಗಳು ನಮಗೆ ಆದರ್ಶ’ ಎಂದರು. 

ಕೃಷ್ಣರಾಜ ಕ್ಷೇತ್ರದ ಶಾಸಕ ಟಿ.ಎಸ್. ಶ್ರೀವತ್ಸ,‌‌ ‘ದಲಿತರು ಹಾಗೂ ಮಹಿಳೆಯರಿಗೆ ಸಮಾಜದಲ್ಲಿ ಸಮಾನ ಅವಕಾಶ ಕಲ್ಪಿಸಿದ ಮೇರು ವ್ಯಕ್ತಿತ್ವ ಅವರದು. ಅವರ ಹಾದಿ ನಮಗೆಲ್ಲರಿಗೂ ಸ್ಫೂರ್ತಿದಾಯಕ’ ಎಂದು ನುಡಿದರು.

ಎಲ್ಲರೂ ಒಪ್ಪಬಹುದಾದ ರತ್ನ: 

ವಿಶ್ವಮೈತ್ರಿ ಬುದ್ಧವಿಹಾರದ ಕಲ್ಯಾಣಸಿರಿ ಭಂತೇಜಿ, ‘ಅಂಬೇಡ್ಕರ್‌ ಆಧುನಿಕ ಯುಗದಲ್ಲಿ ನಮಗೆ ಸಿಕ್ಕ ಭಾಗ್ಯವಿದಾತ ಹಾಗೂ ಎಲ್ಲರೂ ಒಪ್ಪಬಹುದಾದ ರತ್ನ’ ಎಂದರು.

‘ಅವರ ಚಿಂತನೆಗಳು ಸಾಮಾಜಿಕ ಮತ್ತು ಮಾನಸಿಕ ಆರೋಗ್ಯ ನೀಡುವಂತಹ ಪ್ರಬುದ್ಧವಾದ ಆಲೋಚನೆಯಾಗಿವೆ. ಧರ್ಮಾತೀತ, ಜಾತ್ಯತೀತ ಮನೋಭಾವ ಮತ್ತು ಮಾನವೀಯ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ನಾವು ಪ್ರಬುದ್ಧರಾಗಲು ಸಾಧ್ಯವಾಗುತ್ತದೆ’ ಎಂದು ತಿಳಿಸಿದರು.

‘ಮಾನವೀಯತೆ ಎಂಬುದು ಧರ್ಮದ ಪ್ರಮುಖ ದಾರಿಯಾಗಬೇಕು. ಇಡೀ ಜಗತ್ತಿನಲ್ಲಿ ಎಲ್ಲರನ್ನೂ ಮನುಷ್ಯರಂತೆ ಕಾಣಲು ಮಾನವೀಯತೆಯಿಂದ ಮಾತ್ರ ಸಾಧ್ಯ’ ಎಂದು ಪ್ರತಿಪಾದಿಸಿದರು. 

ಬೋಧಿರತ್ನ ಭಂತೇಜಿ, ಕಲ್ಯಾಣಸಿರಿ ಭಂತೇಜಿ, ಬುದ್ಧಪ್ರಕಾಶ ಭಂತೇಜಿ ಬುದ್ಧ, ಧರ್ಮ ಹಾಗೂ ಸಂಘ ವಂದನೆ ಬೋಧಿಸಿದರು.

ವಿಧಾನಪರಿಷತ್ ಸದಸ್ಯ ಸಿ.ಎನ್. ಮಂಜೇಗೌಡ, ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ, ಜಿಲ್ಲಾ ಪಂಚಾಯಿತಿ ಸಿಇಒ ಎಸ್.ಯುಕೇಶ್ ಕುಮಾರ್, ಮಹಾನಗರ ಪಾಲಿಕೆ ಆಯುಕ್ತ ಶೇಖ್‌ ತನ್ವೀರ್‌ ಆಸೀಫ್‌, ನಗರ ಪೊಲೀಸ್ ಕಮಿಷನರ್‌ ಸೀಮಾ ಲಾಟ್ಕರ್, ಮೈಸೂರು ವಿಶ್ವವಿದ್ಯಾಲಯದ ಕುಲಸಚಿವೆ ಎಂ.ಕೆ. ಸವಿತಾ, ಡಿಸಿಪಿ ಬಿಂದುಮಣಿ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಬಿ.ರಂಗೇಗೌಡ, ಸಹಾಯಕ ನಿರ್ದೇಶಕ ಜನಾರ್ಧನ್, ಮುಖಂಡರಾದ ಅಶೋಕಪುರಂ ರಾಜು, ಅಹಿಂದ ಜವರಪ್ಪ ಮೊದಲಾದವರು ಪಾಲ್ಗೊಂಡಿದ್ದರು.

ಅಶೋಕಪುರಂನ ಡಾ.ಬಿ.ಆರ್.ಅಂಬೇಡ್ಕರ್ ಉದ್ಯಾನದಲ್ಲಿ ಮಾಜಿ ಶಾಸಕ ಎಂ.ಕೆ. ಸೋಮಶೇಖರ್‌ ನೇತೃತ್ವದಲ್ಲಿ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು. ದೊಡ್ಡಗರಡಿ ಅಧ್ಯಕ್ಷ ಜೋಗಿ ಮಹೇಶ್ ದೇವರಾಜ ಅರಸು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶ್ರೀಧರ್ ರಾಜು ಪಟಾಕಿ ಮಂಜುನಾಥ್ ಚಿಕ್ಕಗರಡಿ ಅಧ್ಯಕ್ಷ ನಾಗರಾಜು ರಾಘವೇಂದ್ರ ಕೇಶವ್ ಕೃಷ್ಣಪ್ಪ ಆಶ್ರಯ ಸಮಿತಿ ಸದಸ್ಯರಾದ ಗುಣಶೇಖರ್ ಮಹ್ಮದ್ ಫಾರೂಖ್ ರವಿ ಉಪಸ್ಥಿತರಿದ್ದರು
ಮೈಸೂರಿನ ಪುರಭವನದ ಆವರಣದಲ್ಲಿ ಅಂಬೇಡ್ಕರ್‌ ಪ್ರತಿಮೆಗೆ ದಸಂಸ (ಎನ್. ಮೂರ್ತಿ ಸ್ಥಾಪಿತ) ಜಿಲ್ಲಾ ಸಮಿತಿಯಿಂದ ಮಾಲಾಪಣೆ ಮಾಡಲಾಯಿತು. ಅಧ್ಯಕ್ಷ ಶಂಕರ್ ದಾಸಪ್ಪ ಮಹದೇವಸ್ವಾಮಿ ರಾಜು ಮಂಜುಳಾ ಮಾದೇಶ್ ರಾಜು ಹನುಮಂತು ಪಾಲ್ಗೊಂಡಿದ್ದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.