ADVERTISEMENT

ಮೈಸೂರು: ಮಾದಗಳ್ಳಿ ಕೆರೆಗೆ ಒತ್ತುವರಿ ಇರಿತ!

​ಪ್ರಜಾವಾಣಿ ವಾರ್ತೆ
Published 29 ಮೇ 2025, 7:13 IST
Last Updated 29 ಮೇ 2025, 7:13 IST
ಮೈಸೂರಿನ ಮಾದಗಳ್ಳಿ ಕೆರೆಯ ಸುಂದರ ನೋಟ –‍ಪ್ರಜಾವಾಣಿ ಚಿತ್ರಗಳು: ಅನೂಪ್‌ ರಾಘ ಟಿ.
ಮೈಸೂರಿನ ಮಾದಗಳ್ಳಿ ಕೆರೆಯ ಸುಂದರ ನೋಟ –‍ಪ್ರಜಾವಾಣಿ ಚಿತ್ರಗಳು: ಅನೂಪ್‌ ರಾಘ ಟಿ.   

ಮೈಸೂರು: ಮಾದಗಳ್ಳಿ ದೊಡ್ಡಕೆರೆಯಲ್ಲಿ ಕನ್ನಂಬಾಡಿ ಅಣೆಕಟ್ಟೆಗಿಂತಲೂ ಹಳೆಯದಾದ 150 ವರ್ಷದ ಸ್ಲ್ಯೂಸ್‌ ಗೇಟ್‌ಗಳಿರುವ (ತೂಬು) ‘ಅಣೆಕಟ್ಟೆ’ ಇದೆ. ಈ ಅಣೆಕಟ್ಟೆಯಿಂದಲೇ ‘ಪೂರ್ಣಯ್ಯ ನಾಲೆ’ಗೆ ನೀರು ಹರಿಯುತ್ತದೆ. ಪಾರಂಪರಿಕ ಮಹತ್ವವಿರುವ ಕೆರೆಗೆ ಒತ್ತುವರಿ ‘ಇರಿತ’ ಬೀಳುತ್ತಿದೆ.

ಸಾಹುಕಾರ್‌ಹುಂಡಿ ಗ್ರಾಮ ವ್ಯಾಪ್ತಿಗೆ ಸೇರಿದ ಕೆರೆಗೆ ಹುಯಿಲಾಳು ಕೆರೆಯಿಂದ ಪೂರ್ಣಯ್ಯ ನಾಲೆ ಮೂಲಕ ನೀರ ಹರಿವಿತ್ತು. ನಾಲೆ ಮೇಲೆಯೇ ರಸ್ತೆಯನ್ನು ಮಾಡಿ ಹರಿವು ಬರದಂತೆ ಮಾಡಿರುವುದು ಆಡಳಿತ ವ್ಯವಸ್ಥೆಯ ತೀವ್ರ ನಿರ್ಲಕ್ಷ್ಯಕ್ಕೆ ಹಿಡಿದ ಕನ್ನಡಿ. 

ಕೆರೆಯ ಒಂದು ಭಾಗದಲ್ಲಿ ಸ್ಲ್ಯೂಸ್‌ ಗೇಟ್‌ಗಳಿದ್ದರೆ, ಇನ್ನೊಂದೆಡೆ ಸಾವಿರ ವರ್ಷಕ್ಕೂ ಹಳೆಯದಾದ ಕೋಡಿ ಕಟ್ಟೆಯಿದೆ. ಉಳಿದ ಕೆರೆಗಳಿಂತ ಪಾರಂಪರಿಕ ಮಹತ್ವ ಈ ಕೆರೆಗಿದ್ದು, ಜೀವವೈವಿಧ್ಯದ ಪಾತ್ರೆ.

ADVERTISEMENT

ಹಾವಿನ ಜಡೆ ಹಾಕಿದ ಬಾಲೆ: ಗೂಗಲ್ ನಕ್ಷೆಯಲ್ಲಿ ಮಾದಗಳ್ಳಿ ಕೆರೆಯು ಹಾವಿನ ಜಡೆ ಹಾಕಿದ ಬಾಲೆಯಂತೆ ಕಾಣುತ್ತದೆ. ಕೆರೆ ವೀಕ್ಷಣೆ ಬಂದರೆ ಮಾದಗಳ್ಳಿ ಕೆರೆಯ ಸೌಂದರ್ಯ ಕಣ್ಣಿಗೆ ಹಬ್ಬವನ್ನುಂಟು ಮಾಡುತ್ತದೆ. ಮಧ್ಯದಲ್ಲಿರುವ ಬಿದಿರು ಮೆಳೆಗಳ ದ್ವೀಪವು ನೂರಾರು ಹಕ್ಕಿಗಳ ಆಶ್ರಯತಾಣ.

ಚಿಕ್ಕಿ ಕೊಕ್ಕಿನ ಬಾತು, ಗುಳುಮುಳುಕ ಇಲ್ಲಿಯೇ ಸಂತಾನೋತ್ಪತ್ತಿ ನಡೆಸುತ್ತವೆ. ಬಿಳಿ–ಕರಿ ಬೂಸಾ ಹಕ್ಕಿಗಳು, ಟಿಕಲ್ಸ್ ನೊಣ ಹಿಡುಕ, ಸೂಜಿ ಬಾಲದ ಬಾತು, ಇಸ್ನಾಪು, ಮರಳು ಪೀಪಿಗಳು, ಗಾಡ್‌ವಿಟ್‌ಗಳು, ಕಾಮನ್‌ಟೀಲ್‌ ಬಾತು, ಕಾಟನ್ ಟೀಲ್‌, ನಾರ್ದನ್‌ ಶೋವ್ಲರ್‌, ಮಿಂಚುಳ್ಳಿ ಹಕ್ಕಿಗಳ ಪಟ್ಟಿಯು ಈ ಕೆರೆಯಲ್ಲಿ ಬೆಳೆಯುತ್ತದೆ.

ಎಲ್ಲಿದೆ ಕೆರೆ: ಕುಕ್ಕರಹಳ್ಳಿ ಕೆರೆಯಿಂದ ಬೋಗಾದಿ ರಸ್ತೆ ಮಾರ್ಗವಾಗಿ 10 ಕಿ.ಮೀ ದೂರದಲ್ಲಿದೆ. ಕೆ.ಹೆಮ್ಮನಹಳ್ಳಿಯ ‘ಚಿಕ್ಕಕೆರೆ’ ಬಲಕ್ಕೆ ತಿರುಗಿದರೆ ಹುಯಿಲಾಳು ರಸ್ತೆಯಲ್ಲಿ ಸಾಗಬೇಕು. ಸಿಮೆಂಟ್‌ ರಸ್ತೆಯಲ್ಲಿ ಕ್ರಮಿಸಿದರೆ ಮಹಾಲಿಂಗೇಶ್ವರ ದೇವಾಲಯ ಕಾಣುತ್ತದೆ. ಅಲ್ಲಿಂದ ಬಲಕ್ಕೆ ತಿರುಗಿದರೆ ನಾಲೆಯ ಹಳೆ ಚಹರೆ ಕಾಣುತ್ತದೆ. ನಾಲೆಯ ಮೇಲೆಯೇ ರಸ್ತೆಯನ್ನು ಮಾಡಲಾಗಿದ್ದು, ಎರಡು ವರ್ಷದಲ್ಲಿ ಸಂಪೂರ್ಣ ಮುಚ್ಚಲಾಗಿದೆ. ಸ್ವಲ್ಪ ದೂರ ಕ್ರಮಿಸಿದರೆ ಪೂರ್ಣಯ್ಯ ನಾಲೆ ಏರಿ ಮೇಲೆಯೇ ಮಾದಗಳ್ಳಿ ಕೆರೆಗೆ ಸಾಗಬಹುದು. 

ಕೆರೆ ಸಮೀಪದಲ್ಲಿಯೇ ಬಡಾವಣೆಗಳು ಏಳುತ್ತಿದ್ದು, ಕೆರೆ ಕಾಣಲೆಂದು ಒಡಲಿನಲ್ಲಿದ್ದ ಶ್ರೀಗಂಧ ಸೇರಿದಂತೆ ಹಲವು ಮರಗಳನ್ನು ಕಡಿಯಲಾಗಿದೆ. ಬಿದಿರ ಮೆಳೆಗಳನ್ನು ನಾಶ ಮಾಡಲಾಗಿದೆ. ಎರಡು ವರ್ಷದಲ್ಲಿದ್ದ ಸೌಂದರ್ಯ ಮಸುಕಾಗುತ್ತಿದೆ.

ಕೆರೆಯಲ್ಲಿನ ಶ್ರೀಗಂಧದ ಮರ ಕಡಿಯಲಾಗಿದೆ
ನಾಲೆ ಮುಚ್ಚಿ ರಸ್ತೆ ಮಾಡಿರುವುದು

ಸುಸ್ಥಿತಿಯಲ್ಲಿರುವ ಅಣೆಕಟ್ಟೆ 

ಕ್ರಿ.ಶ.1878–79ರ ಅವಧಿಯಲ್ಲಿ ಪೂರ್ಣಯ್ಯ ನಾಲೆಗೆ ನಿರ್ಮಿಸಲಾದ ಈ ಕೆರೆಯ ಗೇಟ್‌ಗಳು ಮೈಸೂರಿನ ಪಾರಂಪರಿಕ ಕೊಂಡಿ. 30 ಅಡಿ ಅಗಲ 20 ಅಡಿ ಎತ್ತರದ ನಾಲೆಯ ಕ್ರಸ್ಟ್‌ ಗೇಟ್‌ಗಳಲ್ಲಿ ಒಂದು ಈಗಲೂ ಸುಸ್ಥಿತಿಯಲ್ಲಿದೆ. ಮತ್ತೊಂದು ಮುರಿದು ಹೋಗಿದೆ. ಸುರ್ಕಿಗಾರೆಯಲ್ಲಿ ನಿರ್ಮಿಸಲಾದ ಅಣೆಕಟ್ಟು ಕಬ್ಬಿಣ ಹಾಗೂ ಮರದ ಹಲಗೆಗಳಿಂದ ನಿರ್ಮಿಸಲಾದ ಈ ಗೇಟ್‌ ಅನ್ನು ನಮ್ಮ ಪಾರಂಪರಿಕ ತಾಣವಾಗಿ ರಕ್ಷಿಸಬೇಕಿದೆ. 

ಕಟ್ಟೆಯ ಮೇಲೆ ಗಿಡಗಳು ಬೆಳೆದಿದ್ದರೂ ಬಿರುಕು ಮೂಡದಷ್ಟು ಸದೃಢವಾಗಿದ್ದು ಆಧುನಿಕ ಕಾಲದ ಕಟ್ಟಡದ ರಚನೆಗಳನ್ನು ಅಣಕಿಸುತ್ತದೆ. ಬಳಸಿರುವ ಮರಗಳು ಮಳೆ ಬಿಸಿಲಿಗೆ ಸವೆದಿದ್ದರೂ ಗೆದ್ದಲು ಹಿಡಿದಿಲ್ಲ. ಕಬ್ಬಿಣವು ತುಕ್ಕು ಹಿಡಿದಿಲ್ಲ. ಕಿರು ಅಣೆಕಟ್ಟೆಯ ಮಧ್ಯೆ ಒಂದು ಅಡಿಯಷ್ಟು ತಿರುಗಾಡಲು ಜಾಗವೂ ಇದೆ. ಕಟ್ಟೆಯ ಸೇತುವೆಯು ಗಟ್ಟಿಯಾಗಿರುವುದು ತಾಂತ್ರಿಕತೆಗೆ ಹಿಡಿದ ಕನ್ನಡಿ. ಮಾದಗಳ್ಳಿ ಕೆರೆಯಲ್ಲಿ ಕುಕ್ಕರಹಳ್ಳಿ ಕೆರೆಗಿಂತಲೂ ಜೀವವುಕ್ಕಿಸುವ ಸಸ್ಯರಾಶಿ ನಡುಗಡ್ಡೆ ಬಿದಿರಿನ ಮೆಳೆಗಳು ಸ್ವಚ್ಛ ನೀರು ಒಂದೆಡೆ ಕಣ್ಣು ಕೋರೈಸಿದರೆ ಮತ್ತೊಂದೆಡೆ ಮೈಸೂರಿನ ಇತಿಹಾಸದ ಮೈಲಿಗಲ್ಲಿನಂತೆ ಕಟ್ಟೆಯು ಕಾಣುತ್ತದೆ. ವೇದಾವತಿಗೆ ನಿರ್ಮಿಸಲಾದ ಮಾರಿಕಣಿವೆ ಜಲಾಶಯಕ್ಕಿಂತಲೂ ಈ ಮಾದಗಳ್ಳಿ ಕೆರೆಯ ಪೂರ್ಣಯ್ಯ ನಾಲೆ ತೂಬಿನ ಬಾಗಿಲು 20 ವರ್ಷ ಹಳೆಯದು.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.