ADVERTISEMENT

‘ಮಹಾರಾಜ ಟ್ರೋಫಿ’ಗೆ ಮೈಸೂರು ಸಜ್ಜು

ಆ.11ರಿಂದ 28ರವರೆಗೆ ಪಂದ್ಯಾಟ l 3 ವರ್ಷದ ನಂತರ ಸಾಂಸ್ಕೃತಿಕ ನಗರಿಗೆ ಟೂರ್ನಿ

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2025, 23:21 IST
Last Updated 7 ಆಗಸ್ಟ್ 2025, 23:21 IST
   

ಮೈಸೂರು: ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆಯು ‘ಮಹಾರಾಜ ಟ್ರೋಫಿ ಟ್ವೆಂಟಿ–20 ಕ್ರಿಕೆಟ್‌ ಟೂರ್ನಿ’ಯನ್ನು ನಗರದ ‘ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌ ಕ್ರೀಡಾಂಗಣ’ದಲ್ಲಿ ಆಯೋಜಿಸಿದ್ದು, ಆ.11ರಿಂದ 28ರವರೆಗೆ ನಡೆಯಲಿದೆ. 

ಕಳೆದ ಬಾರಿಯ ಚಾಂಪಿಯನ್ಸ್‌ ಆತಿಥೇಯ ಮೈಸೂರು ವಾರಿಯರ್ಸ್‌ ವಿರುದ್ಧ ಬೆಂಗಳೂರು ಬ್ಲಾಸ್ಟರ್ಸ್‌ ಹಾಗೂ ಮಂಗಳೂರು ಡ್ರಾಗನ್ಸ್ ವಿರುದ್ಧ ಗುಲ್ಬರ್ಗಾ ಮಿಸ್ಟಿಕ್ಸ್ ನಡುವೆ ಉದ್ಘಾಟನಾ ದಿನದ ಪಂದ್ಯಗಳು ನಡೆಯಲಿದೆ.

2022ರಲ್ಲಿ ಮೊದಲ ಹಂತದ 14 ಪಂದ್ಯಗಳು ಇಲ್ಲಿಯೇ ನಡೆದಿದ್ದವು. ಮೂರು ವರ್ಷಗಳ  ನಂತರ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಿಂದ ಸಾಂಸ್ಕೃತಿಕ ನಗರಿಗೆ ಟೂರ್ನಿ ಸ್ಥಳಾಂತರಗೊಂಡಿದೆ. 30 ಲೀಗ್, ಕ್ವಾಲಿಫೈಯರ್-1, ಎಲಿಮಿನೇಟರ್, ಕ್ವಾಲಿಫೈಯರ್-2, ಫೈನಲ್ ಸೇರಿದಂತೆ ಒಟ್ಟು 34 ಪಂದ್ಯಗಳು ನಡೆಯಲಿವೆ. 

ADVERTISEMENT

ಪ್ರಸಿದ್ಧ ಕೃಷ್ಣ, ಕರುಣ್ ನಾಯರ್, ಮಯಾಂಕ್ ಅಗರವಾಲ್‌, ದೇವದತ್ತ ಪಡಿಕ್ಕಲ್, ಅಭಿನವ್ ಮನೋಹರ್, ಶ್ರೇಯಸ್‌ ಗೋಪಾಲ್, ಮನೀಷ್‌ ಪಾಂಡೆ ಸೇರಿ ತಾರಾ ಕ್ರಿಕೆಟಿಗರು ಆಡುತ್ತಿದ್ದಾರೆ.   

‘ಟೂರ್ನಿ ಆಯೋಜನೆಗೆ ಪೊಲೀಸ್‌ ಇಲಾಖೆಯ ಅನುಮತಿಯನ್ನು ಆ.7ರಂದು ಕೆಎಸ್‌ಸಿಎ ಪಡೆದಿದೆ. ಪಂದ್ಯಗಳ ವೀಕ್ಷಣೆಗೆ ಪ್ರೇಕ್ಷಕರಿಗೆ ಅವಕಾಶವಿಲ್ಲ. ಆಟಗಾರರು, ಕೆಎಸ್‌ಸಿಎ ಮತ್ತು ತಂಡಗಳ ಸಿಬ್ಬಂದಿ ಹಾಗೂ ಮಾಧ್ಯಮದವರಿಗೆ ಮಾತ್ರ ಪ್ರವೇಶಾವಕಾಶವಿದೆ’ ಎಂದು ಸಂಸ್ಥೆಯ ವಲಯ ಸಂಚಾಲಕ ಹರಿಕೃಷ್ಣ ಕುಮಾರ್‌ ‘ಪ್ರಜಾವಾಣಿ’ಗೆ ತಿಳಿಸಿದರು. 

‘ಭದ್ರತೆಯನ್ನು ನೀಡುವಂತೆ ಪೊಲೀಸ್‌ ಇಲಾಖೆಗೆ ಪತ್ರ ಬರೆಯಲಾಗಿತ್ತು. ಗುರುವಾರವಷ್ಟೇ ಅನುಮತಿ ಸಿಕ್ಕಿದೆ. ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ’ ಎಂದರು. 

ಸಿದ್ಧತೆ: ಕ್ರೀಡಾಂಗಣದ ಸುತ್ತಲೂ ಬ್ಯಾರಿಕೇಡ್‌ ಹಾಗೂ ಕಬ್ಬಿಣದ ಶೀಟ್‌ಗಳಿಂದ ತಡೆಗೋಡೆ ನಿರ್ಮಿಸಲಾಗುತ್ತಿದೆ. ಗುರುವಾರ 4 ಪಿಚ್‌ಗಳು ಹಾಗೂ ಹುಲ್ಲುಹಾಸನ್ನು ಹದಗೊಳಿಸುವ ಕಾರ್ಯದಲ್ಲಿ ಸಿಬ್ಬಂದಿ ಮಗ್ನರಾಗಿದ್ದರು. 

‘ನಿತ್ಯ ಎರಡು ಪಂದ್ಯಗಳು (ಮಧ್ಯಾಹ್ನ 3.15 ಮತ್ತು ಸಂಜೆ 7.15ಕ್ಕೆ) ನಡೆಯಲಿವೆ. ಮೈಸೂರು ವಾರಿಯರ್ಸ್, ಬೆಂಗಳೂರು ಬ್ಲಾಸ್ಟರ್ಸ್,  ಹುಬ್ಬಳ್ಳಿ ಟೈಗರ್ಸ್, ಶಿವಮೊಗ್ಗ ಲಯನ್ಸ್,  ಮಂಗಳೂರು ಡ್ರ್ಯಾಗನ್ಸ್, ಗುಲ್ಬರ್ಗಾ ಮಿಸ್ಟಿಕ್ಸ್ ತಂಡಗಳು ಭಾಗಿಯಾಗಲಿವೆ’ ಎಂದು ಹರಿಕೃಷ್ಣ ಹೇಳಿದರು.   

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.