
ಮೈಸೂರು: ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಸಂಸ್ಮರಣೆ ಅಂಗವಾಗಿ ಸರಸ್ವತಿಪುರಂ ಜೆಎಸ್ಎಸ್ ಮಹಿಳಾ ಕಾಲೇಜಿನಲ್ಲಿ ಐದು ದಿನಗಳ ಕಾಲ ನಡೆದ ಸಂಗೀತ ಸಮ್ಮೇಳನವು ಶನಿವಾರ ತೆರೆಕಂಡಿತು.
ಸಮ್ಮೇಳನಾಧ್ಯಕ್ಷೆ ಟಿ.ಎಸ್. ಸತ್ಯವತಿ ಅವರಿಗೆ ಸುತ್ತೂರು ಮಠದ ಪೀಠಾಧ್ಯಕ್ಷ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ‘ಸಂಗೀತ ವಿದ್ಯಾನಿಧಿ’ ಪ್ರಶಸ್ತಿ ಪ್ರದಾನ ಮಾಡಿದರು.
ಟಿ.ಎಸ್.ಸತ್ಯವತಿ ಮಾತನಾಡಿ, ‘ಉದಾತ್ತ ಭಾವನೆಯಿಂದ ಇನ್ನೊಬ್ಬರನ್ನು ಕಾಣಬೇಕು ಎಂಬುದನ್ನು ಸುತ್ತೂರು ಮಠ ಕಲಿಸಲಿದೆ. ನಡೆ, ನುಡಿ ಒಂದಾಗಿರುವ ಅಪರೂಪದ ಸಂಗಮ ದೇಶಿಕೇಂದ್ರ ಸ್ವಾಮೀಜಿ. ಅವರ ಮೂಲಕ ಸಂಗೀತ ಪರಂಪರೆ ಮುಂದುವರೆಸುವ ಕೆಲಸವಾಗುತ್ತಿರುವುದು ಅಭಿನಂದನೀಯ’ ಎಂದರು.
ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ‘ಸಂಗೀತವು ಒತ್ತಡ ಹಾಗೂ ದುಃಖ ಹಿಮ್ಮೆಟ್ಟಿಸುವ ಶಕ್ತಿ ಹೊಂದಿದೆ. ಜಗತ್ತಿನ ಸಂಗೀತ, ನೃತ್ಯ, ಕಲಾ ಪರಂಪರೆಗೆ ಭಾರತದ ಕೊಡುಗೆ ಸ್ಮರಣೀಯವಾಗಿದೆ. ಆದರೆ ಮನರಂಜನಾ ಸಂಗೀತದಿಂದ, ಶಾಸ್ತ್ರೀಯ ಸಂಗೀತಕ್ಕೆ ಹಿನ್ನಡೆಯಾಗಿದ್ದು, ಅದನ್ನು ಬೆಂಬಲಿಸುವ ಕೆಲಸವಾಗಬೇಕು’ ಎಂದು ತಿಳಿಸಿದರು.
ಮಹಾರಾಜ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಸಿ.ಎ.ಶ್ರೀಧರ್ ಮಾತನಾಡಿದರು. ಸಂಗೀತ ಸಭಾವು ಹಮ್ಮಿಕೊಂಡಿದ್ದ ಸ್ಪರ್ಧೆಯ ವಿಜೇತರಿಗೆ ಟಿ.ಎಸ್.ಸತ್ಯವತಿ ಬಹುಮಾನ ವಿತರಿಸಿದರು.
ವಿಜೇತರ ವಿವರ: ವಚನ ಗಾಯನ ಸೀನಿಯರ್– ಅಂಜನಾ ಮಠಂ (ಪ್ರಥಮ), ಎ.ಜಿ.ಪುನೀತ್ (ದ್ವಿತೀಯ). ಜೂನಿಯರ್ ವಿಭಾಗ– ಚಾರ್ವಿ ಸತೀಶ್ (ಪ್ರಥಮ), ಎನ್.ವಿಧಾತ್ರಿ (ದ್ವಿತೀಯ), ಶಾಸ್ತ್ರೀಯ ಸಂಗೀತ ಸೀನಿಯರ್ ವಿಭಾಗದಲ್ಲಿ ಅಂಜನಾ ಮಠಂ (ಪ್ರಥಮ), ಅನಘಾ ಭಾರಧ್ವಾಜ್ (ದ್ವಿತೀಯ), ಜೂನಿಯರ್ ವಿಭಾಗ– ಲಲಿತ ಶ್ರೀರಾಮ್ (ಪ್ರಥಮ), ಶ್ರೀಹಾನ್ ಸುಹಾಸ್ ಕರ್ವೆ (ದ್ವಿತೀಯ), ಶಾಸ್ತ್ರೀಯ ವಾದ್ಯ ಸಂಗೀತ ವಯೋಲಿನ್ ಸೀನಿಯರ್– ಎ.ಜಿ.ಪುನೀತ್ (ಪ್ರಥಮ), ಪಿ.ಎಸ್.ಶೃತ (ದ್ವಿತೀಯ), ಜೂನಿಯರ್ – ಲಲಿತ ಶ್ರೀರಾಮ್ (ಪ್ರಥಮ), ವಿ.ಸಮರ್ಥ್ (ದ್ವಿತೀಯ), ಜೂನಿಯರ್ ವಿಭಾಗ: ವೀಣೆ– ಶ್ರೀರಂಗ ವಿ.ಚಕ್ರವರ್ತಿ (ಪ್ರಥಮ), ಎಂ.ಬಿ.ರಾಘವಿ (ದ್ವಿತೀಯ), ಕೊಳಲು– ಬಿ.ಓಂಕಾರ್ (ಪ್ರಥಮ), ಮೃದಂಗ– ಕೆ.ಪ್ರಹಲ್ಲಾದ್ ದಾಸ್ (ಪ್ರಥಮ), ನಿರುಪಮ ದಿವಾಕರ್ (ದ್ವಿತೀಯ) ಬಹುಮಾನ ಪಡೆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.