
ಮೈಸೂರು: ‘ನಿರ್ಮಾಣ ಕ್ಷೇತ್ರವು ಕೃಷಿ ನಂತರದಲ್ಲಿ ಅತಿ ಹೆಚ್ಚು ಉದ್ಯೋಗ ಸೃಷ್ಟಿಸುವ ಕ್ಷೇತ್ರವಾಗಿದೆ. ಇಲ್ಲಿನ ಸಮಸ್ಯೆಗಳ ಕುರಿತು ಗಮನಕ್ಕೆ ತಂದಲ್ಲಿ ತ್ವರಿತವಾಗಿ ಅದನ್ನು ಬಗೆಹರಿಸುತ್ತೇವೆ’ ಎಂದು ಕರ್ನಾಟಕ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರದ (ರೇರಾ) ಅಧ್ಯಕ್ಷ ರಾಕೇಶ್ ಸಿಂಗ್ ತಿಳಿಸಿದರು.
ರೇರಾ, ಕ್ರೆಡಾಯ್ ಮೈಸೂರು ಸಹಯೋಗದಲ್ಲಿ ಶನಿವಾರ ವಿದ್ಯಾರಣ್ಯಪುರಂನ ಎಂಬಿಸಿಟಿ ಹಾಲ್ನಲ್ಲಿ ಆಯೋಜಿಸಿದ್ದ ರೇರಾ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ದೇಶದ ಅಭಿವೃದ್ಧಿಗೆ ನಿರ್ಮಾಣ ಕ್ಷೇತ್ರವೇ ಆಧಾರವಾಗಿದೆ. ಪ್ರತಿ ಜಿಡಿಪಿಗೆ ಶೇ 12-13ರಷ್ಟು ಕೊಡುಗೆ ನೀಡುತ್ತಿದ್ದು, ದೇಶದ ಆರ್ಥಿಕತೆಯ ಬೆನ್ನೆಲುಬಾಗಿದೆ’ ಎಂದರು.
‘ಪ್ರತಿ ಕ್ಷೇತ್ರದಲ್ಲೂ ದುಡಿಯುವವರು ಮುಂದಿನ ಪೀಳಿಗೆಗೆ ಉತ್ತಮ ಸಮಾಜ, ಪೋಷಕರನ್ನು ಬಿಟ್ಟು ಹೋಗಬೇಕಿದೆ. ಅದಕ್ಕಾಗಿ ನಾವು ನಮ್ಮ ಕೆಲಸಗಳನ್ನು ಎಷ್ಟು ಪ್ರಾಮಾಣಿಕವಾಗಿ ಮಾಡುತ್ತಿದ್ದೇವೆ ಎಂದು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ’ ಎಂದು ಹೇಳಿದರು.
ಜಿಲ್ಲಾಧಿಕಾರಿ ಲಕ್ಷ್ಮೀಕಾಂತರೆಡ್ಡಿ, ‘ಬಡಾವಣೆಗಳ ಹಸ್ತಾಂತರ, ಇ-ಖಾತೆ, ಮೈಸೂರು ನಗರಪಾಲಿಕೆಯನ್ನು ಗ್ರೇಡ್-1 ಪಾಲಿಕೆಯಾಗಿ ಮೇಲ್ದರ್ಜೆಗೆ ಏರಿಸುವ ಪ್ರಮುಖ ಮೂರು ನಿರ್ಧಾರಗಳಿಂದ ಜಿಲ್ಲೆಯಲ್ಲಿ ರಿಯಲ್ ಎಸ್ಟೇಟ್ ಉದ್ಯಮಕ್ಕೆ ಒಂದಿಷ್ಟು ಹಿನ್ನಡೆ ಆಗಿದೆ. ಈ ನಡುವೆಯೂ ಖಾಸಗಿ ಸಂಸ್ಥೆಗಳು ಪ್ರತಿ ವರ್ಷ 10– 15 ಸಾವಿರ ನಿವೇಶನಗಳನ್ನು ಅಭಿವೃದ್ಧಿಪಡಿಸುತ್ತಿರುವುದು ಅಚ್ಚರಿಯ ಸಂಗತಿ’ ಎಂದರು.
‘25 ವರ್ಷಗಳ ಹಿಂದೆ ಅಭಿವೃದ್ಧಿಪಡಿಸಿದ ಬಡಾವಣೆಗಳು ಹಸ್ತಾಂತರಗೊಳ್ಳದ ಕಾರಣಕ್ಕೆ ನಾಗರಿಕರಿಗೆ ಮೂಲಸೌಕರ್ಯಗಳನ್ನು ನೀಡಲು ಸಾಧ್ಯವಾಗಿರಲಿಲ್ಲ. ಮುಡಾ ಸುಪರ್ದಿಯಲ್ಲಿದ್ದ 1 ಸಾವಿರಕ್ಕೂ ಹೆಚ್ಚು ಬಡಾವಣೆಗಳ 1 ಲಕ್ಷಕ್ಕೂ ಹೆಚ್ಚು ನಿವೇಶನಗಳ ಖಾತೆಗಳನ್ನು ಸ್ಥಳೀಯ ಸಂಸ್ಥೆಗಳಿಗೆ ವರ್ಗಾವಣೆ ಮಾಡಲಾಗಿದೆ. ಇದರಿಂದ ಉದ್ಯಮಕ್ಕೆ ಅನುಕೂಲ ಆಗಿದೆ’ ಎಂದು ವಿವರಿಸಿದರು.
ಪಾಲಿಕೆ ಆಯುಕ್ತ ಶೇಖ್ ತನ್ವೀರ್ ಆಸಿಫ್, ಕ್ರೆಡಾಯ್ ಮೈಸೂರು ಅಧ್ಯಕ್ಷ ಹರೀಶ್ ಶೆಣೈ, ಕಾರ್ಯದರ್ಶಿ ನಾಗರಾಜ್ ವಿ. ಭೈರಿ ಇದ್ದರು. ರೇರಾ ಕಾಯ್ದೆ ಕುರಿತು ರೇರಾ ಕಾರ್ಯದರ್ಶಿ ಎಚ್.ಆರ್. ಶಿವಕುಮಾರ್ ವಿಷಯ ಮಂಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.