
ಜಾಲಹಳ್ಳಿ: ಪಟ್ಟಣದ ಆರಾಧ್ಯ ದೈವ ಲಕ್ಷ್ಮಿ ರಂಗನಾಥ ಸ್ವಾಮಿ ದೇವಸ್ಥಾನ ಆವರಣದಲ್ಲಿ ಸೋಮವಾರ ಜರುಗಿದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ 55 ನವ ಜೋಡಿಗಳು ಸತಿಪತಿಗಳಾದರು.
ಪಟ್ಟಣದ ಜಯ ಶಾಂತಲಿಂಗೇಶ್ವರ ಸ್ವಾಮೀಜಿ ಕಾರ್ಯಕ್ರಮ ಸಾನ್ನಿಧ್ಯ ವಹಿಸಿ ಮಾತನಾಡಿ, ‘ದೇವಸ್ಥಾನದ ಆಡಳಿತ ಮಂಡಳಿ ಪ್ರತಿ ವರ್ಷ ಸಾಮೂಹಿಕ ವಿವಾಹ ಹಮ್ಮಿಕೊಳ್ಳುವ ಮೂಲಕ ಎಲ್ಲ ಜಾತಿ, ಧರ್ಮದವರನ್ನು ಒಗ್ಗೂಡಿಸುವ ಕೆಲಸ ಮಾಡುತ್ತಿದೆ. ತುಂಬಾ ಅಚ್ಚುಕಟ್ಟಾಗಿ ಸಾಮೂಹಿಕ ವಿವಾಹ ಜರುಗಿದೆ’ ಎಂದರು.
‘ಇತ್ತೀಚಿನ ದಿನಗಳಲ್ಲಿ ಮಠ–ಮಾನ್ಯಗಳಲ್ಲಿ ನಡೆಯುತ್ತಿರುವ ಧಾರ್ಮಿಕ ಕ್ರಿಯಾ, ಕಪಲಾಗಳ ಗುಣಮಟ್ಟ ಕುಸಿಯುತ್ತಿದೆ. ಅಚಾರ, ವಿಚಾರಗಳು ನಶಿಸಿ ಹೋಗುತ್ತಿರುವ ಸಂದರ್ಭದಲ್ಲಿ ಇಂತಹ ಪುಣ್ಯದ ಕೆಲಸ ಮಾಡುತ್ತಿರುವುದು ಒಳ್ಳೆಯದು’ ಎಂದು ಹೇಳಿದರು.
‘ರೈತರಿಗೆ ಒಳ್ಳೆಯ ಸೌಲಭ್ಯ ನೀಡಿ ಅವನು ಬೆಳೆದ ಪ್ರತಿ ಬೆಳೆಗೆ ವೈಜ್ಞಾನಿಕ ಬೆಲೆ ನೀಡಿದಾಗಲೇ ಆಳುವಂತಹ ಸರ್ಕಾರಗಳಿಗೆ ಗೌರವ ಬರುತ್ತದೆ. ಅದೂ ಬಿಟ್ಟು ಸರ್ಕಾರಿ ಕಾರ್ಯಕ್ರಮಗಳಲ್ಲಿ ರೈತ ಗೀತೆ ನುಡಿಸಿ ಗೌರವ ನೀಡಿದರೆ ಸಾಲದು’ ಎಂದರು.
ಸುರಪುರ ಮಾಜಿ ಶಾಸಕ ನರಸಿಂಹ ನಾಯಕ(ರಾಜುಗೌಡ) ಮಾತನಾಡಿ, ‘ಸಮಿತಿಯ ಸದಸ್ಯರು ಊರಿನ ಎಲ್ಲ ಜನರ ವಿಶ್ವಾಸ ಪಡೆದು ಕಳೆದ 11 ವರ್ಷಗಳಿಂದ ಸಾಮೂಹಿಕ ಮದುವೆ ಮಾಡುತ್ತಿದ್ದಾರೆ. ಅಲ್ಲಿಂದ ತಾವು ವಧು, ವರರಿಗೆ ಬಟ್ಟೆ ವ್ಯವಸ್ಥೆ ಮಾಡುತ್ತಿದ್ದು, ನನ್ನ ಉಸಿರು ಇರುವವರೆಗೂ ಈ ಕೆಲಸ ಮುಂದುವರಿಸುತ್ತೇನೆ’ ಎಂದು ಹೇಳಿದರು.
ಗೋವಿಂದ ಸೇವಾ ಸಮಿತಿಯ ಅಧ್ಯಕ್ಷ ಚಂದ್ರಕಾಂತ ಚಿಕ್ಕಲ್, ಕಾರ್ಯದರ್ಶಿ ಮುದ್ದರಂಗಪ್ಪ ನಾಯಕ ಕ್ಯಾದಗೇರಿ ನೇತೃತ್ವದಲ್ಲಿ ಜರುಗಿತು.
ವೀರಗೋಟ ಗ್ರಾಮದ ಅಡವಿಲಿಂಗ ಸ್ವಾಮೀಜಿ, ಮುಂಡರಗಿ ಶಿವರಾಯ ದೇವಸ್ಥಾನದ ಪೂಜಾರಿಗಳು, ಮಂದಕಲ್ ಮಠದ ಬಸವರಾಜ ಗುರು ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ತಾಲ್ಲೂಕು ಪಂಚಾಯಿತಿ ಇಒ ಬಸವರಾಜ ಹಟ್ಟಿ, ಸರ್ಕಾರಿ ಸಮುದಾಯ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಆರ್.ಎಸ್. ಹುಲಿಮನಿ, ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ನರಸಪ್ಪ, ಮುಖಂಡರಾದ ಆದನಗೌಡ ಪಾಟೀಲ, ವೀರಣ್ಣ ಪಾಣಿ, ಶಂಕರಗೌಡ ಪಾಟೀಲ, ಗೌತಮಿ ಜಿ.ನಾಯಕ, ಈರಣ್ಣ ಬಳೆ, ಬಸವರಾಜ ಎಚ್.ಪಿ, ವೇಣುಗೋಪಾಲ್ ನಾಯಕ, ಗೋವಿಂದರಾಜ ನಾಯಕ, ಅಮರೇಶ ಪಾಟೀಲ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.