
ರಾಯಚೂರು: ‘ಜಿಲ್ಲೆಯ ಬಳಗಾನೂರು ಪಟ್ಟಣ ಪಂಚಾಯಿತಿ ಅಧ್ಯಕ್ಷ ಶಿವುಕುಮಾರ, ಅವರ ಸಹೋದರ ಮೂಕಪ್ಪ ಹಾಗೂ ಮುಖ್ಯಾಧಿಕಾರಿ ಲಂಚಕ್ಕಾಗಿ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಕೂಡಲೇ ಕ್ರಿಮಿನಲ್ ಕೇಸ್ ದಾಖಲಿಸಿ ಸದಸ್ಯತ್ವದಿಂದ ಅನರ್ಹಗೊಳಿಸಬೇಕು’ ಎಂದು ಅಂತರಾಷ್ಟ್ರೀಯ ಮಾನವ ಹಕ್ಕುಗಳ ಮತ್ತು ಸಾಮಾಜಿಕ ನ್ಯಾಯ ಸಂಸ್ಥೆಯ ಜಿಲ್ಲಾ ಅಧ್ಯಕ್ಷ ಎಸ್.ನಜೀರ್ ಆಗ್ರಹಿಸಿದರು.
ಶುಕ್ರವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪಟ್ಟಣ ಪಂಚಾಯಿತಿಯಲ್ಲಿ ಫಾರಂ-3 ಖಾತಾ ಪಡೆಯಲು ಖಾಜಾಸಾಬ್ ಅರ್ಜಿ ಹಾಕಿದ್ದರು. ಫಾರಂ ನೀಡಲು ಬಳಗಾನೂರು ಪಟ್ಟಣ ಪಂಚಾಯಿತಿ ಅಧ್ಯಕ್ಷ ಶಿವುಕುಮಾರ ಹಾಗೂ ಆತನ ಸಹೋದರ ಮೂಕಪ್ಪ ಪ್ರತಿ ಎಕರೆಗೆ ₹1.20 ಲಕ್ಷದಂತೆ ಏಳು ಎಕರೆಗೆ ₹7.20 ಲಕ್ಷ ಹಣ ನೀಡುವಂತೆ ಬೇಡಿಕೆಯಿಟ್ಟಿದ್ದರು. ₹5 ಲಕ್ಷ ಖಾಜಾಸಾಬ್ ಅವರು ಮೂಕಪ್ಪ ಅವರಿಗೆ ನೀಡಿದ್ದಾರೆ. ಇನ್ನೂ ₹5 ಲಕ್ಷ ಕೊಡುವಂತೆ ಬೇಡಿಕೆಯಿಟ್ಟಿದ್ದಾರೆ’ ಎಂದು ಆರೋಪಿಸಿದ ಅವರು, ‘ಹಣ ನೀಡಲು ನಿರಾಕರಿಸಿದ್ದರಿಂದ ಮಾರಣಾಂತಿಕ ಹಲ್ಲೆ ನಡೆಸಿ ಜಾತಿ ನಿಂದನೆ ಕೇಸ್ ದಾಖಲಿಸಿದ್ದಾರೆ’ ಎಂದು ದೂರಿದರು.
‘ಮುಖ್ಯಾಧಿಕಾರಿ ಸತ್ಯನಾರಾಯಣ ಸಹ ಕೈ ಜೋಡಿಸಿದ್ದಾರೆ. ಕೂಡಲೇ ಸಂಬಂಧಿಸಿದವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಿ ಸದಸ್ಯತ್ವ ಅನರ್ಹಗೊಳಿಸಬೇಕು. ಈ ಕುರಿತು ಸಾಕ್ಷ್ಯಾಧಾರಗಳೊಂದಿಗೆ ಲೋಕಾಯುಕ್ತರಿಗೆ ದೂರು ನೀಡಲಾಗುವುದು’ ಎಂದು ಹೇಳಿದರು.
ಕೆಆರ್ಎಸ್ ಪಕ್ಷದ ಮುಖಂಡ ಬಸವರಾಜ ಮಾತನಾಡಿ ಕ್ರಮಕ್ಕೆ ಆಗ್ರಹಿಸಿದರು.
ಕರ್ನಾಟಕ ರಾಷ್ಟ್ರ ಸಮಿತಿ ಜಿಲ್ಲಾ ಅಧ್ಯಕ್ಷ ಕಂದೂರು ರಾಘವೇಂದ್ರ, ವಿಶ್ವನಾಥ ನಾಯ್ಡು, ಬಸವರಾಜ ಮಸ್ತಿ, ಶರಣಬಸವ ಕವಿತಾಳ, ರಾಮಸ್ವಾಮಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.