
ಪ್ರಜಾವಾಣಿ ವಾರ್ತೆ
ರಾಯಚೂರು: ಕೇಂದ್ರ ವಾಣಿಜ್ಯ ಇಲಾಖೆಯ ಜಂಟಿ ಕಾರ್ಯದರ್ಶಿ ಐಶ್ವರ್ಯ ಸಿಂಗ್ ಅವರು ಗುರುವಾರ ರಾಯಚೂರು ಜಿಲ್ಲೆಯ ಮನ್ಸಲಾಪುರ, ಸಿರವಾರ ತಾಲ್ಲೂಕಿನ ಜಕ್ಕಲದಿನ್ನಿ, ಗ್ರಾಮಕ್ಕೆ ಭೇಟಿ ನೀಡಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಅನುಷ್ಠಾನದ ಕುರಿತು ಸ್ಥಳ ಪರಿವೀಕ್ಷಣೆ ಮಾಡಿದರು.
ಗ್ರಾಮ ಪಂಚಾಯಿತಿ ಪ್ರತಿನಿಧಿಗಳು, ಗ್ರಾಮ ನೀರು ಮತ್ತು ನೈರ್ಮಲ್ಯ ಸಮಿತಿ ಸದಸ್ಯರೊಂದಿಗೆ ಕುಡಿಯುವ ನೀರಿನ ಯೋಜನೆಯ ಅನುಷ್ಠಾನ ಕುರಿತು ಸಮಾಲೋಚನೆ ನಡೆಸಿದರು.
ರಾಯಚೂರು ತಾಲ್ಲೂಕಿನ ಜೇಗರಕಲ್, ಮನ್ಸಲಾಪುರ ಗ್ರಾಮಗಳಲ್ಲಿ ಅನೇಕ ದೂರುಗಳು ಕೇಳಿ ಬಂದವು. ಗ್ರಾಮಸ್ಥರು ಕಾಮಗಾರಿಯಲ್ಲಿನ ಲೋಪ ಮತ್ತಿತರ ಕಾಮಗಾರಿಗಳ ಬಗ್ಗೆ ಅಸಮಧಾನ ಹೊರ ಹಾಕಿದರು.
ಮನ್ಸಲಾಪುರ ಗ್ರಾಮದಲ್ಲಿ ಜಲ ಜೀವನ ಮಿಷನ್ ಅಡಿ ಮನೆಗಳಿಗೆ ಅಳವಡಿಸಿದ ಮೀಟರ್ ಹಾಳಾಗಿರುವುದು, ವರ್ಷ ಕಳೆದರೂ ನೀರು ಬಾರದೆ ಇರುವುದು ಹಾಗೂ ಅಶುದ್ಧ ನೀರು ಪೂರೈಕೆ ಮಾಡುತ್ತಿರುವ ದೂರುಗಳು ಬಂದವು. ಐಶ್ವರ್ಯ ಅವರು ಸ್ಥಳದಲ್ಲಿ ಪರಿಶೀಲನೆ ನಡೆಸಿದಾಗ ಕೆಸರು ನೀರು ಬಂದಿತು. ಹೀಗಾಗಿ ಅವರು ಅಧಿಕಾರಿಗಳನ್ನು ಸ್ಥಳದಲ್ಲೇ ತರಾಟೆಗೆ ತೆಗೆದುಕೊಂಡರು.
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಅಧೀಕ್ಷಕ ಎಂಜಿನಿಯರ್ ಸುನಂದಾ, ರಾಜ್ಯ ಕಚೇರಿಯ ಧನ್ಯಾ, ಕಾರ್ಯಪಾಲಕ ಎಂಜಿನಿಯರ್ ನಾಗೇಶ ಮಟಮಾರಿ, ಲೇಸನ್ ಅಧಿಕಾರಿ ಮೇನಕಾ ಪಾಟೀಲ, ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿ ಚಂದ್ರಶೇಖರ ಪವಾರ, ಎಇಇ ಪಿಬಿ ಚವ್ಹಾಣ, ಜಿಲ್ಲಾ ಯೋಜನಾ ವ್ಯವಸ್ಥಾಪಕ ಬಸವರಾಜ ಗಲಗಿನ್, ವಾಟರ್ ಏಡ್ ಸಂಸ್ಥೆಯ ಶೋಭಾ ಗ್ರಾಮಸ್ಥರು, ಗುತ್ತಿಗೆದಾರರು, ತಾಂತ್ರಿಕ ಶಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.