
ರಾಯಚೂರು: ‘ಬಿರುಗಾಳಿ ಸಹಿತ ಆಲಿಕಲ್ಲು ಮಳೆಯಿಂದಾಗಿ ಅಪಾರ ಬೆಳೆ ನಷ್ಟ ಸಂಭವಿಸಿದೆ. ಸರ್ಕಾರ ತಕ್ಷಣವೇ ರೈತರಿಗೆ ಪ್ರತಿ ಎಕ್ಕರೆಗೆ ₹25 ಸಾವಿರ ಪರಿಹಾರ ನೀಡಬೇಕು’ ಎಂದು ರಾಜ್ಯ ರೈತ ಸಂಘದ ಗೌರವಾಧ್ಯಕ್ಷ ಚಾಮರಸ ಮಾಲಿಪಾಟೀಲ ಒತ್ತಾಯಿಸಿದರು.
‘ಅಕಾಲಿಕ ಮಳೆಯಿಂದಾಗಿ ಜಿಲ್ಲೆಯ ಅನೇಕ ಕಡೆ ಭತ್ತದ ಬೆಳೆ ನೆಲಕಚ್ಚಿದೆ. ಸರ್ಕಾರದ ನಿಯಮದಂತೆ ಶೇ33ರಷ್ಟು ಬೆಳೆ ನಷ್ಟವಾದರೇ ಮಾತ್ರ ಪರಿಹಾರ ನೀಡುವುದಾಗಿ ಹೇಳಲಾಗುತ್ತಿದೆ. ಆದರೆ ಅದಕ್ಕಿಂತ ಕಡಿಮೆ ನಷ್ಟವಾದ ರೈತರು ಎಲ್ಲಿಗೆ ಹೋಗಬೇಕು, ತಕ್ಷಣ ಸರ್ಕಾರ ಪರಿಹಾರದ ನಿಯಮ ಹಾಗೂ ಸರ್ವೆ ಕಾರ್ಯದ ಕ್ರಮವನ್ನೇ ಬದಲಾಯಿಸಬೇಕು’ ಎಂದು ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದರು.
‘ಮಳೆಯಿಂದಾಗಿ ಮಾನ್ವಿ, ಸಿರವಾರ, ಮಸ್ಕಿ, ಸಿಂಧನೂರು ಸೇರಿ ಇನ್ನಿತರ ಕಡೆಗಳಲ್ಲಿ ಬೆಳೆದು ನಿಂತ ಬೆಳೆ ನೆಲಕಚ್ಚಿದೆ. ಕಂದಾಯ ಅಧಿಕಾರಿಗಳು ಯಾವುದೇ ಹೋಟೆಲ್ ಹಾಗೂ ಮನೆಯಲ್ಲಿ ಕುಳಿತು ಬೆಳೆ ಸರ್ವೆ ಮಾಡದೇ ಹೊಲಗಳಿಗೆ ಭೇಟಿ ನೀಡಿ ಪ್ರಾಮಾಣಿಕವಾಗಿ ಸರ್ವೆ ಕಾರ್ಯ ಮಾಡಬೇಕು. ಎಷ್ಟು ಬೆಳೆ ನಷ್ಟವಾಗಿದೆ ಎಂದು ಸ್ಪಷ್ಟವಾಗಿ ನಮೂದಿಸಬೇಕು. ನಂತರ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಬೇಕು’ ಎಂದರು.
‘ಈಗಾಗಲೇ ಭತ್ತದ ಬೆಲೆ ಕುಸಿದು ಹೋಗಿದೆ. ರಾಜ್ಯ ಸರ್ಕಾರ ರೈತರ ಸಮಸ್ಯೆ ಬಗ್ಗೆ ಯೋಚಿಸುತ್ತಿಲ್ಲ. ಬೆಳೆ ನಷ್ಟದ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು ತುಟ್ಟಿ ಬಿಚ್ಚಿಲ್ಲ, ವಿರೋಧ ಪಕ್ಷಗಳು ರೈತರ ಸಮಸ್ಯೆ ಮಾತಾಡುತ್ತಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
‘ಒಂದೆಡೆ ಬಿಜೆಪಿಯವರು ಜನಾಕ್ರೋಶ ಯಾತ್ರೆ ನಡೆಸುತ್ತಿದ್ದಾರೆ. ಇನ್ನೊಂದೆಡೆ ರಾಜ್ಯ ಕಾಂಗ್ರೆಸ್ ನಾಯಕರು ಕೇಂದ್ರ ಸರ್ಕಾರದ ವಿರುದ್ದ ಹೋರಾಟ ಮಾಡುತ್ತಿದ್ದಾರೆ. ರೈತರು ಸಂಕಷ್ಟದಲ್ಲಿದ್ದಾರೆ. ಅವರಿಗೆ ಸರ್ಕಾರ ಮತ್ತು ಅಧಿಕಾರಿಗಳು ಸ್ಪಂದಿಸಬೇಕು. ಒಂದು ವೇಳೆ ನಿರ್ಲಕ್ಷ್ಯ ತೋರಿದರೆ ಉಗ್ರ ಹೋರಾಟ ಮಾಡಲಾಗುವುದು’ ಎಂದು ಎಚ್ಚರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಅಮರೇಶ ಆಲ್ದಾಳ,ಬೂದಯ್ಯ ಸ್ವಾಮಿ, ಲಿಂಗರೆಡ್ಡಿ, ನರಸಿಂಹಲು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.