ಸಾತನೂರು (ಕನಕಪುರ): ಕಟಾವಿಗೆ ಬಂದಿದ್ದ ಬಾಳೆತೋಟ ಮತ್ತು ಮಾವಿನ ಸಸಿಗಳನ್ನು ದ್ವೇಷದ ಕಾರಣಕ್ಕೆ ಕತ್ತರಿಸಿ ನಾಶಪಡಿಸಲಾಗಿದೆ. ತಾಲ್ಲೂಕಿನ ಸಾತನೂರು ಹೋಬಳಿ ಗೇರಳ್ಳಿ ಗ್ರಾಮದಲ್ಲಿ ಗುರುವಾರ ರಾತ್ರಿ ನಡೆದಿದೆ. ಗ್ರಾಮದ ಚಿಕ್ಕಪುಟ್ಟೇಗೌಡ ಎಂಬುವರಿಗೆ ಸೇರಿದ ತೋಟ ಇದ್ದಾಗಿದ್ದು, 5 ಎಕರೆಯಲ್ಲಿ 250 ಮಾವಿನ ಗಿಡಗಳನ್ನು ನೆಡಲಾಗಿತ್ತು. ಅದೇ ಜಮೀನಿನಲ್ಲಿ 1200 ಬಾಳೆಗಿಡಗಳನ್ನು 10 ತಿಂಗಳ ಹಿಂದೆಯಷ್ಟೇ ನೆಡಲಾಗಿತ್ತು. ಇನ್ನೊಂದು ತಿಂಗಳಲ್ಲಿ ಕಟಾವು ಮಾಡಬೇಕಿತ್ತು.
ಗುರವಾರ ರಾತ್ರಿ ತೋಟದಲ್ಲಿನ ಎಲ್ಲ ಬಾಳೆ ಗಿಡ ಹಾಗೂ ಮಾವಿನ ಸಸಿಗಳನ್ನು ಹರಿತವಾದ ಆಯುಧದಿಂದ ಕತ್ತರಿಸಲಾಗಿದೆ. ಪಕ್ಕದ ಜಮೀನಿನ ಕರಿಯಪ್ಪ ಬೆಳಿಗ್ಗೆ ಹೋದಾಗ ಈ ಘಟನೆ ಬೆಳಕಿಗೆ ಬಂದಿದೆ.
ಜಮೀನು ಮಾಲೀಕ ಚಿಕ್ಕಪುಟ್ಟೇಗೌಡ ಅವರ ಪುತ್ರ ಅನಿಲ್ ಮಾತನಾಡಿ, ಬೇಸಾಯವೇ ಇಡೀ ಕುಟುಂಬಕ್ಕೆ ಆಧಾರ. ಈಗ ದ್ವೇಷಕ್ಕೆ ತೋಟ ಬಲಿ ಆಗಿದೆ. ತಪಿಸ್ಥರಿಗೆ ಶಿಕ್ಷೆಯಾಗಬೇಕೆಂದು ಒತ್ತಾಯಿಸಿದರು.
ಬಾಳೆ ಮತ್ತು ಮಾವು ಗಿಡಗಳ ನಾಶದಿಂದ ₹15ಲಕ್ಷದಷ್ಟು ನಷ್ಟವಾಗಿದೆ. ದ್ವೇಷದ ಕಾರಣಕ್ಕೆ ಈ ಕೃತ್ಯ ಎಸಗಲಾಗಿದೆ. ತಪ್ಪಿತಸ್ಥರನ್ನು ಪತ್ತೆ ಹಚ್ಚಿ ಅವರ ವಿರುದ್ಧ ಕಠಿಣ ಕಾನೂನು ಕ್ರಮಕೈಗೊಳ್ಳಬೇಕೆಂದು ಸಾತನೂರು ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಎಸ್.ಐ ಮುರಳಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.