ಶಿವಮೊಗ್ಗ: ಇಲ್ಲಿನ ಸಹ್ಯಾದ್ರಿ ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯರು ಕೈಫೋಸಿಸ್ (ಬೆನ್ನುಮೂಳೆ ಮುಂದಕ್ಕೆ ಬಾಗಿರುವ ತೊಂದರೆ) ಸಮಸ್ಯೆ ಹೊಂದಿದ್ದ 66 ವರ್ಷದ ಪುರುಷ ರೋಗಿಗೆ ಅತ್ಯಂತ ಸಂಕೀರ್ಣ ಕೊರೋನರಿ ಆರ್ಟರಿ ಬೈಪಾಸ್ ಗ್ರಾಫ್ಟ್ (ಸಿಎಬಿಜಿ) ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಿದ್ದಾರೆ ಎಂದು ಆಸ್ಪತ್ರೆಯ ಹಿರಿಯ ಕಾರ್ಡಿಯೊಥೊರಾಸಿಕ್ ಸರ್ಜನ್ ಡಾ. ಆರ್. ಬಾಲಸುಬ್ರಮಣಿ ಹೇಳಿದರು.
ಈ ಸಮಸ್ಯೆ ಹೊಂದಿರುವವರಲ್ಲಿ ಬೆನ್ನುಮೂಳೆ ಮುಂದಕ್ಕೆ ಬಾಗಿ ವಕ್ರವಾಗಿರುತ್ತದೆ. ಹೀಗಾಗಿ ಹೃದಯ ಶಸ್ತ್ರಚಿಕಿತ್ಸೆ ಪ್ರಕ್ರಿಯೆ ಕಷ್ಟವಾಗುತ್ತದೆ. ಆದರೆ ಹಿರಿಯ ಕಾರ್ಡಿಯೊಥೊರಾಸಿಕ್ ಸರ್ಜನ್ ಡಾ. ಆರ್. ಬಾಲಸುಬ್ರಮಣಿ ನೇತೃತ್ವದ ವೈದ್ಯಕೀಯ ತಂಡವು ಅಂದಾಜು ಆರು ಗಂಟೆಗಳ ಕಾಲ ಈ ಅಪರೂಪದ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಿರ್ವಹಿಸಿದೆ. ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ರೋಗಿಯು ಗಂಭೀರ ತ್ರಿವಳಿ ನಾಳ ಸಮಸ್ಯೆಯಿಂದ ಬಳಲುತ್ತಿದ್ದರು. ಜೊತೆಗೆ ಹೈಪರ್ಟೆನ್ಷನ್ ಇತ್ತು. ಅಸ್ಥಿರ ಆಂಜೈನಾ ಮತ್ತು ಉಸಿರಾಟದ ತೊಂದರೆಗಳನ್ನೂ ಹೊಂದಿದ್ದ ಅವರ ಹೃದಯದ ಕಾರ್ಯದಕ್ಷತೆ ಕಡಿಮೆಯಾಗಿದೆ. ಡಯಾಸ್ಟೊಲಿಕ್ ಡಿಸ್ಫಂಕ್ಷನ್ ಸಮಸ್ಯೆ ಕಂಡುಬಂದಿತ್ತು. ಶಸ್ತ್ರಚಿಕಿತ್ಸೆ ಮಾಡುವುದು ಅವಶ್ಯಕವಾಗಿತ್ತು.
ಈ ಪ್ರಕರಣದಲ್ಲಿ ವೈದ್ಯರು ಮೂರು ಗ್ರಾಫ್ಟ್ಗಳನ್ನು ಬಳಸಿ ಆಫ್- ಪಂಪ್ ಸಿಎಬಿಜಿ ಶಸ್ತ್ರಚಿಕಿತ್ಸೆ ನಡೆಸಲಾಯಿತು. ಮರುದಿನ ರೋಗಿಗೆ ಎಕ್ಸ್ಟ್ಯೂಬೇಟ್ ಮಾಡಲಾಯಿತು. ನಂತರ ರೋಗಿ ನಿಧಾನಕ್ಕೆ ಚೇತರಿಸಿಕೊಂಡರು ಎಂದರು.
ಡಾ. ಶರತ್ ಪಿ. ಸಂಗನಗೌಡರ್, ಆಸ್ಪತ್ರೆ ವ್ಯವಸ್ಥಾಪಕ ನಿರ್ದೇಶಕ ವರ್ಗೀಸ್ ಪಿ. ಜಾನ್, ಮಾರ್ಕೆಟಿಂಗ್ ಮ್ಯಾನೇಜರ್ ಎಸ್.ಎನ್. ಶೈಲೇಶ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.